ರಾಜ್ಯ

ಮೈಸೂರಿನಲ್ಲಿ ರಾಮಭಕ್ತರಿಂದ ಘೇರಾವ್: ಕಾಂಗ್ರೆಸ್ ಕಾರ್ಯಕರ್ತರೇ ಕಾರಣ ಎಂದು ಸಂಸದ ಪ್ರತಾಪ್ ಸಿಂಹ ಆರೋಪ

Sumana Upadhyaya

ಮೈಸೂರು: ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಹಾರೋಹಳ್ಳಿ-ಗುಜ್ಜೇಗೌಡನಪುರಕ್ಕೆ ನಿನ್ನೆ ರಾಮಮಂದಿರ ಉದ್ಘಾಟನೆ ದಿನ ಭೇಟಿ ನೀಡಿದ ವೇಳೆ ದಲಿತ ಸಮುದಾಯದ ಆಕ್ರೋಶಕ್ಕೆ ಗುರಿಯಾದ ಘಟನೆ ನಡೆದಿದೆ. 

ಅಯೋಧ್ಯೆಯ ರಾಮಲಲ್ಲಾ ವಿಗ್ರಹದ ಕೆತ್ತನೆಗೆ ಕಲ್ಲು ತೆಗೆದ ಸ್ಥಳಕ್ಕೆ ಭೂಮಿಪೂಜೆ ಏರ್ಪಡಿಸಿದ್ದ ದಲಿತ ‘ರಾಮಭಕ್ತರು’ ಶಾಸಕ ಜಿ.ಟಿ.ದೇವೇಗೌಡ ಹಾಗೂ ಅಕ್ಕಪಕ್ಕದ ಗ್ರಾಮಗಳ ಹಲವು ಮುಖಂಡರು ಸೇರಿದಂತೆ ಈ ಭಾಗದ ಜೆಡಿಎಸ್ ಮುಖಂಡರನ್ನು ಮಾತ್ರ ಆಹ್ವಾನಿಸಿದ್ದರು.

ಕಾರ್ಯಕ್ರಮಕ್ಕೆ ಪ್ರತಾಪ್ ಸಿಂಹ ಅವರು ಆಗಮಿಸಿದಾಗ ಅವರನ್ನು ಆಹ್ವಾನಿಸಿಲ್ಲ ಎಂದು ಆರೋಪಿಸಿ ಗ್ರಾಮದ ಮುಖಂಡ ಹಾಗೂ ಮಾಜಿ ತಾಲ್ಲೂಕು ಪಂಚಾಯಿತಿ ಸದಸ್ಯ ಸುರೇಶ್ ತಡೆದು ಪ್ರತಾಪ್ ಸಿಂಹ ದಲಿತ ವಿರೋಧಿ ಎಂದು ಕೂಗಿದಾಗ ಅಲ್ಲಿ ಹೈಡ್ರಾಮಾವೇ ನಡೆಯಿತು. ಪ್ರತಾಪ್ ಸಿಂಹ ಅವರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿದರು.

ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ಜಿ ಟಿ ದೇವೇಗೌಡ ಸಮಾರಂಭದಲ್ಲಿ ಭಾಗವಹಿಸಿದ್ದ ವೇಳೆ ಹಾರೋಹಳ್ಳಿಯ ಹಲವು ಗ್ರಾಮಸ್ಥರು ಪ್ರತಾಪ್ ಸಿಂಹ ಅವರಿಗೆ ತಮ್ಮ ಗ್ರಾಮದಲ್ಲಿ ‘ಒಡೆದು ಆಳುವ’ ನೀತಿ ಅನುಸರಿಸಬೇಡಿ ಎಂದರು. 

ನೀವು ರಾಜಕೀಯ ಕಾರಣಗಳಿಗಾಗಿ ಇವತ್ತು ಇಲ್ಲಿಗೆ ಬಂದಿದ್ದೀರಿ. ದಲಿತ ವಿರೋಧಿಯಾಗಿರುವ ನೀವು ನಾವು ದಲಿತರು ಮತ್ತು ಇತರ ಸಮುದಾಯಗಳು ಒಟ್ಟಿಗೆ ವಾಸಿಸುವ ಗ್ರಾಮದ ಶಾಂತಿ ಮತ್ತು ಸಾಮರಸ್ಯವನ್ನು ಕದಡಲು ಬಂದಿದ್ದೀರಿ. ಈ ಹಿಂದೆ ಗ್ರಾಮಕ್ಕೆ ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಇಲ್ಲಿಗೆ ಬರುತ್ತಾರೆ ಆದರೆ ನೀವು ಭೇಟಿ ನೀಡಲಿಲ್ಲ. ನಮ್ಮ ಮಾತು ಕೇಳಲಿಲ್ಲ. ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಮಗೆ ಇಂದು ಇಷ್ಟವಿಲ್ಲ ಎಂದು ಅವರು ಹೇಳಿದರು.

‘ಕಾಂಗ್ರೆಸ್ ಕಾರ್ಯಕರ್ತರು ಹೊಣೆ’: ಗ್ರಾಮಸ್ಥರು ಪ್ರತಾಪ್ ಸಿಂಹ ಅವರು ಸ್ಥಳದಿಂದ ತೊರೆಯುವಂತೆ ಕೂಗಿದರು. ಆಗ ಪೊಲೀಸರು ಅವರನ್ನು ಸುತ್ತುವರೆದು ಅವರ ಕಾರಿಗೆ ಬೆಂಗಾವಲು ಮಾಡಿದರು. ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಗ್ರಾಮದಲ್ಲಿ ಕಾಂಗ್ರೆಸ್ ಗದ್ದಲ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. 

“ಕೆಲವು ಕಿಡಿಗೇಡಿಗಳು ಗಲಾಟೆ ಸೃಷ್ಟಿಸುತ್ತಿದ್ದು, ಅವರು ಕಾಂಗ್ರೆಸ್ ಕಾರ್ಯಕರ್ತರು. ನಾನು ಈಗಲೂ ಮಹಿಷ ದಸರಾ ವಿರುದ್ಧ ಇದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನನ್ನನ್ನು ಸೋಲಿಸಲು ಸಾಧ್ಯವಿಲ್ಲ, ಅದಕ್ಕಾಗಿಯೇ ಅವರು ಇಂತಹ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

SCROLL FOR NEXT