ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು 
ರಾಜ್ಯ

ವಾಟರ್ ಟ್ಯಾಂಕರ್ ಮಾಫಿಯಾ ಕಡಿವಾಣಕ್ಕೆ ಬಿಬಿಎಂಪಿ ಮುಂದು: ಮಾರ್ಚ್ 7ರೊಳಗೆ ನೋಂದಣಿ ಕಡ್ಡಾಯ

ಬೇಸಿಗೆಯ ಆರಂಭವಾಗಿದ್ದು, ನಗರದಲ್ಲಿ ನೀರಿನ ಅಭಾವ ಶುರುವಾಗಿದೆ. ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಬೆಂಗಳೂರಲ್ಲಿ ಟ್ಯಾಂಕರ್ ನೀರಿನ ದರ ಹೆಚ್ಚಳ ಸೇರಿದಂತೆ ಜನರಿಗೆ ಬರೆಯನ್ನು ಎಳೆಯಲಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಮುಂದಾಗಿದೆ.

ಬೆಂಗಳೂರು: ಬೇಸಿಗೆಯ ಆರಂಭವಾಗಿದ್ದು, ನಗರದಲ್ಲಿ ನೀರಿನ ಅಭಾವ ಶುರುವಾಗಿದೆ. ಈ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡು ಬೆಂಗಳೂರಲ್ಲಿ ಟ್ಯಾಂಕರ್ ನೀರಿನ ದರ ಹೆಚ್ಚಳ ಸೇರಿದಂತೆ ಜನರಿಗೆ ಬರೆಯನ್ನು ಎಳೆಯಲಾಗುತ್ತಿದ್ದು, ಈ ಬಗ್ಗೆ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ವಾಟರ್ ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಲು ಮುಂದಾಗಿದೆ.

ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಸಂಬಂಧ ಬುಧವಾರ ಜಲಮಂಡಳಿ ಅಧ್ಯಕ್ಷರೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು, ಖಾಸಗಿ ಟ್ಯಾಂಕರ್‌ ಮಾಲೀಕರು, ದುಬಾರಿ ದರದಲ್ಲಿ ನೀರು ಮಾರಾಟ ಮಾಡುತ್ತಿರುವ ಕುರಿತು ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ, ಟ್ಯಾಂಕರ್‌ಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಮಾ.1ರೊಳಗೆ ಟ್ಯಾಂಕರ್‌ ಮಾಲೀಕರ ಸಭೆ ಕರೆದು ಚರ್ಚಿಸಲಾಗುವುದು. ನೀರಿನ ಮೂಲ ಮತ್ತು ದರದ ಬಗ್ಗೆ ಮಾಹಿತಿ ಪಡೆದು, ಯಾರಿಗೂ ಹೊರೆಯಾಗದಂತೆ ದರ ನಿಗದಿಪಡಿಸಲಾಗುವುದು ಎಂದು ಹೇಳಿದರು.

ನಗರದಲ್ಲಿ 3500 ಖಾಸಗಿ ಟ್ಯಾಂಕರ್‌ಗಳಿದ್ದು, ಬಹುತೇಕರು ಉದ್ದಿಮೆ ಪರವಾನಗಿ ಪಡೆದಿಲ್ಲ. ಹಾಗಾಗಿ, ಎಲ್ಲ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರು ಮಾ.1 ರಿಂದ 7ರೊಳಗೆ ಸ್ವಯಂ ನೋಂದಣಿ ಮಾಡಿಕೊಳ್ಳಬೇಕೆಂದು ಸೂಚಿಸಲಾಗಿದೆ ಎಂದು ತಿಳಿಸಿದರು.

ಪಾಲಿಕೆಯಲ್ಲಿ ನೋಂದಾಯಿಸಿಕೊಳ್ಳದ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುವುದು. ನಿಗದಿಗಿಂತ ಅಧಿಕ ದರದಲ್ಲಿ ನೀರು ಮಾರಾಟ ಮಾಡುವ ಟ್ಯಾಂಕರ್‌ಗಳನ್ನು ವಶಕ್ಕೆ ಪಡೆಯಲಾಗುವುದು. ಬಳಿಕ ಅವುಗಳಿಗೆ ಬಾಡಿಗೆ ಮಾತ್ರ ನೀಡಿ, ಜನರಿಗೆ ನೀರು ಪೂರೈಸಲಾಗುವುದು ಎಂದು ವಿವರಿಸಿದರು.

ನಗರದಲ್ಲಿನೀರಿನ ಬವಣೆ ನೀಗಿಸಲು ಜಿಲ್ಲಾಧಿಕಾರಿಗಳು 200 ಟ್ಯಾಂಕರ್‌ಗಳನ್ನು ಜಲಮಂಡಳಿಯ ಸುಪರ್ದಿಗೆ ನೀಡಿದ್ದಾರೆ. ಈ ಪೈಕಿ 110 ಹಳ್ಳಿಗಳು, ಪುರಸಭೆ, ನಗರಸಭೆ ವ್ಯಾಪ್ತಿಗೆ 100 ಟ್ಯಾಂಕರ್‌ ಮತ್ತು ನಗರದ ಕೇಂದ್ರ ಭಾಗದ ಪ್ರದೇಶಗಳಿಗೆ ನೀರು ಪೂರೈಸಲು 100 ಟ್ಯಾಂಕರ್‌ಗಳನ್ನು ಬಳಸಿಕೊಳ್ಳಲಾಗುವುದು.

