ಬೆಂಗಳೂರು: ಸಂವಿಧಾನದ 341ನೇ ಪರಿಚ್ಛೇದಕ್ಕೆ ತಿದ್ದುಪಡಿ ತರಲು ಸರ್ಕಾರ ಶಿಫಾರಸು ಮಾಡಿರುವುದು ದಲಿತ ಸಮುದಾಯಕ್ಕೆ ಮಾಡುತ್ತಿರುವ ದೊಡ್ಡ ಅನ್ಯಾಯ ಎಂದು ಮಾಜಿ ಸಚಿವ ಗೋವಿಂದ್ ಕಾರಜೋಳ ಅವರು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿ ಅರುಣ್ ಕುಮಾರ್ ಮಿಶ್ರಾ ಅವರು 2020 ರಲ್ಲಿಯೇ ಆದೇಶವನ್ನು ಹೊರಡಿಸಿ, 341ನೇ ವಿಧಿಗೆ ತಿದ್ದುಪಡಿಯ ಅಗತ್ಯವಿಲ್ಲ ಎಂದು ಹೇಳಿದ್ದರು. ರಾಜ್ಯ ಸರಕಾರಕ್ಕೆ ಒಳ ಮೀಸಲಾತಿ ಕೊಡಲು ಅಧಿಕಾರ ಇದೆ. ಹೆಚ್ಚುವರಿ ಸೇರಿಸಲು ಅಥವಾ ಇದ್ದಂಥ ಜಾತಿಗಳನ್ನು ತೆಗೆಯಲು ಅವಕಾಶ ಇಲ್ಲ ಎಂದು ತೀರ್ಪು ನೀಡಿದ್ದಾರೆ. ಸುಪ್ರೀಂ ಕೋರ್ಟಿನ ವಿಸ್ತೃತ ನ್ಯಾಯಪೀಠಕ್ಕೆ ಕೊಡಲು ತಿಳಿಸಿದ್ದಾರೆ. ಇದರಂತೆ ಕೇಂದ್ರ ಸರಕಾರವು ಈಗಾಗಲೇ ವಿಸ್ತೃತ ನ್ಯಾಯಪೀಠಕ್ಕೆ ವಿಷಯವನ್ನು ಮುಂದಿಟ್ಟಿದೆ.
ಇದೀಗ ಸಿದ್ದರಾಮಯ್ಯನವರು ಚುನಾವಣೆ ಬಂದಾಗ ಗಿಮಿಕ್, ಮೋಸದಾಟವನ್ನು ಮಾಡುತ್ತಿದ್ದು, ಈ ಮೋಸದಾಟ ಬಿಡಬೇಕಿದೆ. ನಿಮಗೆ ನಿಜವಾದ ಇಚ್ಛಾಶಕ್ತಿ ಇದ್ದರೆ ನಾಳೆಯೇ ಒಂದು ಆದೇಶ ಮಾಡಿ. ಒಳಮೀಸಲಾತಿ ಜಾರಿಗೊಳಿಸಿ. ನಿಮ್ಮನ್ನು ಯಾರೂ ತಡೆಯಲು ಅಸಾಧ್ಯ. ಜಾತಿ-ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಮೋಸದಾಟ ಮಾಡುತ್ತಿದ್ದೀರಿ ಎಂದು ಆಕ್ಷೇಪಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ 'ಒಳಮೀಸಲಾತಿ' ಅಸ್ತ್ರ: ಕೇಂದ್ರದ ಹೆಗಲಿಗೆ ಜವಾಬ್ದಾರಿ ಹೊರಿಸಿ ನುಣುಚಿಕೊಂಡ ರಾಜ್ಯ ಸರ್ಕಾರ!
2023ರಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರವು ಎಸ್ಸಿ ಮತ್ತು ಎಸ್ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಹೆಚ್ಚಿಸಿ, ಎಸ್ಸಿ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ, ಎಸ್ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ ಆದೇಶ ಹೊರಡಿಸಿತ್ತು. ನವೆಂಬರ್ 1, 2022 ರಂದು, ಮತ್ತು ಅಂದಿನಿಂದ, ರಾಜ್ಯದಲ್ಲಿ ಮೀಸಲಾತಿ ಹೆಚ್ಚಿಸುವ ಆದೇಶವು ಜಾರಿಗೆ ಬಂದಿದೆ,
ಬೊಮ್ಮಾಯಿ ಸರಕಾರವು ಮಾದಿಗರಿಗೆ ಶೇ.6, ಚಲವಾದಿಗಳಿಗೆ ಶೇ.5.5, ಲಂಬಾಣಿ, ಬೋವಿ, ಕೊರಮ, ಕೊರಚರಿಗೆ ಶೇ.4.5, ಎಸ್ಸಿ ಅಲೆಮಾರಿ ಸಮುದಾಯಗಳಿಗೆ ಶೇ.1 ಮತ್ತು ಎಸ್ಸಿಗಳಿಗೆ ಶೇ.17 ಮೀಸಲಾತಿಯನ್ನು ಜಾರಿಗೆ ತಂದಿದೆ ಎಂದು ಇದೇ ವೇಳೆ ಸ್ಮರಿಸಿದರು.