ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು
ವಾಟರ್ ಟ್ಯಾಂಕರ್ ನಲ್ಲಿ ನೀರು ಸರಬರಾಜು 
ರಾಜ್ಯ

ನೋಂದಣಿ ಆಗದ ಖಾಸಗಿ ನೀರಿನ ಟ್ಯಾಂಕರ್‌ಗಳ ವಿರುದ್ಧ ಕಾನೂನು ಕ್ರಮ: BWSSB

Manjula VN

ಬೆಂಗಳೂರು: ಬೆಂಗಳೂರಿನಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳ ನೋಂದಣಿ ಕಾರ್ಯ ಮುಗಿದಿದ್ದು, ಶೇ.95 ರಷ್ಟು ಖಾಸಗಿ ನೀರಿನ ಟ್ಯಾಂಕರ್‌ಗಳನ್ನ ಈಗಾಗಲೇ ನೋಂದಾಯಿಸಲಾಗಿದೆ. ನೋಂದಣಿ ಆಗದೆ ಇರುವಂತಹ ಖಾಸಗಿ ನೀರಿನ ಟ್ಯಾಂಕರ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹೇಳಿದೆ.

ಬೆಂಗಳೂರಿನ ಕೊಳಚೆ ಪ್ರದೇಶಗಳಾದ ಭಾಶ್ಯಾಂ ಪಾರ್ಕ್, ದೀನ ಬಂಧು ನಗರ, ಶ್ರೀ ರಾಮ ನಗರಿ ಸೇರಿದಂತೆ ಜನಸಂದ್ರತೆಯ ಪ್ರದೇಶಗಳಿಗೆ ಭಾನುವಾರ ಭೇಟಿ ನೀಡಿದ ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ನಾಗರಿಕರೊಂದಿಗೆ ನೀರಿನ ವಿತರಣೆಯ ಬಗ್ಗೆ ಮಾಹಿತಿ ಪಡೆದುಕೊಂಡರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರಿನ ಸಂಪರ್ಕ ಇರುವಂತಹ ಪ್ರದೇಶಗಳಲ್ಲಿ ಈಗಾಗಲೇ ಸಮರ್ಪಕವಾದ ವಿತರಣೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ ಎಂದು ಹೇಳಿದರು.

ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಗರದ ಎಲ್ಲ ಭಾಗದಲ್ಲಿ ಟ್ಯಾಂಕ್‌ಗಳನ್ನು ಅಳವಡಿಸುವ ಮೂಲಕ ಉಚಿತವಾಗಿ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಕುಡಿಯುವ ನೀರು ಪೂರೈಸುವ ಖಾಸಗಿ ಟ್ಯಾಂಕರ್‌ಗಳ ನೋಂದಣಿ ಪ್ರಕ್ರಿಯೆಯ ಗಡುವು ದಿನಾಂಕ ಮಾರ್ಚ್ 15ಕ್ಕೆ ಮುಗಿದಿದೆ. ಶೇ.95 ರಷ್ಟು ನೀರಿನ ಖಾಸಗಿ ಟ್ಯಾಂಕರ್‌ಗಳನ್ನ ನೋಂದಾಯಿಸಲಾಗಿದೆ.

ಕೆಲವೆಡೆ ಟ್ರ್ಯಾಕ್ಟರ್ ಮಾರ್ಪಾಡಿಸಿ ನೀರಿನ ಟ್ಯಾಂಕರ್‌ಗಳಾಗಿ ಪರಿವರ್ತಿಸಲಾಗಿದೆ. ಇವುಗಳ ಮೇಲೆಯೂ ನಿಗಾ ಇಡಲಾಗುವುದು. ನೋಂದಣಿಗೆ ಗಡುವು ನೀಡಿದ ಸಮಯದಲ್ಲಿ ನೋಂದಣಿ ಮಾಡದೆ ಇರುವಂತಹ ಖಾಸಗಿ ನೀರಿನ ಟ್ಯಾಂಕರ್‌ಗಳ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ನಗರದ ಹೊರಭಾಗದಲ್ಲಿ ಇರುವಂತಹ ಗ್ರಾಮಗಳಿಗೆ ಇನ್ನು ಕಾವೇರಿ ನೀರಿನ ಸಂಪರ್ಕ ನೀಡಲಾಗಿಲ್ಲ. ಈ ಭಾಗದಲ್ಲಿ ಅಂತರ್ಜಲದ ಮೇಲೆ ಹೆಚ್ಚಿನ ಅವಲಂಬನೆ ಇದೆ. ಈ ಪ್ರದೇಶದಲ್ಲಿ ಬಿಬಿಎಂಪಿಯಿಂದ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ನಗರದ ಹೊರಭಾಗದ ಗ್ರಾಮಗಳಿಗೂ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದಿನದ 24 ಗಂಟೆಗಳ ಕಾಲ ನಗರದ ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ನಡೆಯುವಂತೆ ಮಂಡಳಿ ವತಿಯಿಂದ ನಿಗಾ ವಹಿಸಲಾಗುತ್ತಿದೆ ಎಂದರು.

ನೋಂದಾಯಿತ ಟ್ಯಾಂಕರ್ ಗಳ ಮೇಲೆ ಸ್ಟಿಕ್ಕರ್ ಅಂಟಿಸಿ

ಸರ್ಕಾರದಲ್ಲಿ ನೋಂದಣಿ ಮಾಡಿಕೊಂಡಿರುವ ಖಾಸಗಿ ಟ್ಯಾಂಕರ್‌ಗಳಿಗೆ ವಾಹನಗಳ ಸಂಖ್ಯೆ, ಮಾಲೀಕರ ಹೆಸರು, ಸ್ವಯಂ ನೋಂದಣಿ ಸಂಖ್ಯೆ ವಿವರವಿರುವ ಸ್ಟಿಕ್ಕರ್‌ಗಳನ್ನು ವಾಹನಗಳ ಮೇಲೆ ಅಂಟಿಸುವಂತೆ ಬಿಬಿಎಂಪಿ ಸೂಚನೆ ನೀಡಿದೆ.

ಸ್ಟಿಕ್ಕರ್ ಇಲ್ಲದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದಿಲ್ಲ. ಖಾಸಗಿ ಟ್ಯಾಂಕರ್‌ಗಳು ಸರ್ಕಾರ ನಿಗದಿಪಡಿಸಿದ ದರದಂತೆ ಮಾತ್ರ ನೀರು ಪೂರೈಸಬೇಕು ಮತ್ತು ನೋಂದಣಿಯಾಗದ ಟ್ಯಾಂಕರ್‌ಗಳಿಗೆ ನೀರು ಸರಬರಾಜು ಮಾಡಲು ಅವಕಾಶವಿರುವುದಿಲ್ಲ. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿದರೆ, ಆದರೆ, ಅಥವಾ ನೀರಿನ ಗುಣಮಟ್ಟದಲ್ಲಿ ಸಮಸ್ಯೆ ಕಂಡುಬಂದಲ್ಲಿ ನಾಗರಿಕರು 1916 ಮತ್ತು 1533 ಗೆ ಕರೆ ಮಾಡಿ, ಮಾಹಿತಿ ನೀಡುವಂತೆ ಬಆರೋಗ್ಯ ಇಲಾಖೆಯ ವಿಶೇಷ ಆಯುಕ್ತ ಸುರೋಲ್ಕರ್ ವಿಕಾಸ್ ಕಿಶೋರ್ ಅವರು ಮನವಿ ಮಾಡಿಕೊಂಡಿದ್ದಾರೆ.

SCROLL FOR NEXT