ಮಂಗಳೂರು: ನಗರದ ಹೊರವಲಯದ ಸುರತ್ಕಲ್ನಲ್ಲಿರುವ ಮಸೀದಿಯೊಂದಕ್ಕೆ ಭಾನುವಾರ ರಾತ್ರಿ ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಆರು ಮಂದಿಯನ್ನು ಮಂಗಳೂರು ನಗರ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಸುರತ್ಕಲ್ನ ಕಾನಕಟ್ಲ ನಿವಾಸಿ ಭರತ್ ಶೆಟ್ಟಿ(26), ಸುರತ್ಕಲ್ನ ಕಾನಕಟ್ಲ ನಿವಾಸಿ ಚೆನ್ನಪ್ಪ ಶಿವಾನಂದ ಚಲವಾದಿ(19), ನಿತಿನ್ ಹಡಪದ(22), ಸುರತ್ಕಲ್ನ ಚೇಳಾರು ನಿವಾಸಿ ಸುಜಿತ್ ಶೆಟ್ಟಿ(23) ವರ್ಷ, ಹೊಸಬೆಟ್ಟು ಗ್ರಾಮದ ಅಣ್ಣಪ್ಪ(24) ಮತ್ತು ಕಾಟಿಪಳ್ಳದ ಪ್ರೀತಂ ಶೆಟ್ಟಿ(34) ಬಂಧಿತ ಆರೋಪಿಗಳು.
ಕಾಟಿಪಳ್ಳದ 3ನೇ ಬ್ಲಾಕ್ನಲ್ಲಿರುವ ಮಜಿದುಲ್ಲಾ ಹುದಾಜುಮ್ಮ ಮಸೀದಿಯ ಅಧ್ಯಕ್ಷ ಕೆ ಎಚ್ ಅಬ್ದುಲ್ ರಹಿಮಾನ್ ನೀಡಿದ ದೂರಿನ ಪ್ರಕಾರ, ನಿನ್ನೆ ರಾತ್ರಿ 9.50ರ ಸುಮಾರಿಗೆ ಮಸೀದಿಯ ಹಿಂಬದಿಯ ಜನತಾ ಕಾಲೋನಿಯ ಸಮಾಧಿ ಕಡೆಯಿಂದ ಎರಡು ಬೈಕ್ಗಳಲ್ಲಿ ಆಗಮಿಸಿದ ದುಷ್ಕರ್ಮಿಗಳು ಮಸೀದಿಗೆ ಕಲ್ಲು ತೂರಾಟ ನಡೆಸಿದ್ದಾರೆ.
ಹಿಂದೂ ಮತ್ತು ಮುಸ್ಲಿಂ ಸಮುದಾಯಗಳಲ್ಲಿ ಅಶಾಂತಿಯನ್ನು ಉಂಟುಮಾಡುವ ಉದ್ದೇಶದಿಂದ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಕಿಟಕಿಯ ಗಾಜುಗಳಿಗೆ ಹಾನಿಯಾಗಿದೆ.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಇಂದು ಬೆಳಗ್ಗೆ ಕದ್ರಿ ಮಂಜುನಾಥ ದೇವಸ್ಥಾನದ ರಸ್ತೆ ಬಳಿ ಆರೋಪಿಗಳನ್ನು ಬಂಧಿಸಲಾಗಿದೆ.
ಭರತ್ ಶೆಟ್ಟಿ 12 ಪ್ರಕರಣಗಳನ್ನು ಎದುರಿಸುತ್ತಿದ್ದು, ಚೆನ್ನಪ್ಪ ವಿರುದ್ಧ ಐದು ಪ್ರಕರಣಗಳಿವೆ. ನಿತಿನ್, ಅಣ್ಣಪ್ಪ ಮತ್ತು ಪ್ರೀತಂ ಕೂಡ ಎರಡು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಬಂಧಿತ ಆರೋಪಿಗಳಿಂದ ಒಂದು ಕಾರು, ಎರಡು ಬೈಕ್ ಹಾಗೂ ನಾಲ್ಕು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.