ಮೆಟ್ರೋ ನಿಲ್ದಾಣದ ಬಳಿ ಇರುವ ಪಾರ್ಕಿಂಗ್ ಪ್ರದೇಶ
ಮೆಟ್ರೋ ನಿಲ್ದಾಣದ ಬಳಿ ಇರುವ ಪಾರ್ಕಿಂಗ್ ಪ್ರದೇಶ TNIE
ರಾಜ್ಯ

ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣ; ನಷ್ಟದ ಪರಿಣಾಮ ಹೊರನಡೆದ ಪಾರ್ಕಿಂಗ್ ಗುತ್ತಿಗೆದಾರರು!

Srinivas Rao BV

ಬೆಂಗಳೂರು: ಕಳೆದ ವರ್ಷ ಅಕ್ಟೋಬರ್ 9 ರಿಂದ ಮೆಟ್ರೋ ನೇರಳೆ ಮಾರ್ಗ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬೈಯ್ಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಇದ್ದ ಮಹತ್ವ ಕಡಿಮೆಯಾಗಿದೆ. ಈ ಮಾರ್ಗದಲ್ಲಿ ಮೆಟ್ರೋ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುವುದಕ್ಕೂ ಮುನ್ನ ಬೈಯ್ಯಪ್ಪನಹಳ್ಳಿ ಜನನಿಬಿಢ ಮೆಟ್ರೋ ನಿಲ್ದಾಣವಾಗಿರುತ್ತಿತ್ತು.

ಈ ಮಾರ್ಗದ ಮೇಟ್ರೋ ರೈಲು ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಪ್ರಾರಂಭವಾದಾಗಿನಿಂದ ಪಾರ್ಕಿಂಗ್ ಸ್ಥಳವನ್ನು ನಿರ್ವಹಿಸುವ ಗುತ್ತಿಗೆದಾರರು ಭಾರೀ ನಷ್ಟಕ್ಕೆ ಒಳಗಾಗಿದ್ದಾರೆ ಮತ್ತು ಹೊರನಡೆದಿದ್ದಾರೆ. ಪರಿಣಾಮ ಮೂರು ವಾರಗಳಿಂದ ನಿಲ್ದಾಣದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇಲ್ಲದಂತಾಗಿದ್ದು, ಇಲ್ಲಿಗೆ ತಮ್ಮ ವಾಹನಗಳನ್ನು ತಂದು ಮೆಟ್ರೊ ರೈಲು ಹತ್ತುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಪಾರ್ಕಿಂಗ್ ತಾತ್ಕಾಲಿಕವಾಗಿ ಮುಚ್ಚಲಾಗಿದೆ ಎಂಬ ಎರಡು ಬೋರ್ಡ್‌ಗಳು ಗೇಟ್‌ನ ಹೊರಗೆ ಹಾಕಲಾಗಿದ್ದು ಯಾವಾಗ ಮತ್ತೆ ತೆರೆಯಬಹುದು ಎಂಬುದರ ಕುರಿತು ಯಾವುದೇ ಉಲ್ಲೇಖವಿಲ್ಲ. ಓಲ್ಡ್ ಮದ್ರಾಸ್ ರಸ್ತೆ ಬದಿಯಲ್ಲಿರುವ ಪಾರ್ಕಿಂಗ್ ಸ್ಥಳವು 280 ದ್ವಿಚಕ್ರ ವಾಹನಗಳು, 25 ಕಾರುಗಳು ಮತ್ತು 10 ಸೈಕಲ್‌ಗಳ ನಿಲುಗಡೆಗೆ ಅವಕಾಶವಿದ್ದು, ಮೆಟ್ರೋ ನಿಲ್ದಾಣಗಳ ಪೈಕಿ ಅತಿ ದೊಡ್ಡ ವಾಹನ ನಿಲ್ದಾಣವಾಗಿದೆ.

ಬೆಂಗಳೂರು ಮೆಟ್ರೋ ರೈಲು ನಿಗಮದ ಹಿರಿಯ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದು, “ಗುತ್ತಿಗೆದಾರ ಸಹನಾ ಎಂಟರ್‌ಪ್ರೈಸಸ್ ಈ ವರ್ಷದ ಫೆಬ್ರವರಿ 21 ರಂದು ಗುತ್ತಿಗೆಯಿಂದ ಹೊರನಡೆದಿದ್ದು ವಾಹನ ನಿಲುಗಡೆ ಪ್ರದೇಶ ಮುಚ್ಚಲ್ಪಟ್ಟಿದೆ. ಮೂರು ತಿಂಗಳ ಹಿಂದೆ, ಗುತ್ತಿಗೆದಾರರು ತಮ್ಮ ನಷ್ಟದ ಪ್ರಮಾಣ ಲಕ್ಷಗಳಿಗೆ ತಲುಪುತ್ತಿರುವ ಕಾರಣ ಒಪ್ಪಂದದಿಂದ ಹೊರಗುಳಿಯುವುದಾಗಿ ಪತ್ರವನ್ನು ಸಲ್ಲಿಸಿದ್ದರು. ಇದು ಮೂರು ವರ್ಷಗಳ ಒಪ್ಪಂದವಾಗಿತ್ತು ಮತ್ತು ಅವರು ಅದನ್ನು 21 ತಿಂಗಳ ಕಾಲ ನಡೆಸಿದ್ದರು.

2011ರಲ್ಲಿ ಮೆಟ್ರೋ ಸಂಚಾರ ಆರಂಭವಾದಾಗಿನಿಂದ ನೂರಾರು ಕಚೇರಿಗೆ ತೆರಳುವವರು ಇಲ್ಲಿನ ಪಾರ್ಕಿಂಗ್ ಸ್ಥಳದಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಕೆಆರ್ ಪುರ ಅಥವಾ ವೈಟ್‌ಫೀಲ್ಡ್‌ಗೆ ಬಸ್ ಅಥವಾ ಕಚೇರಿ ವಾಹನಗಳ ಮೂಲಕ ತಲುಪುತ್ತಿದ್ದರು. ಆದರೆ ಬೈಯ್ಯಪ್ಪನಹಳ್ಳಿ-ಕೆಆರ್ ಪುರ ನಡುವಿನ ಮೆಟ್ರೋ ಮಾರ್ಗಕ್ಕೆ ಚಾಲನೆ ನೀಡಿದ ಬಳಿಕ ಕಾಡುಗೋಡಿ (ವೈಟ್‌ಫೀಲ್ಡ್) ಗೆ ತೆರಳುವ ಜನಸಮೂಹ ಇನ್ನು ಮುಂದೆ ಈ ಪಾರ್ಕಿಂಗ್ ಬಳಸುವುದಿಲ್ಲ ಎಂಬುದು ಖಚಿತವಾಗಿದೆ. “ಸಾರ್ವಜನಿಕರು ಈಗ ತಮ್ಮ ವಾಹನಗಳನ್ನು ತಮ್ಮ ಮನೆಗಳ ಸಮೀಪವಿರುವ ಜ್ಯೋತಿಪುರ ಮತ್ತು ಇತರ ನಿಲ್ದಾಣಗಳಲ್ಲಿ ನಿಲುಗಡೆ ಮಾಡುತ್ತಿದ್ದಾರೆ ಮತ್ತು ಮೆಟ್ರೋವನ್ನು ಬಳಸುತ್ತಾರೆ. ಹೀಗಾಗಿ ಗುತ್ತಿಗೆದಾರರು ಕಳೆದ ಆರು ತಿಂಗಳಿಂದ ಪಡೆಯುತ್ತಿದ್ದ ವ್ಯಾಪಾರದಲ್ಲಿ ಶೇ.30ರಷ್ಟು ಮಾತ್ರ ಪಡೆಯುತ್ತಿದ್ದಾರೆ ಎಂದು ರೈಲು ನಿಗಮದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಷ್ಟು ಮೆಟ್ರೊ ನಿಲ್ದಾಣಗಳು ಇಂತಹ ಸಮಸ್ಯೆಯನ್ನು ಎದುರಿಸುತ್ತಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ಇನ್ನೊಬ್ಬ ಅಧಿಕಾರಿ, “ನಾವು ಸಮಸ್ಯೆಯನ್ನು ಎದುರಿಸುತ್ತಿರುವ ಏಕೈಕ ನಿಲ್ದಾಣ ಇದಾಗಿದೆ. ನಾವು ಈಗಾಗಲೇ ಸ್ಮಾರ್ಟ್ ಲೆನ್ಸ್ ಪ್ರೈವೇಟ್ ಲಿಮಿಟೆಡ್‌ಗೆ ಹೊಸ ಗುತ್ತಿಗೆಯನ್ನು ನೀಡಿದ್ದೇವೆ ಮತ್ತು ಅವರು ಶೀಘ್ರದಲ್ಲೇ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತಾರೆ ಎಂಬ ಮಾಹಿತಿ ನೀಡಿದ್ದಾರೆ.

SCROLL FOR NEXT