ಬೆಂಗಳೂರು: ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ಆರಂಭಿಸಿದ್ದು, ಇದರಂತೆ 5 ಭಾಗಗಳಾಗಿ ಬೆಂಗಳೂರು ಮರುವಿಂಗಡಣೆಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಎಂದು ಬೆಂಗಳೂರು ಪಾಲಿಕೆಯನ್ನು ಐದು ಭಾಗ ಮಾಡಿ, ತಲಾ 80 ವಾರ್ಡ್ಗಳಾಗಿ ಮರು ವಿಂಗಡಿಸುವ ಕುರಿತು ಬೆಂಗಳೂರು ಕಾಂಗ್ರೆಸ್ ಶಾಸಕರ ನಿಯೋಗದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ಕೆಜೆ ಜಾರ್ಜ್, ಜಮೀರ್ ಅಹಮದ್ ಖಾನ್, ಶಾಸಕರಾದ ಯು.ಬಿ.ವೆಂಕಟೇಶ್, ರಿಜ್ವಾನ್ ಅರ್ಷದ್, ಸುಧಾಮ್ ದಾಸ್, ನಾಗರಾಜ್ ಯಾದವ್, ಗೋವಿಂದರಾಜು, ರಾಜ್ಯಸಭಾ ಸದಸ್ಯರಾದ ಜಿ.ಸಿ.ಚಂದ್ರಶೇಖರ್, ಕೃಷ್ಣಪ್ಪ, ನಾಗರಾಜ್ ಯಾದವ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಪ್ರೊ.ರಾಜೇಗೌಡ ಉಪಸ್ಥಿತರಿದ್ದರು.
“ನಗರದ ಎಲ್ಲಾ ನಾಲ್ಕು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದಿರುವುದರಿಂದ ಪ್ರಸ್ತುತ ಪರಿಸ್ಥಿತಿಯು ಚುನಾವಣೆ ನಡೆಸಲು ಕಾಂಗ್ರೆಸ್ಗೆ ಅನುಕೂಲಕರವಾಗಿಲ್ಲ. ಬಿಬಿಎಂಪಿಯನ್ನು ವಿಭಜಿಸುವುದರಿಂದ ಐದು ನಗರ ಪಾಲಿಕೆಗಳ ಪೈಕಿ ಕೆಲವನ್ನಾದರೂ ಪಕ್ಷ ಗೆಲ್ಲಲು ಸಾಧ್ಯವಾಗುತ್ತದೆ ಎಂದು ಶಾಸಕರೊಬ್ಬರು ಹೇಳಿದ್ದಾರೆ.
ವಿಭಜನೆಯ ನಂತರ ಬಿಡಿಎ ವ್ಯಾಪ್ತಿಗೆ ಒಳಪಡುವ ಉಪನಗರ ಪ್ರದೇಶಗಳು ಕೂಡ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರಲಿದೆ ಎಂದು ಸಭೆಯಲ್ಲಿ ಸಲಹೆ ನೀಡಲಾಗಿದೆ.
ಈ ಯೋಜನೆಗೆ ಸಿಎಂ ಒಪ್ಪಿಗೆ ಸೂಚಿಸಿದ್ದು, ಬಿಬಿಎಂಪಿ ಚುನಾವಣೆಯನ್ನು ಮತ್ತಷ್ಟು ಮುಂದೂಡುವಂತೆ ಕರ್ನಾಟಕ ಹೈಕೋರ್ಟ್ಗೆ ಮನವರಿಕೆ ಮಾಡಿಕೊಡಲು ಸರ್ಕಾರ ನಿರ್ಧರಿಸಿದೆ.
2018ರಲ್ಲಿ ಆಗಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪುನರ್ರಚನಾ ಸಮಿತಿಯ ಶಿಫಾರಸಿನಂತೆ ಬಿಬಿಎಂಪಿಯನ್ನು ಐದು ಭಾಗಗಳಾಗಿ ವಿಭಜಿಸದಿರಲು ನಿರ್ಧರಿಸಿತ್ತು.
2021 ರಿಂದ ಯಾವುದೇ ಕಾರ್ಪೊರೇಟರ್ಗಳನ್ನು ಹೊಂದಿರದ ಬಿಬಿಎಂಪಿಗೆ ಚುನಾವಣೆ ನಡೆಸಲು ನ್ಯಾಯಾಲಯ ಹಲವಾರು ಗಡುವುಗಳನ್ನು ನಿಗದಿಪಡಿಸಿದೆ. ಶೀಘ್ರದಲ್ಲೇ ಚುನಾವಣೆ ನಡೆಸಲು ವಿಫಲವಾಗಿದ್ದೇ ಆದರೆ, ಸರ್ಕಾರ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿತ್ತು.
ಸೋಮವಾರ ನಡೆದ ಸಭೆಯಲ್ಲಿ ತಜ್ಞರಾದ ಬಿ.ಎಸ್.ಪಾಟೀಲ್ ಮತ್ತು ರವಿಚಂದರ್, ನಿವೃತ್ತ ಅಧಿಕಾರಿಗಳ ತಂಡ ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿಗೊಳಿಸುವ ಕುರಿತು ಹಲವು ಸಲಹೆಗಳನ್ನು ನೀಡಿದರು.