ಪ್ರಾತಿನಿಧಿಕ ಚಿತ್ರ 
ರಾಜ್ಯ

ಮಳೆ ನಿಂತರೂ ನಿಲ್ಲದ ಸಂಕಷ್ಟ: ಸಾಂಕ್ರಾಮಿಕ ರೋಗ ಕುರಿತು ಜನರಲ್ಲಿ ಹೆಚ್ಚಿದ ಆತಂಕ

ಜಕ್ಕೂರು, ಡಾ.ಶಿವರಾಮಕಾರಂತ್ ಲೇಔಟ್ 2ನೇ ಹಂತದಲ್ಲಿ ನೀರು ಇಳಿಮುಖವಾಗುತ್ತಿದ್ದಂತೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಖಾಲಿ ನಿವೇಶನಗಳು ಹಾಗೂ ಚರಂಡಿಗಳಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳು ಹೆಚ್ಚಾಗಿವೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವರುಣ ಆರ್ಭಟ ನಿಂತಿದ್ದು, ಪ್ರವಾಸ ಪರಿಸ್ಥಿತಿ ಕೂಡ ನಿಯಂತ್ರಣಕ್ಕೆ ಬಂದಿದೆ. ಆದರೆ, ಜನ ಸಂಕಷ್ಟ ಮಾತ್ರ ದೂರಾಗಿಲ್ಲ. ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ಜನರಲ್ಲಿ ಸಾಂಕ್ರಾಮಿಕ ರೋಗ ಕುರಿತು ಆತಂಕ ಹೆಚ್ಚಾಗಿದೆ.

ಮಂಗಳವಾರ ಮತ್ತು ಬುಧವಾರದಂದು ಪ್ರವಾಹದಿಂದ ತೀವ್ರ ಹಾನಿಗೊಳಗಾಗಿದ್ದ ಜಕ್ಕೂರು, ಡಾ.ಶಿವರಾಮಕಾರಂತ್ ಲೇಔಟ್ 2ನೇ ಹಂತದಲ್ಲಿ ನೀರು ಇಳಿಮುಖವಾಗುತ್ತಿದ್ದಂತೆ ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ಖಾಲಿ ನಿವೇಶನಗಳು ಹಾಗೂ ಚರಂಡಿಗಳಲ್ಲಿ ನೀರು ನಿಂತು ದುರ್ವಾಸನೆ ಬೀರುತ್ತಿದ್ದು, ಸೊಳ್ಳೆಗಳು ಹೆಚ್ಚಾಗಿವೆ. ಇದರಿಂದ ಸಾಂಕ್ರಾಮಿಕ ರೋಗ ಹೆಚ್ಚಾಗುವ ಕುರಿತು ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ.

ಅಂತೆಯೇ, ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ನಿವಾಸಿಗಳು ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿರುವುದಾಗಿ ಹೇಳಿದ್ದು, ಫಾಗಿಂಗ್ ಸೇರಿದಂತೆ ಇತರೆ ಅಗತ್ಯ ಕ್ರಮಗಳ ಕೈಗೊಳ್ಳುವಂತೆ ಆಗ್ರಹಿಸುತ್ತಿದ್ದಾರೆ.

ಡಾ.ಶಿವರಾಮಕಾರಂತ್ ಲೇಔಟ್ 2ನೇ ಹಂತದ ನಿವಾಸಿ ಕ್ಷೇಮಾಭಿವೃದ್ಧಿ ಸಂಘದ (ಆರ್‌ಡಬ್ಲ್ಯುಎ) ಉಪಾಧ್ಯಕ್ಷ ಲಕ್ಷ್ಮೀನರಸಿಮಯ್ಯ ಮಾತನಾಡಿ, ರೈಲು ಯೋಜನೆ ಕಾಮಗಾರಿ ನಡೆಯುತ್ತಿರುವುದರಿಂದ, ರೈಲ್ವೇ ಹಳಿಯ ಚರಂಡಿ ಮುಚ್ಚಿ ಹೋಗಿದೆ. ಇದರಿಂತ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಮೊದಲ ಕ್ರಾಸ್‌ನಿಂದ ಎರಡನೇ ಕ್ರಾಸ್‌ವರೆಗಿನ ಬೀದಿಗಳು ಹಾನಿಗೊಳಗಾಗಿವೆ. ಕೆಲವು ಮನೆಗಳಲ್ಲಿ 4 ಅಡಿಗಳಷ್ಟು ನೀರು ತುಂಬಿವೆ. ಸಚಿವ ಕೃಷ್ಣ ಬೈರೇಗೌಡ ಅವರು ನಿವಾಸಿಗಳನ್ನು ಸ್ಥಳಾಂತರಿಸಲು ಟ್ರ್ಯಾಕ್ಟರ್‌ಗಳನ್ನು ನಿಯೋಜಿಸುವ ಮೂಲಕ ಪರಿಹಾರ ಒದಗಿಸಿದ್ದಾರೆ ಎಂದು ಹೇಳಿದ್ದಾರೆ.

ಮತ್ತೊಬ್ಬ ನಿವಾಸಿ ಸುಲ್ತಾನ್ ಘೌಸ್ ಎಂಬುವವರು ಮಾತನಾಡಿ, ನಿಂತ ನೀರು, ದುರ್ವಾಸನೆಯಿಂದ ಸೋಂಕುಗಳು ಹರಡುವ ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನ ನಿರ್ವಹಣಾ ಸಿಬ್ಬಂದಿ ಉಗ್ರಪ್ಪ ಎಂಬುವವರು ಮಾತನಾಡಿ, ನೆಲಮಾಳಿಗೆಯಲ್ಲಿ ಇನ್ನೂ ದುರ್ವಾಸನೆ ಬರುತ್ತಿದ್ದು, ಸ್ವಚ್ಛತಾ ಕಾರ್ಯ ಕೈಗೊಳ್ಳುವಂತೆ ಬಿಬಿಎಂಪಿಗೆ ಒತ್ತಾಯಿಸಿದ್ದಾರೆ.

ಏತನ್ಮಧ್ಯೆ, ಬಿಬಿಎಂಪಿ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್‌ನಲ್ಲಿ ಪ್ರವಾಹಕ್ಕೆ ಕಾರಣದ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿದ್ದು, ತಡೆಗೋಡೆ ಕುಸಿದಿರುವುದೇ ಸಮಸ್ಯೆಗೆ ಕಾರಣವಾಗಿದೆ ಎಂದು ಹೇಳಿದೆ.

ಅತಿವೃಷ್ಟಿ ಸಂದರ್ಭದಲ್ಲಿ ಮಳೆ ನೀರು ಸಂಗ್ರಹಣೆಗೆ 8 ಅಡಿ ಕಾಂಕ್ರೀಟ್ ಗೋಡೆ, ಮೆಗಾ ಸಂಪ್ ನಿರ್ಮಿಸುವಂತೆ ವರದಿಯಲ್ಲಿ ಸೂಚಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT