ನವದೆಹಲಿ: ಮಾರ್ಚ್ 1 ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ) ಶುಕ್ರವಾರ ಐದನೇ ಆರೋಪಿಯನ್ನು ಬಂಧಿಸಿದೆ.
ಹುಬ್ಬಳ್ಳಿ ನಿವಾಸಿ, ಮೂವತ್ತೈದು ವರ್ಷದ ಶೋಯೆಬ್ ಅಹ್ಮದ್ ಮಿರ್ಜಾ ಅಲಿಯಾಸ್ ಛೋಟುನನ್ನು ಎನ್ಐಎ ಬಂಧಿಸಿದೆ. ಈ ಹಿಂದೆ ಲಷ್ಕರ್-ಎ-ತೈಬಾ(ಎಲ್ಇಟಿ) ಭಯೋತ್ಪಾದನೆ ಸಂಚು ಪ್ರಕರಣದಲ್ಲಿ ಶೋಹೆಬ್ ಅಹ್ಮದ್ ಶಿಕ್ಷೆಗೊಳಗಾಗಿದ್ದ ಎಂದು ತನಿಖಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.
"ಎನ್ಐಎ ಅಧಿಕಾರಿಗಳು ಮೂರು ದಿನಗಳ ಹಿಂದಷ್ಟೇ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈಗ ಮತ್ತೊಬ್ಬ ಆರೋಪಿಯನ್ನು ಬಂಧಿಸಿರುವುದಾಗಿ" ಎನ್ಐಎ ಶುಕ್ರವಾರ ತಿಳಿಸಿದೆ.
ಹುಬ್ಬಳ್ಳಿಯಲ್ಲೂ ದಾಳಿ ನಡೆಸಿ ಶೋಹೆಬ್ ಮತ್ತು ಆತನ ಸಹೋದರನನ್ನ ವಶಕ್ಕೆ ಪಡೆಯಲಾಗಿತ್ತು. ಇಬ್ಬರನ್ನು ತೀವ್ರ ವಿಚಾರಣೆ ನಡೆಸಿದ್ದ NIA ಅಧಿಕಾರಿಗಳು ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಹೆಬ್ ಮಿರ್ಜಾನನ್ನು ಬಂಧಿಸಿದ್ದಾರೆ.
ಜೈಲಿನಿಂದ ಹೊರಬಂದ ನಂತರ ಮಿರ್ಜಾ ಈ ಹೊಸ ಸಂಚಿನಲ್ಲಿ ಭಾಗಿಯಾಗಿರುವುದು ಎನ್ಐಎ ತನಿಖೆಯಿಂದ ತಿಳಿದುಬಂದಿದೆ.
ಆರೋಪಿ 2018ರಲ್ಲಿ ಜೈಲಿನಿಂದ ಹೊರಬಂದ ಬಳಿಕ ವಿದೇಶದಲ್ಲಿರುವ ಶಂಕಿತ ಆನ್ಲೈನ್ ಹ್ಯಾಂಡ್ಲರ್ ಅಬ್ದುಲ್ ಮತೀನ್ ತಾಹಾ ಸ್ನೇಹ ಬೆಳೆಸಿದ್ದ ಎಂದು ತನಿಖಾ ಸಂಸ್ಥೆ ತಿಳಿಸಿದೆ.