ಬೆಂಗಳೂರು: ಹಾಡಹಗಲೇ ಮನೆಗೆ ನುಗ್ಗಿ ವೃದ್ಧ ಮಹಿಳೆಯ ಕೈಕಾಲು ಕಟ್ಟಿ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನ ಹಾಗೂ ಹಣವನ್ನು ದರೋಡೆ ಮಾಡಿರುವ ಘಠನೆಯೊಂದು ಕೆಂಗೇರಿಯಲ್ಲಿ ಶುಕ್ರವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಶುಕ್ರವಾರ ಬೆಳಗ್ಗೆ 11.15ರಿಂದ 11.30ರ ನಡುವೆ ಕೆಂಗೇರಿ ಸಮೀಪದ ಎಚ್.ಗೊಲ್ಲಹಳ್ಳಿ ಗ್ರಾಮದ ನಿವಾಸಿ ಪದ್ಮಾವತಿ ಎಂಬುವವನ ಮನೆಯಲ್ಲಿ ದರೋಡೆ ನಡೆದಿದೆ. ಒಣ ಹಾಕಿದ್ದ ಬಟ್ಟೆಗಳ ತರಲು ಪದ್ಮಾವತಿಯವರು ಮಹಡಿಗೆ ಹೋಗಿದ್ದರು. ಬಟ್ಟೆಗಳ ತೆಗೆದುಕೊಂಡು ಮನೆಗೆ ಬಂದಾಗ ಮೂವರು ವ್ಯಕ್ತಿಗಳಿರುವುದನ್ನು ಗಮನಿಸಿದ್ದಾರೆ. ಕೂಡಲೇ ದುಷ್ಕರ್ಮಿಗಳು ಬಾಗಿಲನ್ನು ಹಾಕಿದ್ದು, ಪದ್ಮಾವತಿಯವರ ಬಾಯಿ ಮುಚ್ಚಿ, ಕೈಕಾಲುಗಳನ್ನು ಕಟ್ಟಿ ಶೌಚಾಲಯದೊಳಗೆ ಕೂಡಿ ಹಾಕಿದ್ದಾರೆ.
ಮನೆಯಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಇದ್ದ ದುಷ್ಕರ್ಮಿಗಳು, ಈ ವೇಳೆ ಮನೆಯಲ್ಲಿದ್ದ ಸುಮಾರು 15 ಲಕ್ಷ ಮೌಲ್ಯದ 260 ಗ್ರಾಂ ಚಿನ್ನಾಭರಣ ಹಾಗೂ 55 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ.
ಬಳಿಕ ಬಾಯಿಗೆ ಹಾಕಿದ್ದ ಟೇಪ್ ನ್ನು ತೆಗೆಯುವಲ್ಲಿ ಯಶಸ್ವಿಯಾದ ಮಹಿಳೆ, ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಕೂಡಲೇ ನೆರೆಮನೆಯ ಸುನಂದಾ ಎಂಬುವವರು ಸಹಾಯಕ್ಕೆ ಧಾವಿಸಿದ್ದಾರೆ. ಬಳಿಕ ಮನೆಯಲ್ಲಿ ಪರಿಶೀಲನೆ ನಡೆಸಿದ ಪದ್ಮಾವತಿಯವರಿಗೆ ದುಷ್ಕರ್ಮಿಗಲು ಚಿನ್ನಾಭರಣ ಹಾಗೂ ಹಣ ಹೊತ್ತೊಯ್ದಿರುವುದು ತಿಳಿದುಬಂದಿದೆ.
ಬಳಿಕ ಕಗ್ಗಲೀಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳು 25-30 ವರ್ಷದವರಾಗಿದ್ದು, ಕನ್ನಡದಲ್ಲಿಯೇ ಮಾತನಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ. ದುಷ್ಕರ್ಮಿಗಳು ಮಹಿಳೆಯ ಮೇಲೆ ದಾಳಿ ನಡೆಸಿಲ್ಲ ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.