ಗಣೇಶ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಪ್ರಿಯಕೃಷ್ಣ 
ರಾಜ್ಯ

4 ಲಕ್ಷ ರೂ ಮೌಲ್ಯದ ಚಿನ್ನದ ಸರ ಸಮೇತ ಗಣೇಶ ಮೂರ್ತಿ ವಿಸರ್ಜನೆ; ವಾಪಸ್ ದಂಪತಿ ಕೈ ಸೇರಿದ್ದೇ ರೋಚಕ!

ಗೋವಿಂದರಾಜನಗರ ಸಮೀಪದ ಮಾಚೋಹಳ್ಳಿ ಕ್ರಾಸ್‌ನ ನಿವಾಸಿಯಾಗಿರುವ ಶಿಕ್ಷಕ ದಂಪತಿ ರಾಮಯ್ಯ ಮತ್ತು ಉಮಾದೇವಿ ಅವರು ತಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ತಮ್ಮ ಬಳಿ ಇದ್ದ ಉದ್ದನೆಯ ಚಿನ್ನದ ಸರವನ್ನೂ ತೊಡಿಸಿದ್ದರು.

ಬೆಂಗಳೂರು: ಬೆಂಗಳೂರಿನ ಶಿಕ್ಷಕರ ಕುಟುಂಬವೊಂದು 4 ಲಕ್ಷ ರೂ ಮೌಲ್ಯದ ಚಿನ್ನದ ಸರ ಸಹಿತ ಗಣಪತಿಯ ಮೂರ್ತಿ ವಿಸರ್ಜನೆ ಮಾಡಿ ಬಳಿಕ ಪೇಚಿಗೆ ಸಿಲುಕಿತ್ತು. ಇದೀಗ ಹರಸಾಹಸದ ಬಳಿಕ ಕೊನೆಗೂ ಆ ಚಿನ್ನದ ಸರ ದಂಪತಿ ಕೈ ಸೇರಿದೆ.

ಹೌದು.. ಗೋವಿಂದರಾಜನಗರ ಸಮೀಪದ ಮಾಚೋಹಳ್ಳಿ ಕ್ರಾಸ್‌ನ ನಿವಾಸಿಯಾಗಿರುವ ಶಿಕ್ಷಕ ದಂಪತಿ ರಾಮಯ್ಯ ಮತ್ತು ಉಮಾದೇವಿ ಅವರು ತಮ್ಮ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿದ್ದರು.

ಈ ಗಣಪನಿಗೆ ಎಲ್ಲ ರೀತಿಯ ಹೂವಿನ ಅಲಂಕಾರದೊಂದಿಗೆ ತಮ್ಮ ಬಳಿ ಇದ್ದ ಉದ್ದನೆಯ ಚಿನ್ನದ ಸರವನ್ನೂ ತೊಡಿಸಿದ್ದರು. ಪೂಜೆ ಎಲ್ಲ ಮುಗಿದ ಬಳಿಕ ರಾತ್ರಿ 9.30ಕ್ಕೆ ಮನೆ ಸಮೀಪದ ಮೊಬೈಲ್ ಟ್ಯಾಂಕ್‌ನಲ್ಲಿ ವಿಗ್ರಹವನ್ನು ವಿಸರ್ಜನೆ ಮಾಡಿದ್ದರು.

ಬಳಿಕ ಮನೆಗೆ ಆಗಮಿಸಿದ್ದ ದಂಪತಿಗೆ ತಾವು ಗಣಪನಿಗೆ ಹಾಕಿದ್ದ ಚಿನ್ನದ ಸರ ನೆನಪಾಗಿದೆ. ಕೂಡಲೇ ಗಣೇಶ ಮೂರ್ತಿ ವಿಸರ್ಜಿಸಿದ ಮೊಬೈಲ್ ಟ್ಯಾಂಕರ್ ಬಳಿ ಹೋಗಿದ್ದು, ಅಲ್ಲಿ ವಿಸರ್ಜನಾ ಕಾರ್ಯ ನಡೆಸುತ್ತಿದ್ದ ಯುವಕರ ಬಳಿ ವಿಚಾರಿಸಿದ್ದರು. ಈ ವೇಳೆ ಅವರು ವಿಗ್ರಹದಲ್ಲಿ ಸರ ಇರುವುದನ್ನು ಕಂಡಿದ್ದೆವು. ಆದರೆ ಅದು ನಕಲಿ ಇರಬೇಕು ಎಂದುಕೊಂಡು, ಸರದ ಸಮೇತ ಅದನ್ನು ಮುಳುಗಿಸಿದೆವು ಎಂದು ಹೇಳಿದ್ದಾರೆ.

