ಮೈಸೂರು: ಮುಡಾದಲ್ಲಿ ಹಗರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಎಫ್ಐಆರ್ ದಾಖಲಿಸುವಲ್ಲಿ ಯಶಸ್ವಿಯಾದ ಆರ್ ಟಿ ಐ ಕಾರ್ಯಕರ್ತ ಹಾಗೂ ದೂರುದಾರ ಸ್ನೇಹಮಯಿ ಕೃಷ್ಣ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಸ್ನೇಹಮಯಿ ಕೃಷ್ಣ ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿರುವುದು ಬೆಳಕಿಗೆ ಬಂದಿದೆ. ಲಾವಣ್ಯ ಎಂಬ ಮಹಿಳೆ ಆಗಸ್ಟ್ 21, 2024 ರಂದು ನಂಜನಗೂಡು ಪೊಲೀಸರಿಗೆ ದೂರು ನೀಡಿದ್ದೂ, ಅದೇ ದಿನ ಎಫ್ಐಆರ್ ಕೂಡ ದಾಖಲಾಗಿದೆ. ಸಿದ್ದರಾಮಯ್ಯ ವಿರುದ್ಧ ಕೃಷ್ಣ ಆರೋಪ ಮಾಡಿ ಕೇಸ್ ದಾಖಲಸಿದ ನಂತರ ಶನಿವಾರ ತಡರಾತ್ರಿಯಿಂದಲೇ ಈ ಸುದ್ದಿ ಹರಿದಾಡಲು ಪ್ರಾರಂಭಿಸಿತು. ಜುಲೈ 18, 2024 ರಂದು ನ್ಯಾಯಾಲಯದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಕೃಷ್ಣ ಇತರ ಆರೋಪಿಗಳೊಂದಿಗೆ ತನ್ನ ಮೇಲೆ ಹಲ್ಲೆ ಮಾಡಿ, ಬಟ್ಟೆ ಎಳೆದು, ಅವಾಚ್ಯವಾಗಿ ನಿಂದಿಸಿ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ಲಾವಣ್ಯ ದೂರಿನಲ್ಲಿ ಆರೋಪಿಸಿದ್ದಾರೆ.
ನನ್ನ ಹಾಗೂ ನನ್ನ ತಾಯಿಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಬರೆದಿದ್ದಾರೆ. 2024ರ ಜುಲೈ 28ರಂದು ಕೋರ್ಟ್ ಮುಗಿಸಿಕೊಂಡು ಹೋಗುತ್ತಿದ್ದ ವೇಳೆ ದಾಳಿ ನಡೆಸಿದ್ದಾರೆ ಎಂದೂ ಕೂಡ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಪ್ರಭಾ ಎ1 ಆರೋಪಿಯಾಗಿದ್ದರೆ, ಸಿದ್ದಪ್ಪ ಎಂಬವರು ಎ2 ಆರೋಪಿ. ಅತ್ತೆ, ಮಾವ ಹಾಗೂ ಅತ್ತೆಯ ಸಹೋದರನಿಗೆ ಸ್ನೇಹಮಯಿ ಕೃಷ್ಣ ಕಿರುಕುಳ ನೀಡುತ್ತಿದ್ದಾನೆ ಎಂದಿದ್ದಾರೆ.
