ಬೆಂಗಳೂರು: ನೀರಿನ ಅಭಾವ ನಗರದ ಶಾಲೆಗಳಿಗೂ ತಟ್ಟಿದ್ದು, ಸಬ್ಸಿಡಿ ದರದಲ್ಲಿ ನೀರು ಪೂರೈಸುವಂತೆ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್) ರಾಜ್ಯ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ.
ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ ಸದಸ್ಯರು ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು, ಶಾಲೆಗಳಲ್ಲಿನ ನೀರು ಕೊರತೆ ಸಮಸ್ಯೆಯನ್ನು ಪರಿಹರಿಸುವಂತೆ ಮನವಿ ಮಾಡಿಕೊಂಡಿವೆ.
ವಿವಿಧ ಶ್ರೇಣಿಗಳಿಗೆ ಪರೀಕ್ಷೆಗಳು ನಡೆಯುತ್ತಿರುವುದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗುವುದಿಲ್ಲ ಮತ್ತು ವಿದ್ಯಾರ್ಥಿಗಳಿಗೆ ಸ್ವಚ್ಛ ಮತ್ತು ನೈರ್ಮಲ್ಯ ಶೌಚಾಲಯಗಳು ಅತ್ಯಗತ್ಯವಾಗಿದೆ. ಬಿಡಬ್ಲ್ಯೂಎಸ್ಎಸ್ಬಿ ವಾರಕ್ಕೊಮ್ಮೆ ಮಾತ್ರ ನೀರನ್ನು ಪೂರೈಸುತತಿದೆ, ಇದು ಅನೇಕ ಶಾಲೆಗಳಲ್ಲಿ ಸಾಕಾಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಮೀಸಲಾದ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳದಿದ್ದರೆ ಅವರ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಖಾಸಗಿ ಟ್ಯಾಂಕರ್ಗಳು ಕೂಡ ಶಾಲೆಗಳಿಗೆ ನೀರು ಸರಬರಾಜು ಮಾಡುತ್ತಿಲ್ಲ, ಅವುಗಳನ್ನು ಸರ್ಕಾರದ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಇದು ಹಲವು ಶಿಕ್ಷಣ ಸಂಸ್ಥೆಗಳಿಗೆ ಸವಾಲಾಗಿ ಪರಿಣಮಿಸಿದೆ’ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.
ನೀರಿನ ಕೊರತೆಯಿಂದಾಗಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಭವಿಷ್ಯವು ಅಪಾಯದಲ್ಲಿದೆ. ಹೀಗಾಗಿ ಸರ್ಕಾರ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಹಾಯ ಮಾಡಿ, ಅವರ ಅಗತ್ಯತೆಗಳಿಗೆ ಆದ್ಯತೆ ನೀಡಬೇಕು. ಶಾಲೆಗಳಿಗೆ ಸಬ್ಸಿಡಿ ದರದಲ್ಲಿ ನೀರು ಪೂರೈಸಲು ಬಿಡಬ್ಲ್ಯೂಎಸ್ಎಸ್ಬಿಗೆ ಸೂಚನೆ ನೀಡಬೇಕೆಂದು ಸಂಘವು ಒತ್ತಾಯಿಸಿದೆ.
ಈ ಮನವಿಗೆ ಸ್ಪಂದನೆ ನೀಡಿರುವ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಇಬ್ಬರೂ ಶಾಲೆಗಳೊಂದಿಗೆ ಸಹಕರಿಸುವಂತೆ ಬಿಡಬ್ಲ್ಯುಎಸ್ಎಸ್ಬಿಗೆ ಸೂಚನೆ ನೀಡಿದ್ದಾರೆ ಎಂದು ಕೆಎಎಂಎಸ್ನ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಡಿ ತಿಳಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ಹೆಚ್ಚಾಗಿ BWSSB ನೀರು ಸರಬರಾಜು ಅಥವಾ ಬೋರ್ವೆಲ್ಗಳ ನೀರನ್ನು ಅವಲಂಬಿಸಿವೆ, ಬಹುತೇಕ ಬೋರ್ವೆಲ್ಗಳು ಸಂಪೂರ್ಣವಾಗಿ ಬತ್ತಿ ಹೋಗಿದೆ. ಶಾಲೆಗಳು ಬೃಹತ್ ಡ್ರಮ್ಗಳು ಮತ್ತು ಟ್ಯಾಂಕ್ಗಳಲ್ಲಿ ನೀರನ್ನು ಸಂಗ್ರಹಿಸುವುದರಿಂದ ನೀರಿನ ಪೋಲು ಕಡಿಮೆ ಇರುತ್ತದೆ ಎಂದು ಹೇಳಿದ್ದಾರೆ.