ಶಾಸಕರ ಮೊರೆ ಹೋದ ದಂಪತಿ

ಇನ್ನು ಸಿಬ್ಬಂದಿ ಮಾತಿಂದ ಕಂಗಾಲಾದ ದಂಪತಿ ಉಮಾದೇವಿ ಹಾಗೂ ಕುಟುಂಬದವರು ಮಾಗಡಿ ರಸ್ತೆ ಪೊಲೀಸರಿಗೆ ಮಾಹಿತಿ ನೀಡಿದರು. ಗೋವಿಂದರಾಜನಗರ ಕ್ಷೇತ್ರದ ಶಾಸಕ ಪ್ರಿಯಕೃಷ್ಣ ಅವರಿಗೂ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಅವರ ಮನವಿಗೆ ಒಪ್ಪಿದ ಶಾಸಕ ಪ್ರಿಯಕೃಷ್ಣ, ದಾಸರಹಳ್ಳಿ ವೃತ್ತದಲ್ಲಿ ಮೊಬೈಲ್ ಟ್ಯಾಂಕ್ ನಿರ್ಮಿಸಿದ್ದ ಗುತ್ತಿಗೆದಾರ ಲಂಕೇಶ್ ಡಿ ಅವರಿಗೆ ಕರೆ ಮಾಡಿ, ಸರ ಹುಡುಕಿಸಿಕೊಡಲು ಸೂಚಿಸಿದ್ದರು.

ಸರಕ್ಕಾಗಿ ಮ್ಯಾರಥಾನ್ ಶೋಧ

ಶೋಧ ಆರಂಭಿಸಿದ ಹುಡುಗುರು ರಾತ್ರಿ ಒಂದಷ್ಟು ಸಮಯ ಹುಡುಕಿ ಹೈರಾಣಾಗಿದ್ದಾರೆ. ಬಳಿಕ ಬೆಳಿಗ್ಗೆ ನೋಡೋಣ ಎಂದು ಹೇಳಿದ್ದರು. ಆದರೆ ನೀರನ್ನು ಹೊರಗೆ ಪಂಪ್ ಮಾಡಿ ಶೋಧ ನಡೆಸಲು ಕುಟುಂಬದವರು ಅನುಮತಿ ಕೋರಿದ್ದರು. ಬೆಳಗಿನ ಜಾವ 5 ಗಂಟೆವರೆಗೆ ಹುಡುಕಿದರೂ ಸರ ಮಾತ್ರ ಸಿಕ್ಕಿರಲಿಲ್ಲ. ಇನ್ನು ಸರ ವಾಪಸ್ ಸಿಗುವುದಿಲ್ಲ ಎಂಬ ನಿರಾಶೆ ಮತ್ತು ದುಃಖದೊಂದಿಗೆ ಉಮಾದೇವಿ ಅವರ ಕುಟುಂಬ ಮನೆಗೆ ವಾಪಸಾಗಿತ್ತು.

300 ವಿಗ್ರಹಗಳ ವಿಸರ್ಜನೆಯಿಂದ ತಳದಲ್ಲಿ ಭಾರಿ ಮಣ್ಣು

ಇನ್ನು ಇದೇ ಟ್ಯಾಂಕ್ ನಲ್ಲಿ ಸುಮಾರು 300 ವಿಗ್ರಹಗಳನ್ನು ವಿಸರ್ಜನೆ ಮಾಡಲಾಗಿತ್ತು. ಹೀಗಾಗಿ ಟ್ಯಾಂಕರ್ ನ ಕಳಗೆ ಭಾರಿ ಪ್ರಮಾಣದ ಮಣ್ಣು ಶೇಖರಣೆಯಾಗಿತ್ತು. ಈ ಮಣ್ಣಿನಲ್ಲಿ ಸರ ಹುಡುಕುವುದು ಸಾಹಸವೇ ಆಗಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ.

10 ಗಂಟೆಗಳ ಕಾರ್ಯಾಚರಣೆ, 10 ಸಾವಿರ ಲೀಟರ್‌ನಷ್ಟು ನೀರು ಹೊರಕ್ಕೆ

ಇನ್ನು ನೀರಲ್ಲಿ ಕರಗಿ ಹೋದ ಗಣಪನ ವಿಗ್ರಹಗಳ ನಡುವೆ ಇದನ್ನು ಹುಡುಕುವುದು ಸುಲಭದ ಮಾತಾಗಿರಲಿಲ್ಲ. ಸುಮಾರು ಸತತ 10 ಗಂಟೆಗಳ ಶೋಧ ಕಾರ್ಯದ ಬಳಿಕ ಭಾನುವಾರ ಮಧ್ಯಾಹ್ನ ಕೊನೆಗೂ ಚಿನ್ನದ ಸರ ಪತ್ತೆಯಾಗಿದೆ. ಅದಕ್ಕಾಗಿ ಅಂದಾಜು 10 ಸಾವಿರ ಲೀಟರ್‌ನಷ್ಟು ನೀರನ್ನು ಜಾಗರೂಕತೆಯಿಂದ ಪಂಪ್ ಮಾಡಿ ಹೊರತೆಗೆಯಲಾಗಿದೆ. ಆ ಮೊಬೈಲ್ ಟ್ಯಾಂಕ್‌ನಲ್ಲಿ ಆಗಲೇ 300ಕ್ಕೂ ಅಧಿಕ ಗಣೇಶ ಮೂರ್ತಿಗಳು ವಿಸರ್ಜನೆಯಾಗಿದ್ದರಿಂದ ದಪ್ಪನೆಯ ಮಣ್ಣು ತಳದಲ್ಲಿ ಕೂತಿತ್ತು ಎಂದು ಸಿಬ್ಬಂದಿ ಹೇಳಿದ್ದಾರೆ.

ಕೊನೆಗೂ ಸರ ಪತ್ತೆ

ಶಾಸಕರ ಒತ್ತಾಯದಂತೆ ಗುತ್ತಿಗೆದಾರ ಲಂಕೇಶ್ ಅವರು ಭಾನುವಾರ ಬೆಳಿಗ್ಗೆ ಕನಿಷ್ಠ ಹತ್ತು ಜನರನ್ನು ಕರೆಸಿಕೊಂಡು ಶೋಧ ಶುರುಮಾಡಿದ್ದಾರೆ. ಬೆಳಿಗ್ಗೆ 10 ರಿಂದ 12.30ರವರೆಗೆ ಹುಡುಕಾಡಿದ ನನ್ನ ಇಬ್ಬರು ಸ್ನೇಹಿತರು ಸುಮಾರು 60 ಗ್ರಾಂ ತೂಕದ ಚಿನ್ನದ ಸರ ಪತ್ತೆ ಮಾಡಿದರು. ಬಳಿಕ ಉಮಾದೇವಿ ಮತ್ತು ರಾಮಯ್ಯ ಅವರನ್ನು ಸಂಪರ್ಕಿಸಿ ಅವರಿಗೆ ಅದನ್ನು ಮರಳಿಸಿದೆವು. ಪೊಲೀಸರು ಹಾಗೂ ಶಾಸಕರಿಗೂ ಈ ಬಗ್ಗೆ ಮಾಹಿತಿ ನೀಡಿದೆವು" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT