ಸಂಗ್ರಹ ಚಿತ್ರ
ಸಂಗ್ರಹ ಚಿತ್ರ 
ರಾಜ್ಯ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಅರೆಸೇನಾ ಪಡೆಗಳ ನಿಯೋಜಿಸಿ: ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

Manjula VN

ಬೆಂಗಳೂರು: ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಖಚಿತಪಡಿಸಲು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅರೆಸೇನಾ ಪಡೆಗಳ ನಿಯೋಜಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ ಮಾಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಜೆಡಿಎಸ್ ನಾಯಕರು ಕೂಡ ಈ ಹಿಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದರು. ಕಾಂಗ್ರೆಸ್ ನಾಯಕರು ಈಗಾಗಲೇ ಕುಕ್ಕರ್, ಸೀರೆ ಮತ್ತು ಇತರ ವಸ್ತುಗಳನ್ನು ವಿತರಣೆ ಮಾಡುತ್ತಿದ್ದಾರೆ.. ಬೆದರಿಕೆಯಲ್ಲೂ ತೊಡಗಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೂಕ್ಷ್ಮ ವಲಯವಾಗಿದ್ದು, ಅರೆಸೇನಾ ಪಡೆಗಳನ್ನು ನಿಯೋಜಿಸುವ ಅಗತ್ಯವಿದೆ ಎಂದು ಹೇಳಿದರು.

ಕೆಲ ಕ್ಷೇತ್ರಗಳಲ್ಲಿ ಬಿಜೆಪಿ ಬಂಡಾಯದ ಬಗ್ಗೆ ಪ್ರತಿಕ್ರಿಯಿಸಿ, ಎಲ್ಲವೂ ಬಗೆಹರಿಯಲಿದೆ. ಜ್ವರ ಬಂದಾಗ ಆಂಟಿಬಯೋಟಿಕ್ ತೆಗೆದುಕೊಳ್ಳುತ್ತೇವೆ. ಜ್ವರ ಇಳಿಯಲು 2-3 ದಿನ ಬೇಕಾಗುತ್ತದೆ. ಹಾಗೆಯೇ ಬಂಡಾಯವೂ 2-3 ದಿನಗಳಲ್ಲಿ ಶಮನವಾಗುತ್ತದೆ ಎಂದು ತಿಳಿಸಿದರು.

ತೇಜಸ್ವಿನಿ ಗೌಡ ಕುರಿತು ಮಾತನಾಡಿ, ತೇಜಸ್ವಿನಿ ಗೌಡ ನಮ್ಮ ಪಕ್ಷಕ್ಕೆ ಬಂದು ಎಮ್‌ಎಲ್‌ಸಿ ಆಗಿದ್ದರು. ತೇಜಸ್ವಿನಿ ಗೌಡ ಅವರ ಅವಧಿ ಇನ್ನೊಂದು ತಿಂಗಳಲ್ಲಿ ಮುಕ್ತಾಯಗೊಳ್ಳುತ್ತಿತ್ತು. ಎಲ್ಲಾ ಸ್ಥಾನಮಾನ ಕೊಟ್ಟರೆ ಭಾರತೀಯ ಜನತಾ ಪಕ್ಷ ಒಳ್ಳೆಯದು. ಸ್ಥಾನಮಾನ ಕೊಡದಿದ್ದರೆ ಕೆಟ್ಟದ್ದು ಅನ್ನೋ ಮನಸ್ಥಿತಿ ಸರಿಯಲ್ಲ. ಇದಕ್ಕೆಲ್ಲ ಬಿಜೆಪಿ ಸೊಪ್ಪು ಹಾಕುವುದಿಲ್ಲ ಎಂದರು.

ಕೋಲಾರ ಕಾಂಗ್ರೆಸ್​ನಲ್ಲಿ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟಗೊಂಡ ಬಗ್ಗೆ ಮಾತನಾಡಿ, ರಮೇಶ್ ಕುಮಾರ್-ಮುನಿಯಪ್ಪ ಬಣಗಳು ಗುದ್ದಾಡಿಕೊಳ್ಳುತ್ತಿವೆ. ನಮ್ಮದು ಕೇಡರ್ ಬೇಸ್ ಪಕ್ಷ. ನಾವು ಕೋಲಾರದಲ್ಲಿ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT