ರಾಮೇಶ್ವರಂ ಕೆಫೆಗೆ ಬಂದು ಪರಿಶೀಲನೆ ನಡೆಸಿದ ಸಿಎಂ ಸಿದ್ದರಾಮಯ್ಯ  
ರಾಜ್ಯ

ರಾಮೇಶ್ವರಂ ಕೆಫೆ ಸ್ಫೋಟ: ಕ್ಯಾಪ್, ಮಾಸ್ಕ್ ಧರಿಸಿ ಬಂದು ರವೆ ಇಡ್ಲಿ ತಿಂದು ಟೈಮರ್ ಇಟ್ಟು ಹೋಗಿದ್ದ ಶಂಕಿತ!

ಸಿಸಿಟಿವಿ ದೃಶ್ಯಗಳಲ್ಲಿ, ಶಂಕಿತ ಬಾಂಬರ್ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿರುವುದು ಕಂಡುಬಂದಿದೆ.

ಬೆಂಗಳೂರು: ರಾಮೇಶ್ವರಂ ಕೆಫೆಯ ಬ್ರೂಕ್‌ಫೀಲ್ಡ್ ನಲ್ಲಿರುವ ಕೇಂದ್ರದಲ್ಲಿ ಕಳೆದ ಶುಕ್ರವಾರ ಬಾಂಬ್ ಸ್ಫೋಟ ಸಂಭವಿಸಿದ ನಂತರ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ 30 ರಿಂದ 35 ವರ್ಷದೊಳಗಿನ ಶಂಕಿತನು ಕುಕೃತ್ಯ ಎಸಗಿರಬಹುದು ಎಂದು ಅಂದಾಜಿಸಿದ್ದಾರೆ. ಪ್ರಕರಣವನ್ನು ಎಸಿಪಿ ನವೀನ್ ಕುಲಕರ್ಣಿ ನೇತೃತ್ವದಲ್ಲಿ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ತನಿಖೆಗೆ ಹಸ್ತಾಂತರಿಸಲಾಗಿದೆ.

ಸಿಸಿಟಿವಿ ದೃಶ್ಯಗಳಲ್ಲಿ, ಶಂಕಿತ ಬಾಂಬರ್ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಕಪ್ಪು ಬೂಟುಗಳನ್ನು ಧರಿಸಿರುವುದು ಕಂಡುಬಂದಿದೆ. ಕಪ್ಪು ಚೀಲವನ್ನು ಬಲ ಹೆಗಲಿನಲ್ಲಿ ಎಡಗೈಯಲ್ಲಿ ಸೆಲ್‌ಫೋನ್ ಹಿಡಿದುಕೊಂಡು ಶಂಕಿತ ಆರೋಪಿ ಶುಕ್ರವಾರ ಬೆಳಗ್ಗೆ 11.34 ಕ್ಕೆ ಕೆಫೆಗೆ ಪ್ರವೇಶಿಸಿ 11.50 ಕ್ಕೆ ಹೊರಟಿದ್ದಾನೆ.

ಆರೋಪಿ ಈ ಹಿಂದೆ ಸ್ಥಳದಲ್ಲಿ ವಿಹಾರ ನಡೆಸಿದ್ದ ಸಂಘಟಿತ ಗ್ಯಾಂಗ್‌ನ ಭಾಗವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಅನುಮಾನಾಸ್ಪದ ವ್ಯಕ್ತಿ ಕೆಫೆಯ ಕ್ಯಾಶ್ ಕೌಂಟರ್‌ನಲ್ಲಿ ನಗದು ಪಾವತಿಸಿ ಆಹಾರವನ್ನು ಆರ್ಡರ್ ಮಾಡುತ್ತಿರುವುದು ಕಂಡುಬಂದಿದೆ. ರವೆ ಇಡ್ಲಿ ತಿಂದು, ವಾಶ್ ಬೇಸಿನ್ ಕ್ಲೋಸೆಟ್ ಬಳಿ ಐಇಡಿ ಇರುವ ಬ್ಯಾಗ್ ಇಟ್ಟು ಕೆಫೆಯಿಂದ ಅವಸರವಾಗಿ ಹೊರಡುತ್ತಿರುವುದು ಕಾಣಿಸುತ್ತದೆ.

ಮೂಲಗಳ ಪ್ರಕಾರ, ಆರೋಪಿಯು ಕ್ಯಾಪ್ ಮತ್ತು ಮಾಸ್ಕ್ ಧರಿಸಿ ತನ್ನ ಗುರುತನ್ನು ಮರೆಮಾಚಲು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದ. ಮಧ್ಯಾಹ್ನ 12.55ಕ್ಕೆ ಐಇಡಿ ಟೈಮರ್ ಸ್ಫೋಟಗೊಳ್ಳಲು ಹೊಂದಿಸಿಟ್ಟುಕೊಂಡಿದ್ದ. ಊಟದ ಸಮಯವಾಗಿದ್ದರಿಂದ ಹೆಚ್ಚಿನ ಜನರನ್ನು ಗುರಿಯಾಗಿಸಲು ಸಾಕಷ್ಟು ಸಮಯ ಸಿಕ್ಕಿತ್ತು ಎನ್ನಲಾಗಿದೆ.

ತನಿಖಾಧಿಕಾರಿಗಳು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. ಈ ಮಧ್ಯೆ, ಎನ್ಐಎ ಮತ್ತು ಎಫ್ಎಸ್ಎಲ್ ಅಧಿಕಾರಿಗಳು ಸ್ಫೋಟದ ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಿದರು. ಸ್ಥಳದಲ್ಲಿ ಬ್ಯಾಟರಿ, ಡಿಟೋನೇಟರ್ ಮತ್ತು ತಂತಿಗಳು ಪತ್ತೆಯಾಗಿವೆ. ಮುಂದಿನ ತನಿಖೆಯ ಮೇಲ್ವಿಚಾರಣೆ ನಡೆಸಲಿರುವ ಎಸಿಪಿ ಕುಲಕರ್ಣಿ ಅವರು ಕಳೆದ ಜುಲೈನಲ್ಲಿ ಹೆಬ್ಬಾಳ ಪೊಲೀಸ್ ವ್ಯಾಪ್ತಿಯಲ್ಲಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಅವರಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು ಮತ್ತು ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳು ನಾಲ್ವರು ಶಂಕಿತರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಆರೋಪಿಗಳ ಪತ್ತೆಗೆ ಎಂಟು ಸಿಸಿಬಿ ತಂಡಗಳನ್ನು ರಚಿಸಲಾಗಿದೆ. ಆರೋಪಿಗಳಿಗಾಗಿ ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಶೋಧ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಪ್ರಮುಖ ಸ್ಥಳಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT