ಸಿದ್ದರಾಮಯ್ಯ - ಆರ್ ಅಶೋಕ
ಸಿದ್ದರಾಮಯ್ಯ - ಆರ್ ಅಶೋಕ 
ರಾಜ್ಯ

ಐವರು ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ನೇಮಿಸಿದ ಸಿದ್ದರಾಮಯ್ಯ; ಉಳಿದವರು ಅಸಮರ್ಥರಾ ಎಂದ ಆರ್ ಅಶೋಕ

Ramyashree GN

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ರಾಜ್ಯದ ಜನರ ಮುಂದಿಡಲು ಸಂಪುಟದ ಐವರು ಸಚಿವರನ್ನು ಸರ್ಕಾರದ ವಕ್ತಾರರನ್ನಾಗಿ ಬುಧವಾರ ನೇಮಿಸಿದ್ದಾರೆ.

ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಸಂತೋಷ್ ಲಾಡ್ ಅವರನ್ನು ವಕ್ತಾರರನ್ನಾಗಿ ನೇಮಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಅವರು, ಸಚಿವರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆ, ಈಶ್ವರ್ ಖಂಡ್ರೆ ಮತ್ತು ಸಂತೋಷ್ ಲಾಡ್ ಅವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಿಸಿ ಆದೇಶಿಸಲಾಗಿದೆ. ಸರ್ಕಾರದ ವಕ್ತಾರರಾಗಿ ನೇಮಕಗೊಂಡಿರುವ ಈ ಎಲ್ಲಾ ಸಚಿವರು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ರಾಜ್ಯದ ಜನರ ಮುಂದಿಡಲಿದ್ದಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದಿದ್ದಾರೆ.

ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಐವರು ಸಚಿವರನ್ನು ರಾಜ್ಯ ಸರ್ಕಾರದ ವಕ್ತಾರರನ್ನಾಗಿ ನೇಮಿಸಲಾಗಿದೆ. ಹೀಗಾಗಿ, ಸರ್ಕಾರದ ದಾಖಲೆಗಳು ಮತ್ತು ಮಾಹಿತಿಗಳನ್ನು ಅವರಿಗೆ ಕಾಲಕಾಲಕ್ಕೆ ಒದಗಿಸಲು ಅಗತ್ಯ ಕ್ರಮವಹಿಸುವಂತೆ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯಸ್ಥರಿಗೆ ಸೂಚನೆ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದು ಹೇಳಿದೆ.

ವಿಪಕ್ಷ ನಾಯಕ ಆರ್ ಅಶೋಕ ಕಿಡಿ

ಸಿದ್ದರಾಮಯ್ಯ ಅವರ ನಡೆಗೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ, 'ಸಚಿವ ಸಂಪುಟದ 34 ಸಚಿವರ ಪೈಕಿ ಕೇವಲ 5 ಜನ ಸಚಿವರು ಸರ್ಕಾರದ ಅಧಿಕೃತ ವಕ್ತಾರರಾದರೆ, ಉಳಿದ ಸಚಿವರು ಸರ್ಕಾರವನ್ನು ಪ್ರತಿನಿಧಿಸಲು ಅಸಮರ್ಥರು ಎಂಬುದು ತಮ್ಮ ಅಭಿಪ್ರಾಯವೇ ಸಿಎಂ ಸಿದ್ದರಾಮಯ್ಯನವರೇ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ಈ ಪಟ್ಟಿಯಲ್ಲಿರುವ ವಕ್ತಾರರ ಪೈಕಿ ಓರ್ವ ಸಚಿವ ಮಹಾಶಯರಿಂದಲೇ ತಮ್ಮ ಸರ್ಕಾರ ಅತ್ಯಂತ ಮುಜುಗರಕ್ಕೆ ಒಳಗಾಗಿದೆ. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣದಲ್ಲಿ ಮಾಧ್ಯಮಗಳ ಮೇಲೆ ಸುಳ್ಳು ಆರೋಪ ಮಾಡಿ, ಮಾಧ್ಯಮಗಳನ್ನು ಪದೇ ಪದೆ ನಿಂದನೆ ಮಾಡಿ ಸತ್ಯವನ್ನು ತಿರುಚಲು ಶ್ರಮಿಸಿದ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಇದು ತಾವು ನೀಡುತ್ತಿರುವ ಬಹುಮಾನವೇ? ಎಂದು ಕಿಡಿಕಾರಿದ್ದಾರೆ.

SCROLL FOR NEXT