ರಾಜ್ಯ

ಎಚ್‌ಎಲ್‌ಸಿ ಹುದ್ದೆ ನೇಮಕ ವಿಚಾರ: ಕೆಪಿಎಸ್‌ಸಿ ಅಧಿಕಾರಿಗಳ ನಡುವೆ ಭಿನ್ನಾಭಿಪ್ರಾಯ!

Manjula VN

ಬೆಂಗಳೂರು: ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ (ಎಚ್‌ಎಲ್‌ಸಿ) ಹುದ್ದೆಗೆ ನೇಮಕಾತಿಗೆ ಈ ಹಿಂದೆ ಹೊರಡಿಸಿದ್ದ ಅಧಿಸೂಚನೆ ಹಿಂಪಡೆದು, ಕಾರ್ಯದರ್ಶಿ ಹೊಸತಾಗಿ ಅಧಿಸೂಚನೆ ಹೊರಡಿಸಿರುವ ಮೂಲಕ ಕಾರ್ಯದರ್ಶಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ್ ಅವರು ಗುರುವಾರ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಾಹುಕಾರ್ ಅವರು, ಕಾರ್ಯದರ್ಶಿಯವರು ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧಿಕಾರಿಗಳು ಮತ್ತು ಮುಖ್ಯ ಕಾರ್ಯದರ್ಶಿ ಈ ಬಗ್ಗೆ ಗಮನಹರಿಸಿ, ಕಾರ್ಯದರ್ಶಿಗೆ ತಿಳಿವಳಿಕೆ ನೀಡಬೇಕು’ ಎಂದು ಹೇಳಿದ್ದಾರೆ.

‘ಎಚ್‌ಎಲ್‌ಸಿ ಹುದ್ದೆಗೆ ನೇಮಿಸಲು ಆಯೋಗವೇ ಮಾನದಂಡ ರೂಪಿಸಿಕೊಂಡಿದೆ. ‌ಅದರಂತೆ, ಅಧಿಸೂಚನೆ ಹೊರಡಿಸಿ ಸದಸ್ಯರ ಆಯ್ಕೆ ಸಮಿತಿ ರಚಿಸಿ ಅರ್ಹರನ್ನು ಸಂದರ್ಶನ ಮಾಡಿ ಆಯ್ಕೆ ಮಾಡಲಾಗುತ್ತದೆ. ಎಚ್‌ಎಲ್‌ಸಿ ಆಗಿದ್ದ ಎಸ್‌.ಎಚ್‌. ಹೊಸಗೌಡರ್‌ ಅವರು ಎರಡು ವರ್ಷ ಸೇವೆ ಪೂರ್ಣಗೊಳಿಸಿದ್ದರಿಂದ ಅವರ ಬದಲು ಹೊಸಬರ ನೇಮಕಕ್ಕೆ ಕ್ರಮ ತೆಗೆದುಕೊಳ್ಳಲು ಕಾರ್ಯದರ್ಶಿಗೆ ಸೂಚಿಸಲಾಗಿತ್ತು.

ಆಯ್ಕೆ ಸಮಿತಿ ಆಯ್ಕೆ ಮಾಡಿದವರನ್ನು ನೇಮಿಸುವಂತೆ ಶಿಫಾರಸು ಮಾಡಿದರೂ, ಆಧಾರರಹಿತ ಕಾರಣ ನೀಡಿ ನೇಮಕಾತಿ ಆದೇಶ ಹೊರಡಿಸಲು ಕಾರ್ಯದರ್ಶಿ ನಿರಾಕರಿಸಿದ್ದಾರೆ. ಎಚ್‌ಎಲ್‌ಸಿ ಹುದ್ದೆಯ ಆಯ್ಕೆಯಲ್ಲಿ ಕಾರ್ಯದರ್ಶಿಯವರಿಗೆ ಯಾವುದೇ ಪಾತ್ರ ಇಲ್ಲ’ ಎಂದು ಹೇಳಿದ್ದಾರೆ.

ಎಚ್‌ಎಲ್‌ಸಿ ಹುದ್ದೆಗೆ ಆಯ್ಕೆ ಮಾಡಿದವರಿಗೆ ನೇಮಕಾತಿ ಆದೇಶ ಹೊರಡಿಸುವಂತೆ ಶಿಫಾರಸು ಮಾಡಿದ ಕಡತದಲ್ಲಿ, ಈ ನೇಮಕಾತಿ ಪಾರದರ್ಶಕವಾಗಿ ನಡೆದಿದೆ ಎಂದು ಸಾಬೀತುಪಡಿಸುವ ಯಾವುದೇ ದಾಖಲೆಗಳನ್ನು ಆಯೋಗವು ನೀಡಿಲ್ಲ.

ಆಯ್ಕೆ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳನ್ನು ಆಯೋಗದ ಗಮನಕ್ಕೆ ತರಲು ಕಾರ್ಯದರ್ಶಿ ಪ್ರಯತ್ನಿಸಿದರೂ ಅದನ್ನು ಸರಿಪಡಿಸಿಕೊಳ್ಳಲು ಕೂಡಾ ಮುಂದಾಗಿಲ್ಲ’ ಎಂಬ ಕಾರಣ ನೀಡಿದ್ದ ಕಾರ್ಯದರ್ಶಿ ಕೆ.ಎಸ್‌. ಲತಾಕುಮಾರಿ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸಿದ್ದಾರೆ. ಈ ಸಂಬಂ ಡಿಪಿಎಆರ್ ಮತ್ತು ಮುಖ್ಯ ಕಾರ್ಯದರ್ಶಿ ಮಧ್ಯಪ್ರವೇಶಿಸಬೇಕೆಂದೂ ಮನವಿ ಮಾಡಿದ್ದಾರೆ.

SCROLL FOR NEXT