ರಾಜ್ಯ

'ನಾಚಿಕೆಗೇಡು': TNIE ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ವರದಿ ಆಧರಿಸಿ ಸ್ವಯಂಪ್ರೇರಿತ ಪಿಐಎಲ್‌ ದಾಖಲಿಸಿಕೊಂಡ ಹೈಕೋರ್ಟ್‌

Lingaraj Badiger

ಬೆಂಗಳೂರು: ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕಳೆದ ಡಿಸೆಂಬರ್ 25 ರಂದು, ನಿಷೇಧದ ನಡುವೆಯೂ ಮ್ಯಾನುಯಲ್ ಸ್ಕ್ಯಾವೆಂಜಿಂಗ್(ಕೈಯಿಂದ ಶೌಚ ಗುಂಡಿ ಸ್ವಚ್ಛತೆ) ಮುಂದುವರಿದಿದೆ ಎಂಬ ಶೀರ್ಷಿಕೆಯ ‘ಬಿಗ್ ಪಿಕ್ಚರ್’ ವರದಿಯನ್ನು ಪ್ರಕಟಿಸಿತ್ತು. ಇದನ್ನು ಆಧರಿಸಿ ಕರ್ನಾಟಕ ಹೈಕೋರ್ಟ್ ಬುಧವಾರ ಸ್ವಯಂಪ್ರೇರಿತವಾಗಿ ಪಿಐಎಲ್ ದಾಖಲಿಸಿಕೊಂಡಿದೆ.

ಮ್ಯಾನುಯಲ್ ಸ್ಕ್ಯಾವೆಂಜಿಂಗ್ ಘಟನೆಗಳು ತುಂಬಾ ನೋವುಂಟು ಮಾಡುತ್ತಿದ್ದು, ಖಂಡಿತವಾಗಿಯೂ ನಮ್ಮ ಆತ್ಮಸಾಕ್ಷಿಯನ್ನು ಆಘಾತಗೊಳಿಸುತ್ತಿವೆ ಎಂದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರ ವಿಭಾಗೀಯ ಪೀಠ, ಕವಿ ಸಾಹಿರ್ ಲೂಧಿಯಾನ್ವಿ ಅವರ ದ್ವಿಪದಿಯನ್ನು ಉಲ್ಲೇಖಿಸಿ 'ಮಣ್ಣಿಗೂ ಮೌಲ್ಯವಿದೆ. ಆದರೆ ಮಾನವನಿಗೆ ಏನೂ ಮೌಲ್ಯವಿಲ್ಲ. ...' ಎಂದಿದೆ.

"ಇದು ನಾಚಿಕೆಗೇಡಿನ ಸಂಗತಿಯಲ್ಲವೇ? ನಾವೆಲ್ಲರೂ ಇಲ್ಲಿರುವುದು ಇದಕ್ಕಾಗಿಯೇ... ಯಾರೋ ಬಡವರು ಆರ್ಥಿಕ ತೊಂದರೆ ಎದುರಿಸುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅವರು ಪ್ರಾಣಿಗಳಂತೆ ಅತ್ಯಂತ ಕೆಟ್ಟ ಜೀವನ ನಡೆಸಬೇಕೆ?" ನ್ಯಾಯಾಲಯ ಕಿಡಿ ಕಾರಿದೆ.

ಒಂದು ನಿರ್ದಿಷ್ಟ ಸಮುದಾಯದಲ್ಲಿ ಜನಿಸಿದ ಮಾತ್ರಕ್ಕೆ ವ್ಯಕ್ತಿಯೊಬ್ಬ ಇಂತಹ ಕೊಳಕು ಕೆಲಸಗಳನ್ನು ಮಾಡಲು ಹೇಳುತ್ತಿದ್ದಾರೆ ಎಂದು ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಮಾಜ ಸುಧಾರಕರು ಎಲ್ಲರೂ ಸಮಾನರಾಗಿರುವ ಸಮಾಜದ ಕನಸು ಕಂಡಿದ್ದರು. ಆದರೆ ಈ ರೀತಿಯ ಘಟನೆಗಳು ನಡೆಯುತ್ತಲೇ ಇವೆ. ಶೌಚ ಗುಂಡಿಗಳನ್ನು ಸ್ವಚ್ಛಗೊಳಿಸಲು ಯಂತ್ರಗಳು ಬಂದಿದ್ದರೂ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೀಗಾಗಿ ನಾವು ನಮ್ಮ ಸಹೋದರರಿಂದ ಈ ಕೆಲಸಗಳನ್ನು(ಮ್ಯಾನುಯಲ್ ಸ್ಕ್ಯಾವೆಂಜಿಂಗ್) ಮಾಡಿಸುತ್ತಿದ್ದೇವೆ ಎಂದಿದೆ.

"ನಾವು ಎರಡು ತಿಂಗಳ ಹಿಂದೆಯೇ ಚಂದ್ರನ ಮೇಲೆ ಕಾಲಿಟ್ಟಿದ್ದೇವೆ. ಇದು ತುಂಬಾ ಹೆಮ್ಮೆಯ ಸಂಗತಿಯಾಗಿದೆ. ಆದರೆ ನಾವು ನಮ್ಮ ಸಹೋದರರನ್ನು ಮನುಷ್ಯರಂತೆ ಪರಿಗಣಿಸುತ್ತಿಲ್ಲ" ಎಂದು ನ್ಯಾಯಾಲಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಈ ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಹಾಯ ಮಾಡಲು ವಕೀಲ ಶ್ರೀಧರ್ ಪ್ರಭು ಅವರನ್ನು ಅಮಿಕಸ್ ಕ್ಯೂರಿಯಾಗಿ ಹೈಕೋರ್ಟ್ ನೇಮಿಸಿದೆ ಮತ್ತು ನೋಂದಣೆಯೊಂದಿಗೆ ಈ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸುವಂತೆ ಸೂಚಿಸಿದೆ. ಪ್ರಕರಣವನ್ನು ಜನವರಿ 8 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ.

SCROLL FOR NEXT