2020ರಲ್ಲಿ ತನ್ನ ಗಂಡ ಹೃದಯಘಾತದಿಂದ ನಿಧನ ಹೊಂದಿದ್ದಾರೆ. ಡೆತ್ ಬೆನಿಫಿಸರಿ ಹಣ ಹಾಗು ನನ್ನ ಒಡವೆ ಪಡೆಯುವ ವಿಚಾರ ಸಂಬಂಧ ನ್ಯಾಯಾಲಯದಲ್ಲಿ ಪ್ರಕರಣ ಇದೆ. ಪ್ರಕರಣದ ವಿಚಾರಣೆ ಮುಗಿಸಿ ನ್ಯಾಯಾಲಯದಿಂದ ತಾಯಿ ಜೊತೆ ಮನೆಗೆ ಬರುವಾಗ ಅಟ್ಯಾಕ್ ಮಾಡಿರುವುದಾಗಿ ಆರೋಪ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧವೇ ಹೋರಾಟ ಮಾಡುತ್ತಿರುವ ಸ್ನೇಹಮಯಿ ಕೃಷ್ಣ ವಿರುದ್ಧ U/s-85, 126(2), 74, 352, 351(2), 79, 3(5) ಬಿಎನ್ಎಸ್ ಸೆಕ್ಷನ್ ಗಳಿಡಿ ಲಾವಣ್ಯ ಕೇಸ್ ದಾಖಲಿಸಿದ್ದಾರೆ. ಸ್ನೇಹಮಯಿ ಕೃಷ್ಣ ಎ4 ಆರೋಪಿಯಾಗಿದ್ದಾರೆ. ಎ3 ಆರೋಪಿ ಡಾಬಾ ಜಯಕುಮಾರ್ ಜೊತೆ ಸೇರಿ ಹಲ್ಲೆ ಯತ್ನಿಸಿದ್ದಾರೆ. ಹಿಡಿದು ಎಳೆದಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಹಾಗೂ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಸ್ನೇಹಮಯಿ ಕೃಷ್ಣ ನನ್ನ ವಿರುದ್ಧ ಮಹಿಳೆ ಮಾಡುತ್ತಿರುವುದು ಸುಳ್ಳು ಆರೋಪ. ನನ್ನ ವಿರುದ್ಧ ಹಲವರು ಷಡ್ಯಂತ್ರ ಮಾಡುತ್ತಿದ್ದಾರೆ. ನಾನು ಜೈಲಿಗೆ ಹೋದರೂ ಸರಿ ಹೋರಾಟ ನಿಲ್ಲಿಸುವುದಿಲ್ಲ. 2012 ರಲ್ಲಿಯೂ ಇದೇ ರೀತಿ ಸುಳ್ಳು ಎಫ್ಐಆರ್ ದಾಖಲಿಸಿ ಜೈಲಿಗೆ ಕಳಿಸಿದ್ದರು. ಆಗಲೂ ಕೂಡ ನಾನು ಜೈಲಿನಿಂದಲೇ ಹೋರಾಟ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದಾರೆ.
ಏತನ್ಮಧ್ಯೆ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ (ಇಡಿ) ಪತ್ರ ಬರೆದಿರುವುದಾಗಿ ಕೃಷ್ಣ ಬಹಿರಂಗಪಡಿಸಿದ್ದಾರೆ. 5,000 ಕೋಟಿ ರೂ.ಗೂ ಹೆಚ್ಚು ದುರ್ಬಳಕೆಯಾಗಿದೆ ಎಂದು ಆರೋಪಿಸಿದ್ದಾರೆ. ನಾನು ಈಗಾಗಲೇ ಇಡಿಗೆ ಇಮೇಲ್ ಕಳುಹಿಸಿದ್ದೇನೆ ಮತ್ತು ಸೋಮವಾರ ವೈಯಕ್ತಿಕವಾಗಿ ದೂರು ಸಲ್ಲಿಸುತ್ತೇನೆ. 2015 ರಿಂದ ಮುಡಾದ ನಿವೇಶನ ಹಂಚಿಕೆ ಪ್ರಕ್ರಿಯೆಯಲ್ಲಿನ ಅಕ್ರಮಗಳನ್ನು ಬೆಳಕಿಗೆ ತರುವುದು ನನ್ನ ಉದ್ದೇಶವಾಗಿದೆ. ಅರ್ಹ ಫಲಾನುಭವಿಗಳಿಗೆ ನಿವೇಶನಗಳನ್ನು ನಿರಾಕರಿಸಲಾಗಿದೆ. ಸಿಬಿಐನಿಂದ ಸಮಗ್ರ ತನಿಖೆಗೆ ಕೋರಿ ನಾನು ಈಗಾಗಲೇ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದೇನೆ ಎಂದು ಅವರು ಹೇಳಿದರು.