ರಾಜ್ಯ

ಸುಚನಾ ಸೇಠ್ ಮಗುವಿನ ಹತ್ಯೆ ಪ್ರಕರಣ: ತಂದೆ ವೆಂಕಟ ರಮಣರಿಂದ ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರ

Sumana Upadhyaya

ಬೆಂಗಳೂರು/ಚಿತ್ರದುರ್ಗ: ತನ್ನ ನಾಲ್ಕು ವರ್ಷದ ಮಗುವನ್ನು ಕೊಂದ ಬೆಂಗಳೂರಿನ ಸ್ಟಾರ್ಟ್ ಅಪ್ ಕಂಪೆನಿ ಸಿಇಒ ಸುಚನಾ ಸೇಠ್ ಪತಿ ವೆಂಕಟ ರಮಣ ಅವರಿಗೆ ಸುದ್ದಿ ತಿಳಿದ ತಕ್ಷಣವೇ ಇಂಡೋನೇಷಿಯಾದಿಂದ ಚಿತ್ರದುರ್ಗಕ್ಕೆ ಬಂದು ಹಿರಿಯೂರಿನ ಶವಾಗಾರದಲ್ಲಿ ಪುತ್ರ ಚಿನ್ಮಯ್‌ನ ಪಾರ್ಥಿವ ಶರೀರವನ್ನು ನೋಡಿ ಕಂಗೆಟ್ಟು ಕುಸಿದು ಹೋದರು. ಚಿತ್ರದುರ್ಗದ ಹಿರಿಯೂರಿನ ಸರ್ಕಾರಿ ಆಸ್ಪತ್ರೆ ಶವಾಗಾರದಲ್ಲಿ ಶವಪರೀಕ್ಷೆ ಮುಗಿದಿದ್ದು, ಇಂದು ಬೆಂಗಳೂರಿಗೆ ಮೃತದೇಹ ಹಸ್ತಾಂತರಗೊಂಡು ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಸಂಸ್ಕಾರ ನೆರವೇರಿದೆ.

ಮಗುವಿನ ತಂದೆ ವೆಂಕಟ ರಮಣ ಜೊತೆಗೆ ಗೋವಾ ಪೊಲೀಸ್‌ನ ಕ್ಯಾಲಂಗುಟ್ ಠಾಣೆಯ ತನಿಖಾಧಿಕಾರಿ ಪರೇಶ್ ನಾಯ್ಕ್ ಹಾಜರಿದ್ದರು. ಮರಣೋತ್ತರ ಪರೀಕ್ಷೆಯನ್ನು ಕರ್ತವ್ಯ ವೈದ್ಯಾಧಿಕಾರಿ ಡಾ.ರಂಗೇಗೌಡ ನಡೆಸಿದರು. ಅವರಿಗೆ ಆಡಳಿತ ವೈದ್ಯಾಧಿಕಾರಿ ಡಾ.ಕುಮಾರ್ ನಾಯ್ಕ್ ಸಹಕರಿಸಿದರು. 36 ಗಂಟೆಗಳ ಹಿಂದೆ ಬಾಲಕನನ್ನು ಹತ್ಯೆ ಮಾಡಿರಬಹುದು. ದೇಹದ ಮೇಲೆ ಯಾವುದೇ ಗಂಭೀರವಾದ ಗಾಯಗಳು ಇರಲಿಲ್ಲ ಎಂದು ಡಾ.ನಾಯ್ಕ್ ಹೇಳಿದರು. ತಾಯಿ ಸುಚನಾ ಸೇಠ್ ಸಹಜವಾಗಿದ್ದು, ಅವರ ವರ್ತನೆಯಲ್ಲಿ ಬದಲಾವಣೆ ಕಂಡುಬರಲಿಲ್ಲ ಎಂದು ಗೋವಾ ಪೊಲೀಸ್ ಮೂಲಗಳು ತಿಳಿಸಿವೆ.

ಹಿರಿಯೂರಿಗೆ ಆಗಮಿಸಿದ ತನಿಖಾಧಿಕಾರಿ ಮಗುವಿನ ಮೃತದೇಹವನ್ನು ತಂದೆಗೆ ಹಸ್ತಾಂತರಿಸುವವರೆಗೂ ಹಾಜರಿದ್ದರು. ಮರಣೋತ್ತರ ಪರೀಕ್ಷೆಯ ವರದಿಯನ್ನು ಗೋವಾ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಡಾ.ನಾಯ್ಕ್ ತಿಳಿಸಿದ್ದಾರೆ.

ಬೆಂಗಳೂರಿನ ಹರಿಶ್ಚಂದ್ರ ಘಾಟ್ ನಲ್ಲಿ ಅಂತ್ಯಕ್ರಿಯೆ: ಮಗುವಿನ ಮೃತದೇಹವನ್ನು ಮಗುವಿನ ತಂದೆ ವೆಂಕಟ ರಮಣ ತಂದಿದ್ದು ಅವರೇ ಸ್ವತಃ ಮಗುವಿನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ. 

SCROLL FOR NEXT