ರಾಜ್ಯ

ಹೀರೇಮಗಳೂರು ಕಣ್ಣನ್ ಗೆ ನೀಡಿದ್ದ ಹೆಚ್ಚುವರಿ ಹಣವನ್ನು ತಹಶೀಲ್ದಾರ್ ರಿಂದಲೇ ವಸೂಲಿ ಮಾಡುತ್ತೇವೆ: ಸಿಎಂ ಸಿದ್ದರಾಮಯ್ಯ

Sumana Upadhyaya

ಬೆಂಗಳೂರು: ಕನ್ನಡದ ಪೂಜಾರಿ ಎಂದೇ ಜನಪ್ರಿಯರಾಗಿರುವ ಹಿರಿಯ ಸಾಹಿತಿ, ವಾಗ್ಮಿ ಹಿರೇಮಗಳೂರು ಕಣ್ಣನ್‌ಗೆ ನೀಡಿದ್ದ ಅರ್ಚಕ ಹಣವನ್ನು ವಾಪಸ್ ನೀಡುವ ಕುರಿತಂತೆ ನೋಟಿಸ್‌ ನೀಡಿದ್ದರ ಬಗ್ಗೆ ಸಿಎಂ ಸಿದ್ದರಾಮಯ್ಯ ಇಂದು ಬುಧವಾರ ಸೋಷಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಈ ವಿಚಾರದಲ್ಲಿ ಕಣ್ಣನ್‌ ಅವರ ತಪ್ಪೇನೂ ಇಲ್ಲ ಎಂದಿರುವ ಸಿಎಂ, ಹೆಚ್ಚುವರಿ ಹಣವನ್ನು ತಹಸೀಲ್ದಾರ್‌ ಅವರಿಂದಲೇ ವಸೂಲಿ ಮಾಡುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಸಿಎಂ ಸಿದ್ದರಾಮಯ್ಯ, ಹಿರೇಮಗಳೂರು ಕಣ್ಣನ್ ಅವರಿಗೆ ತಸ್ತೀಕ್ ಹಣ ವಾಪಸ್‌ ನೀಡುವಂತೆ ನೋಟಿಸ್ ನೀಡಿರುವುದರಲ್ಲಿ ತಹಸೀಲ್ದಾರ್ ತಪ್ಪಿದೆಯೇ ಹೊರತು ಕಣ್ಣನ್ ಅವರ ತಪ್ಪಿಲ್ಲ. ನೋಟಿಸ್ ನ್ನು ಹಿಂಪಡೆಯಲು ಸಂಬಂಧಪಟ್ಟವರ ಜತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ಹಿರೇಮಗಳೂರು ಕಣ್ಣನ್ ಅವರಿಗೆ ಹೆಚ್ಚುವರಿಯಾಗಿ ಹಣ ಪಾವತಿಸಿರುವುದು ತಹಸೀಲ್ದಾರರು, ಹೀಗಾಗಿ ಅವರಿಂದಲೇ ಬಾಕಿ ಹಣ ಕಟ್ಟಿಸಿಕೊಳ್ಳುತ್ತೇವೆ ಎಂದು ಎಂದು ತಿಳಿಸಿದ್ದಾರೆ. 

ಏನಿದು ಪ್ರಕರಣ?: ಹಿರೇಮಗಳೂರು ಕಣ್ಣನ್‌ ಅವರು ಹಿರೇಮಗಳೂರು ಗ್ರಾಮದಲ್ಲಿರುವ ಕೊಂದಡರಾಮಚಂದ್ರಸ್ವಾಮಿ ದೇವಾಲಯದ ಅರ್ಚಕರಾಗಿದ್ದಾರೆ. ಕಣ್ಣನ್‌ಗೆ ವೇತನ ತಡೆಹಿಡಿದು ಚಿಕ್ಕಮಗಳೂರು ಜಿಲ್ಲಾಡಳಿತವು ಕಳೆದ ತಿಂಗಳು ನೋಟಿಸ್ ನೀಡಿತ್ತು. ದೇವಾಲಯದ ಆದಾಯ ಕಡಿಮೆ ಇದ್ದು, ಸಂಬಳ ಹೆಚ್ಚುವರಿಯಾಗಿ ಪಾವತಿ ಆಗಿದೆ. ಹೀಗಾಗಿ 4,500 ರೂಪಾಯಿಯಂತೆ 10 ವರ್ಷದ 4,74,000 ರೂಪಾಯಿ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು.

ಕಣ್ಣನ್ ಅವರ ಖಾತೆಗೆ ಪ್ರತಿ ತಿಂಗಳು 7,500 ರೂಪಾಯಿ ಸಂಬಳ ಜಮೆಯಾಗುತ್ತಿತ್ತು. 7,500 ರೂಪಾಯಿ ನೀಡಿದ ಸಂಬಳದಲ್ಲಿ 4,500 ರೂಪಾಯಿಯಂತೆ 10 ವರ್ಷದ ಹಣವನ್ನು ವಾಪಸ್ ನೀಡಲು ಸೂಚನೆ ನೀಡಲಾಗಿತ್ತು. ಸದ್ಯ ಪ್ರತಿ ತಿಂಗಳು ಬರುತ್ತಿದ್ದ ಸಂಬಳವನ್ನು ತಡೆ ಹಿಡಿಯಲಾಗಿದೆ. ಸರ್ಕಾರದ ಸೂಚನೆ ಮೇರೆಗೆ ಚಿಕ್ಕಮಗಳೂರು ತಹಸೀಲ್ದಾರ್ ಸುಮಂತ್ ನೋಟಿಸ್ ಜಾರಿ ಮಾಡಿದ್ದರು.

SCROLL FOR NEXT