ಬಳ್ಳಾರಿ: ಕಾಂಗ್ರೆಸ್ಸಿನ ಈ.ತುಕಾರಾಂ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾಸನಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದೆ. ನವೆಂಬರ್ 13ರಂದು ಮತದಾನ ನಡೆಯಲಿದ್ದು, ಎನ್ಡಿಎ ಮೈತ್ರಿ ಮತ್ತು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿವೆ. ಕಾಂಗ್ರೆಸ್ ಭದ್ರಕೋಟೆಯಾಗಿರುವ ಸಂಡೂರಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿ ನಾಯಕರು ರಣತಂತ್ರ ಹೆಣೆದಿದ್ದಾರೆ. ಕ್ಷೇತ್ರದಲ್ಲೇ ವಾಸ್ತವ್ಯ ಹೂಡಲು ಸಂಡೂರಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ತಾತ್ಕಾಲಿಕವಾಗಿ ಮನೆ ಮಾಡಿದ್ದಾರೆ. ಈ ನೂತನ ಮನೆಗೆ ಗೃಹ ಪ್ರವೇಶ ಕೂಡ ಮಾಡಿದ್ದಾರೆ.
ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆಗೆ ಪ್ರವೇಶದ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದೆ. ಜಿಲ್ಲೆಯಲ್ಲಿ ರೆಡ್ಡಿ ಅವರಿಗೆ ಈಗಲೂ ವ್ಯಾಪಕ ಬೆಂಬಲವಿದೆ ಮತ್ತು ಅವರ ಜನಪ್ರಿಯತೆಯ ಮೇಲೆ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಬಿಜೆಪಿ ಭರವಸೆಯಿರಿಸಿದೆ. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಂಡೂರಿನಲ್ಲಿ ಮನೆ ಮಾಡಿದ್ದಾರೆ.
ಆದರೆ, ಮತದಾನದ ನಂತರ ಮನೆಗೆ ಶಾಶ್ವತವಾಗಿ ಬೀಗ ಹಾಕಿ ಮುಚ್ಚಲಾಗುವುದು ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ. ಸಂಡೂರು ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮತ್ತು ಬಳ್ಳಾರಿಯಲ್ಲಿ ಬಲವಾದ ಹಿಡಿತವನ್ನು ಉಳಿಸಿಕೊಳ್ಳುವತ್ತ ಗಮನಹರಿಸಿರುವ ರೆಡ್ಡಿ ಇತ್ತೀಚೆಗೆ ಪಕ್ಷದ ಕಾರ್ಯಕರ್ತರಿಗೆ ಉಪಚುನಾವಣೆ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುವುದಾಗಿ ಭರವಸೆ ನೀಡಿದರು.
ಮತ್ತೊಂದೆಡೆ, ವಾಲ್ಮೀಕಿ ಕಾರ್ಪೊರೇಷನ್ ಪ್ರಕರಣದಲ್ಲಿ ಬಳ್ಳಾರಿ ಗ್ರಾಮಾಂತರ ಶಾಸಕ ಹಾಗೂ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ಜಾಮೀನು ಸಿಕ್ಕ ಮೇಲೆ ಕಾಂಗ್ರೆಸ್ ನಾಯಕರು ಸಕ್ರಿಯರಾಗಿದ್ದಾರೆಯ. ಜಿಲ್ಲೆಯಲ್ಲಿ ರೆಡ್ಡಿಯನ್ನು ಎದುರಿಸುವ ಶಕ್ತಿ ನಾಗೇಂದ್ರ ಅವರಿಗೆ ಮಾತ್ರವಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ.
ಸಂಡೂರಿನಲ್ಲಿ ನನ್ನ ವಾಸ್ತವ್ಯ ಉಪಚುನಾವಣೆಗೆ ಸೀಮಿತವಾಗಿಲ್ಲ. ತಾಲೂಕು ಅಭಿವೃದ್ಧಿ ಕಾರ್ಯಗಳಲ್ಲಿ ಹಿಂದುಳಿದಿರುವ ಕಾರಣ ಇಲ್ಲಿಯೇ ಮುಂದುವರಿಯುತ್ತೇನೆ. ರಾಜ್ಯದ ಗಣಿಗಾರಿಕೆ ಕೇಂದ್ರವಾಗಿರುವ ತಾಲೂಕಿನಿಂದ ಸಾವಿರಾರು ಕೋಟಿ ಆದಾಯ ಬರುತ್ತಿದೆ. ಆದರೆ ಶಾಸಕ ಇ.ತುಕಾರಾಂ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಸಿಲ್ಲ.ಹೀಗಾಗಿ ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಸಮಯ ಬಂದಿದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ರೆಡ್ಡಿಯವರು ಇಲ್ಲಿ ಅರಮನೆ ಕಟ್ಟಿದ್ದರೂ ಜನ ತುಕಾರಾಂ ಅವರನ್ನು ಜನ ಬೆಂಬಲಿಸುತ್ತಾರೆ ಎಂದು ನಾಗೇಂದ್ರ ಹೇಳಿದ್ದಾರೆ. ಉಪಚುನಾವಣೆ ನಂತರ ರೆಡ್ಡಿ ಮನೆಗೆ ಬೀಗ ಹಾಕುತ್ತಾರೆ ಎಂದು ನನಗೆ ಖಚಿತವಾಗಿದೆ, ಏಕೆಂದರೆ ಸಂಡೂರಿನ ಜನರು ಅವರನ್ನು ವಾಪಸ್ ಕಳುಹಿಸುತ್ತಾರೆ ಎಂದು ತಿಳಿಸಿದ್ದಾರೆ.