ಬಸನಗೌಡ ಪಾಟೀಲ್ ಯತ್ನಾಳ್ 
ರಾಜ್ಯ

ಬಸವಣ್ಣನ ಬಗ್ಗೆ ಯತ್ನಾಳ್ ವಿವಾದಾತ್ಮಕ ಹೇಳಿಕೆ; ಭುಗಿಲೆದ್ದ ಆಕ್ರೋಶ!

ಯತ್ನಾಳ್ ಹೇಳಿಕೆಗೆ ಲಿಂಗಾಯತ ಮಠದ ಸ್ವಾಮೀಜಿಗಳು ಸೇರಿದಂತೆ ವಿವಿಧ ರಾಜಕಾರಣಿಗಳು ಕಿಡಿಕಾರಿದ್ದಾರೆ. ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಅವರು ಕ್ಷಮಿಸಲಾರದ ತಪ್ಪೆಸಗಿದ್ದಾರೆ- ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕ್ರಾಂತಿಕಾರಿ ಬಸವಣ್ಣ ಪಲಾಯನವಾದಿ ಎಂಬರ್ಥದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಯತ್ನಾಳ್ ಹೇಳಿಕೆಗೆ ಲಿಂಗಾಯತ ಮಠದ ಸ್ವಾಮೀಜಿಗಳು ಸೇರಿದಂತೆ ವಿವಿಧ ರಾಜಕಾರಣಿಗಳು ಕಿಡಿಕಾರಿದ್ದಾರೆ.

ಯತ್ನಾಳ್ ಹೇಳಿಕೆ ಖಂಡಿಸಿ ಟ್ವೀಟ್ ಮಾಡಿರುವ ಸಚಿವ ಪ್ರಿಯಾಂಕ್ ಖರ್ಗೆ , ಜಗಜ್ಯೋತಿ ಬಸವಣ್ಣನವರ ಬಗ್ಗೆ ಅತ್ಯಂತ ಅವಮಾನಕರವಾಗಿ, ಅತ್ಯಂತ ಹಗುರವಾಗಿ ಮಾತನಾಡಿರುವ ಬಿಜೆಪಿ ಶಾಸಕ ಯತ್ನಾಳ್ ಅವರು ಕ್ಷಮಿಸಲಾರದ ತಪ್ಪೆಸಗಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಾಯಕರು, ಅಲ್ಪಸಂಖ್ಯಾತರ ಬಗ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದ ಬಿಜೆಪಿಯವರ ನಾಲಿಗೆಗಳು ಈಗ ಸಮಾಜ ಸುಧಾರಣೆಗೆ ಜೀವ ಸವೆಸಿದ ಮಹನೀಯರ ಬುಡಕ್ಕೂ ಚಾಚುವಷ್ಟು ಉದ್ದವಾಗಿವೆ. ಬಸವಣ್ಣನವರ ಹಾಗೆ ಹೊಳೆ ಹಾರಬೇಕು“ ಎನ್ನುವ ಮೂಲಕ ಬಸವಣ್ಣನವರನ್ನು ಪಲಾಯನವಾದಿ ಎಂಬರ್ಥದಲ್ಲಿ ಮಾತನಾಡಿದ ಯತ್ನಾಳ್ ಅವರನ್ನು ಈ ನಾಡಿನ ಪ್ರಜ್ಞಾವಂತ ಬಸವಾನುಯಾಯಿಗಳು ಗಟ್ಟಿ ಧ್ವನಿಯಲ್ಲಿ ಖಂಡಿಸಬೇಕಿದೆ. ತನ್ನ ಬಣ್ಣಿಸಬೇಡ, ಇದಿರು ಹಳಿಯಬೇಡ ಎಂದಿದ್ದ ಬಸವಣ್ಣನವರ ಹೆಸರನ್ನು ಯತ್ನಾಳ್ ಅವರು ತಮ್ಮ ದ್ವೇಷ ಭಾಷಣಕ್ಕೆ ಬಳಸಿದ್ದು ಮತ್ತೊಂದು ಘೋರ ಅಪರಾಧ ಎಂದಿದ್ದಾರೆ.

ಬಸವಣ್ಣನವರು ಹೊಳೆ ಹಾರಿಲ್ಲ, ಈ ಸಮಾಜಕ್ಕೆ ಜ್ಞಾನದ ಹೊಳೆ ಹರಿಸಿದ್ದಾರೆ, ಯತ್ನಾಳ್ ಅವರೇ, ನಿಮ್ಮ ಪ್ರಕಾರ ಬಸವಣ್ಣನವರು ಹೊಳೆ ಹಾರಿದ್ದಾರೆ ಎನ್ನುವುದಾದರೆ ಅವರನ್ನು ಹೊಳೆಗೆ ಹಾರುವಂತೆ ಮಾಡಿದವರು ಯಾರು? ಇಂದು ಯತ್ನಾಳ್ ಅವರು ಪ್ರತಿಪಾದಿಸುತ್ತಿರುವ ಸಿದ್ಧಾಂತವೇ ಅಂದು ಬಸವಾದಿ ಶರಣರನ್ನು ಹಿಂಸಿಸಿದ್ದಲ್ಲವೇ? ಕಲ್ಯಾಣದ ಶರಣರ ಹತ್ಯೆ ನಡೆಸಿದವರು ಯಾರು? ಶರಣರು “ಮರಣವೇ ಮಹಾನವಮಿ“ ಎಂದಿದ್ದೇಕೆ?

ವಚನ ಬಂಡಾರಕ್ಕೆ ಬೆಂಕಿ ಇಟ್ಟವರು ಯಾರು? ಅನುಭವ ಮಂಟಪಕ್ಕೆ ದಾಳಿ ಮಾಡಿದವರು ಯಾರು? ಮಡಿವಾಳ ಮಾಚಿದೇವರು ಕತ್ತಿ ಹಿಡಿದಿದ್ದೇಕೆ? ಯಾರಿಂದ ರಕ್ಷಣೆ ಪಡೆಯಲು? ಬಿಜೆಪಿಯವರಿಗೆ ಈ ವಿಚಾರಗಳ ಬಗ್ಗೆ ಚರ್ಚಿಸುವ ಶಕ್ತಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಬಸವಣ್ಣನವರ ಅನುಭವ ಮಂಟಪದ ಪರಿಕಲ್ಪನೆಯಲ್ಲೇ ಇಂದು ನಾವು ಪ್ರಜಾಪ್ರಭುತ್ವವನ್ನು ಅಳವಡಿಸಿಕೊಂಡಿದ್ದೇವೆ. ಅವರ ತತ್ವಗಳ ಪ್ರೇರಣೆಯಲ್ಲೇ ನಮ್ಮ ಸಂವಿಧಾನವಿದೆ. ಧಮನಿತರಿಗೆ ಆತ್ಮಶಕ್ತಿ ನೀಡಿದ, ಶೋಷಿತರಿಗೆ ಘನತೆಯ ಬದುಕು ತಂದುಕೊಟ್ಟ, ಕಲ್ಯಾಣ ಕ್ರಾಂತಿಯ ಮೂಲಕ ಮೌಢ್ಯದಲ್ಲಿ ಜಡಗಟ್ಟಿದ್ದ ಸಮಾಜಕ್ಕೆ ಹೊಸ ಮಾರ್ಗ ತೋರಿದ ಬಸವಣ್ಣನವರು ಕೇವಲ “ಹೊಳೆ ಹಾರಿದವರಾಗಿ” ಕಂಡಿದ್ದು ಬಿಜೆಪಿಗರ ಅಜ್ಞಾನದ ದ್ಯೋತಕವಾಗಿದೆ.

ಬಸವಣ್ಣರನ್ನು ಅನುಸರಿಸುವ ಈ ನಾಡಿನ ಜನ ಬಿಜೆಪಿಗರ ಈ ನಡೆಯನ್ನು ಸಹಿಸಲು ಸಾಧ್ಯವಿಲ್ಲ. ಕೆಲ ದಿನಗಳ ಹಿಂದೆ ನಾಡಿನ ಜನ ವೇದಿಕೆಯಿಂದ ಕೆಳಗಿಳಿಸಿ ಓಡಿಸಿದ್ದರೂ ಬುದ್ದಿ ಕಲಿಯದ ಯತ್ನಾಳ್ ಅವರ ನಾಲಿಗೆಗೆ ಕಡಿವಾಣ ಹಾಕುವ ಶಕ್ತಿ ಕರ್ನಾಟಕದ ಜನರಿಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ನವಂಬರ್ 25ರಂದು ನಡೆದಿದ್ದ ವಕ್ಫ್​ ವಿರುದ್ಧದ ಪಾದಯಾತ್ರೆ ವೇಳೆ ಮಾತನಾಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಕ್ಫ್​ ಬೋರ್ಡ್​​ ವಿರುದ್ಧ ಎಲ್ಲರೂ ಕೂಡಿ ಹೋರಾಟ ಮಾಡಬೇಕಿದೆ. ನಾವು ಹೋರಾಟಕ್ಕೆ ಇಳಿದರೆ ಅವರು ಕೂಡ ಹೋರಾಟ ಮಾಡುತ್ತಾರೆ. ವಿಜಯೇಂದ್ರ ಬಣದವರು ಹೋರಾಟ ಮಾಡುತ್ತಾರೆ, ಬೆಂಕಿ ಹಚ್ಚುತ್ತಾರೆ. ಅವರು ನಮ್ಮ ನಡುವೆಯೇ ಜಗಳ ಹಚ್ಚುತ್ತಾರೆ, ನಾವು ಹೆದರಬಾರದು. ಹೆದರಿದರೆ ಬಸವಣ್ಣನವರ ಹಾಗೆ ನದಿಗೆ ಹಾರಿ ಸಾಯಬೇಕಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಬಸವಣ್ಣನ ವಿರುದ್ಧದ ಅಕ್ಷೇಪಾರ್ಹ ಮಾತಿಗೆ ಸಾಣೇಹಳ್ಳಿ ಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿಡಿಕಾರಿದ್ದಾರೆ. ಯತ್ನಾಳ್ ಗೆ ತಾನೇನು ಮಾತನಾಡುತ್ತಿದ್ದೇನೆ ಅನ್ನುವ ಪ್ರಜ್ಞೆ ಇಲ್ಲ. ದೊಡ್ಡವರನ್ನು ಹೀಯಾಳಿಸಿದರೆ ಸಾರ್ವಜನಿಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರೆ ದೊಡ್ಡವನಾಗುತ್ತೇನೆ ಎಂಬ ಭ್ರಮೆಯಲ್ಲಿದ್ದಾರೆ. ಬಸವಣ್ಣನವರ ಬಗ್ಗೆ ಲಿಂಗಾಯತ ಧರ್ಮದ ಬಗ್ಗೆ ಅವರು ಆಡಿರುವ ಮಾತುಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಖಂಡಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT