ತೋಟದ ಮನೆಯಲ್ಲಿ ಪತ್ತೆಯಾದ ಬುರುಡೆಗಳು
ತೋಟದ ಮನೆಯಲ್ಲಿ ಪತ್ತೆಯಾದ ಬುರುಡೆಗಳು 
ರಾಜ್ಯ

ರಾಮನಗರ: ತೋಟದ ಮನೆಯಲ್ಲಿ 20 ಕ್ಕೂ ಹೆಚ್ಚು ಮನುಷ್ಯನ ಬುರುಡೆಗಳು ಪತ್ತೆ; ವ್ಯಕ್ತಿ ವಶಕ್ಕೆ

Shilpa D

ರಾಮನಗರ :ಜೋಗರದೊಡ್ಡಿ ಗ್ರಾಮದ ತೋಟದ ಮನೆಯೊಂದರಲ್ಲಿ 20ಕ್ಕೂ ಹೆಚ್ಚು ಮನುಷ್ಯನ ಬುರುಡೆಗಳು ಸೋಮವಾರ ಪತ್ತೆಯಾಗಿವೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಬಲರಾಮ್ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ.

ಬಿಡದಿ ಬಳಿಯ ಜೋಗನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ತಲೆಬುರುಡೆಗಳು ಪತ್ತೆಯಾಗಿದ್ದು, ಬಲರಾಮ್‌ ಎಂಬಾತನಿಗೆ ಸೇರಿದ ಈ ತೋಟದ ಮನೆಯಲ್ಲಿ ಪತ್ತೆಯಾಗಿರುವ ತಲೆಬುರುಡೆಗಳನ್ನು ಒಂದೇ ಕೋಣೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದು ಇದರ ಹಿನ್ನೆಲೆ ಬೆಚ್ಚಿ ಬೀಳಿಸುವಂತಿದೆ.

ತೋಟದ ಮನೆಯಲ್ಲಿರುವ ಈ ತಲೆ ಬುರುಡೆಗಳಿಗೆ ನಿತ್ಯ ಪೂಜೆ ಮಾಡಲಾಗುತ್ತದೆ. ಈ ಮೂಲಕ ಬಲರಾಮ ಕಂಡ ಕಂಡವರ ಮೇಲೆ ಮಾಟ ಮಂತ್ರ ಮಾಡುತ್ತಾನೆ ಎಂದು ಆರೋಪಿಸಲಾಗಿದೆ. ಗ್ರಾಮಸ್ಥರು ಇದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆತನನ್ನು ಠಾಣೆಗೆ ಕರೆದುಕೊಂಡು ಬಂಧಿಸಿದ್ದಾರೆ.

ಬಲರಾಮ ಈ ತಲೆಬುರುಡೆಗಳನ್ನು ಎಲ್ಲಿಂದ ತರುತ್ತಾನೆ? ಆತನೇ ಕೊಲೆ ಮಾಡಿ ತಲೆಬುರುಡೆ ಸಂಗ್ರಹ ಮಾಡಿದ್ದಾನೆ ಎಂಬ ಸಂಶಯಗಳು ಸಾರ್ವಜನಿಕರಿಗೆ ಇದೆ. ಪೊಲೀಸರು ಈ ಬಗ್ಗೆ ಬಲರಾಮನನ್ನು ವಿಚಾರಿಸಿದಾಗ, ಇದು ಆತ ಸ್ಮಶಾನದಿಂದ ಸಂಗ್ರಹಿಸಿದ ತಲೆಬುರುಡೆ ಎಂದು ತಿಳಿದುಬಂದಿದೆ.

ಗ್ರಾಮಸ್ಥರ ದೂರಿನ ಮೇರೆಗೆ ತೋಟದ ಮನೆಗೆ ಭೇಟಿ ನೀಡಿದಾಗ, ಬುರುಡೆಗಳು ಹಾಗೂ ಮೂಳೆಗಳು ಪತ್ತೆಯಾಗಿವೆ. ಭದ್ರಕಾಳಿ ಫೋಟೊ, ಹೋಮಕುಂಡದ ಸುತ್ತ ಬುರುಡೆಗಳನ್ನು ಜೋಡಿಸಿ ಪೂಜೆ ಮಾಡಲಾಗಿದೆ. ಈತ ಕೆಲ ವರ್ಷಗಳಿಂದ ಸ್ಮಶಾನದಲ್ಲಿ ಪೂಜೆ ಮಾಡುತ್ತಿದ್ದ ಎಂದು ತಿಳಿದು ಬಂದಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ನಡುವೆ ತಾನು ಪೂಜೆ ಮಾಡುತ್ತಿರುವುದು ಹೊಸದೇನಲ್ಲ. ತಾತನ ಕಾಲದಿಂದಲೂ ಬುರುಡೆ ಪೂಜೆ ಮಾಡ್ತೇವೆ ಎಂದು ಬಲರಾಮ ಹೇಳುತ್ತಿದ್ದಾನೆ ಎಂದು ತಿಳಿದು ಬಂದಿದೆ.

SCROLL FOR NEXT