ನೀರಿನ ಅಭಾವವಿರುವ ಪ್ರದೇಶಗಳಲ್ಲಿಸಿಂಟೆಕ್ಸ್‌ ಟ್ಯಾಂಕ್‌ಗಳನ್ನಿಟ್ಟು ಜಲಮಂಡಳಿಯ 68 ಟ್ಯಾಂಕರ್‌ಗಳ ಮೂಲಕ ಅವುಗಳಿಗೆ ನೀರು ಪೂರೈಸಲಾಗುವುದು. ಆ ಮೂಲಕ ಜನರಿಗೆ ನೀರು ಒದಗಿಸಲಾಗುವುದು. 110 ಹಳ್ಳಿಗಳ ವಾರ್ಡ್‌ಗಳಲ್ಲಿಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಬಿಬಿಎಂಪಿ ಮತ್ತು ಜಲಮಂಡಳಿಯ ಸಹಾಯಕ ಎಂಜಿನಿಯರ್‌ಗಳನ್ನು ಉಸ್ತುವಾರಿಗಳನ್ನಾಗಿ ನಿಯೋಜಿಸಲಾಗಿದೆ. ಇವರ ಹೆಸರು, ಮೊಬೈಲ್‌ ಸಂಖ್ಯೆಯ ವಿವರವನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಜಲಮಂಡಳಿ ಅಧ್ಯಕ್ಷ ಡಾ.ರಾಮ್‌ ಪ್ರಸಾತ್‌ ಮನೋಹರ್‌ ಮಾತನಾಡಿ 'ಕಾವೇರಿ 5ನೇ ಹಂತದ ಯೋಜನೆಯ ಕಾಮಗಾರಿ ಏಪ್ರಿಲ್‌ನಲ್ಲಿಮುಗಿಯಲಿದ್ದು, ಮೇ ತಿಂಗಳಿಂದ ನೀರು ಪೂರೈಸಲಾಗುವುದು. ನೀರಿನ ಮಟ್ಟ ಕಡಿಮೆಯಾಗಿರುವ ಬೋರ್‌ವೆಲ್‌ಗಳನ್ನು ರೀ ಡ್ರಿಲ್ಲಿಂಗ್‌ ಮಾಡಲು ತಜ್ಞರಿಂದ ತಾಂತ್ರಿಕ ವರದಿ ಪಡೆದು, ಆನಂತರ ಕ್ರಮ ವಹಿಸಲಾಗುವುದು. ಕೈಗಾರಿಕೆಗಳಿಗೆ ನೀರು ಪೂರೈಕೆಯನ್ನು ತಗ್ಗಿಸಿ, ಕುಡಿಯುವ ಉದ್ದೇಶಕ್ಕೆ ಒದಗಿಸಲಾಗುವುದು. ಸಂಸ್ಕರಿಸಿದ ತ್ಯಾಜ್ಯ ನೀರು ಬಳಸುವಂತೆ ಕೈಗಾರಿಕೋದ್ಯಮಿಗಳಲ್ಲಿ ಮನವಿ ಮಾಡಿಕೊಳ್ಳಲಾಗುವುದು ಎಂದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ 186 ಕೆರೆಗಳಿದ್ದು, ಈ ಪೈಕಿ 7 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ತುಂಬಿಸಲಾಗುತ್ತಿದೆ. ಉಳಿದ ಕೆರೆಗಳಿಗೂ ನೀರು ತುಂಬಿಸುವ ಸಂಬಂಧ ಮಂಡಳಿ ಸಭೆಯಲ್ಲಿ ಚರ್ಚಿಸಲಾಗುವುದು. 33 ಒಳಚರಂಡಿ ಸಂಸ್ಕರಣಾ ಘಟಕಗಳಲ್ಲಿ (ಎಸ್‌ಟಿಪಿ) 1,380 ಎಂಎಲ್‌ಡಿ ನೀರನ್ನು ಪಡೆಯಲಾಗಿದೆ. ಇನ್ನುಳಿದ 14 ಒಳಚರಂಡಿ ಸಂಸ್ಕರಣಾ ಘಟಕಗಳಿಂದ 124 ಎಂಎಲ್‌ಡಿ ನೀರು ಪಡೆಯುವ ಕೆಲಸ ಪ್ರಗತಿಯಲ್ಲಿದೆ. ಎರಡು ವರ್ಷಗಳಲ್ಲಿ 2,100 MLD ಸಂಸ್ಕರಿಸಿದ ನೀರನ್ನು ಪಡೆಯುವ ಗುರಿಯನ್ನು BWSSB ಹೊಂದಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT