ರಾಜ್ಯ

ಲಾರಿ ಚಾಲಕರ ಮುಷ್ಕರ: ತರಕಾರಿ ಸೇರಿ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರುಪೇರು, ಮತ್ತೆ ಸಂಕಷ್ಟದಲ್ಲಿ ರೈತರು!

Manjula VN

ಮೈಸೂರು: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಮೋಟಾರ್ ಕಾಯ್ದೆ ವಿರೋಧಿಸಿ ಲಾರಿ ಮಾಲೀಕರು, ಚಾಲಕರ  ಸಂಘಟನೆಗಳ ಒಕ್ಕೂಟ ಹಾಗೂ ಖಾಸಗಿ ಬಸ್‌ಗಳ ಚಾಲಕರು ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆಯು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ಪರಿಣಾಮ ಬೀರಿದೆ.

ರಾಜ್ಯದಲ್ಲಿ ಬರಗಾಲದ ನಡುವೆಯೂ ತರಕಾರಿ ಬೆಳೆದಿದ್ದ ರೈತರು, ಇದೀಗ ಲಾರಿ ಮುಷ್ಕರದಿಂದಾಗಿ ಲಾಭದಾಯಕ ಬೆಲೆಗೆ ತರಕಾರಿಗಳ ಮಾರಾಟ ಮಾಡಲು ಸಾಧ್ಯವಾಗದೆ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮುಷ್ಕರವು ಕೇವಲ ತರಕಾರಿಯಷ್ಟೇ ಅಲ್ಲದೆ, ಪೆಟ್ರೋಲಿಯಂ ಉತ್ಪನ್ನಗಳು, ಗ್ಯಾಸ್, ಹಣ್ಣುಗಳು ಮತ್ತು ಇತರೆ ಅಗತ್ಯ ವಸ್ತುಗಳ ಪೂರೈಕೆಯ ಮೇಲೂ ಪರಿಣಾಮ ಬೀರಿದೆ.

ರೂ.50ರಷ್ಟಿದ್ದ ಬೀನ್ಸ್ ಇದೀಗ 45 ರೂ.ಗೆ ಇಳಿದಿದ್ದರೆ, ಕ್ಯಾರೆಟ್ ಬೆಲೆ ಕೆಜಿಗೆ 35 ರಿಂದ 25 ರೂಗೆ, ಮೂಲಂಗಿ, ಟೊಮೇಟೊ, ಹಾಗಲಕಾಯಿ, ಸೋರೆಕಾಯಿ, ಎಲೆಕೋಸು, ಹೂಕೋಸು ಸೇರಿದಂತೆ ಇತರೆ ತರಕಾರಿಗಳ ಬೆಲೆ ಕೆಜಿಗೆ 22 ರೂ.ಗೆ ಇಳಿಕೆಯಾಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಸಾಮಾನ್ಯವೇ ಇದ್ದರೂ, ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದೆರಡು ದಿನಗಳಿಂದ ಬೆಲೆಯಲ್ಲಿ ಇಳಿಕೆಗಳು ಕಂಡು ಬರುತ್ತಿವೆ. ಲಾರಿ ಮಾಲೀಕರ ಮುಷ್ಕರದಿಂದಾಗಿ ಎಪಿಎಂಸಿ ಮಾರುಕಟ್ಟೆಯಲ್ಲಿ ರಾಶಿ ರಾಶಿ ತರಕಾರಿಗಳು ಬಿದ್ದಿರುವುದು ಕಂಡು ಬಂದಿದೆ.

ಮೈಸೂರು ಮತ್ತು ಚಾಮರಾಜನಗರ ಮಾರುಕಟ್ಟೆಗಳು ತರಕಾರಿಗಳಿಗಾಗಿ ನೆರೆಯ ರಾಜ್ಯಗಳ ಮೇಲೆ ಅವಲಂಬಿತವಾಗಿದ್ದು, ಕೇರಳದಿಂದ ದಿನಕ್ಕೆ 130 ರಿಂದ 150 ಟ್ರಕ್‌ಗಳ ತರಕಾರಿಗಳನ್ನು ಖರೀದಿಸುತ್ತವೆ. ಆದರೆ, ಆದರೆ, ಸಗಟು ಮಾರುಕಟ್ಟೆಯಲ್ಲಿ ತರಕಾರಿ ಬೆಲೆ 8 ರಿಂದ 12 ರೂ.ಗೆ ಏರಿಕೆಯಾಗಿದ್ದು, ಮುಷ್ಕರದ ತೀವ್ರತೆ ರೈತರ ಮೇಲೆ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ. ಬೇಡಿಕೆ ಮತ್ತು ಪೂರೈಕೆ ಸಾಧ್ಯವಾಗದ ಕಾರಣ ಕೇರಳದಲ್ಲಿ ತರಕಾರಿ ಬೆಲೆ ಗಗನಕ್ಕೇರಿದೆ.

ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೋದಂಡರಾಮ್ ಮಾತನಾಡಿ, ಮಿನಿ ಲಾರಿಗಳನ್ನು ಹೊರತುಪಡಿಸಿ 6 ಸಾವಿರಕ್ಕೂ ಹೆಚ್ಚು ಲಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿವೆ. ತಿದ್ದುಪಡಿ ಕಾನೂನು ಅವೈಜ್ಞಾನಿಕವಾಗಿದ್ದು, ಸರ್ಕಾರ ಮರುಪರಿಶೀಲಿಸಬೇಕಿದೆ. ಇಲ್ಲದಿದ್ದರೆ, ಪ್ರತಿಭಟನೆ ಮತ್ತಷ್ಟು ತೀವ್ರಗೊಳ್ಳಲಿದ್ದು, ಇದರಿಂದ ಅಗತ್ಯ ವಸ್ತುಗಳ ಪೂರೈಕೆಗೆ ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.

SCROLL FOR NEXT