ಪಾಣತ್ತೂರು ಎಸ್ ಕ್ರಾಸ್ ಜಂಕ್ಷನ್ ನಲ್ಲಿ ಟ್ರಾಫಿಕ್  
ರಾಜ್ಯ

ಅತಿ ಹೆಚ್ಚು GST ಪಾವತಿಸುವ ಮಹದೇವಪುರ ಐಟಿ ಕಾರಿಡಾರ್‌: ನಿತ್ಯವೂ ಟ್ರಾಫಿಕ್ ಜಾಮ್ ಕಿರಿಕಿರಿ; ಸಂಚಾರ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಅಡ್ಡಿ

ಪ್ರತಿದಿನ ಪೀಕ್ ಸಮಯದಲ್ಲಿ ವಾಹನ ಚಾಲಕರ ಸಮಯ ಸುಮಾರು ಒಂದು ಗಂಟೆ ರಸ್ತೆಯಲ್ಲೇ ವ್ಯಯವಾಗುತ್ತದೆ. ಈ ಸ್ಥಳಗಳಲ್ಲಿ ಪ್ರಮುಖ ರಸ್ತೆ ಯೋಜೆಗಳಿಗಾಗಿ 55 ಆಸ್ತಿಗಳಲ್ಲಿ 49 ಆಸ್ತಿಗಳ ಭೂಸ್ವಾಧೀನವನ್ನು ಬಿಬಿಎಂಪಿ ಪೂರ್ಣಗೊಳಿಸಿದೆ.

ಬೆಂಗಳೂರು: ಮಹದೇವಪುರ ವಲಯದಲ್ಲಿ, ಪಾಣತ್ತೂರು ‘ಎಸ್’ ಕ್ರಾಸ್ ಜಂಕ್ಷನ್, ಬಾಲಗೆರೆ ಮತ್ತು ಗುಂಜೂರನ್ನು ಸಂಪರ್ಕಿಸುವ ವರ್ತೂರು ಮುಖ್ಯ ರಸ್ತೆ, ಮತ್ತು ಸರ್ಜಾಪುರ ಮತ್ತು ಬೆಳ್ಳಂದೂರಿಗೆ ಹೋಗುವ ಕಾರ್ಮೆಲಾರಾಮ್ ಜಂಕ್ಷನ್‌ ಭಾರೀ ಟ್ರಾಫಿಕ್ ಜಾಮ್ ಗೆ ಹೆಸರುವಾಸಿಯಾಗಿದೆ.

ಈ ಸ್ಥಳಗಳಲ್ಲಿ ವಾಹನಗಳು ತುಂಬಾ ನಿಧಾನವಾಗಿ ಚಲಿಸುವುದರಿಂದ ಪ್ರತಿದಿನ ಪೀಕ್ ಸಮಯದಲ್ಲಿ ವಾಹನ ಚಾಲಕರ ಸಮಯ ಸುಮಾರು ಒಂದು ಗಂಟೆ ರಸ್ತೆಯಲ್ಲೇ ವ್ಯಯವಾಗುತ್ತದೆ. ಈ ಸ್ಥಳಗಳಲ್ಲಿ ಪ್ರಮುಖ ರಸ್ತೆ ಯೋಜನೆಗಳಿಗಾಗಿ 55 ಆಸ್ತಿಗಳಲ್ಲಿ 49 ಆಸ್ತಿಗಳ ಭೂಸ್ವಾಧೀನವನ್ನು ಬಿಬಿಎಂಪಿ ಪೂರ್ಣಗೊಳಿಸಿದೆ. ಬಿಬಿಎಂಪಿ ರಸ್ತೆ ವಿಸ್ತರಣೆ ಕಾರ್ಯ ಪ್ರಾರಂಭಿಸಿದ ಮೇಲೆ ಪಾಣತ್ತೂರು ಜಂಕ್ಷನ್‌ನಲ್ಲಿ ವಾಹನ ಚಾಲಕರಿಗೆ ಸ್ವಲ್ಪ ವಿಶ್ರಾಂತಿ ಸಿಗಬಹುದು.

ನಾವು 49 ಮಾಲೀಕರಿಂದ ಭೂಮಿಯನ್ನು ಪಡೆದುಕೊಂಡಿದಿದ್ದು, ಇದಕ್ಕಾಗಿ 13.50 ಕೋಟಿ ರೂಪಾಯಿ ನಗದು ಪರಿಹಾರವಾಗಿ ಪಾವತಿಸಿದ್ದೇವೆ, ಇತರ ಯೋಜನೆಗಳಿಂದ ಹಣವನ್ನು ಪಾಣತ್ತೂರು ‘ಎಸ್’ ಕ್ರಾಸ್ ಜಂಕ್ಷನ್ ರಸ್ತೆ ಅಗಲೀಕರಣ ಯೋಜನೆಗೆ ವ್ಯಯಿಸುತ್ತೇವೆ. ಬಿಬಿಎಂಪಿ ಇನ್ನೂ ನಾಲ್ಕು ಆಸ್ತಿ ಮಾಲೀಕರನ್ನು ಮನವೊಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ವಿಷಯಗಳು ಕಾರ್ಯರೂಪಕ್ಕೆ ಬಂದರೆ, ಮೂರು ಅಥವಾ ನಾಲ್ಕು ತಿಂಗಳಲ್ಲಿ, ಇಲ್ಲಿ ಕೆಲಸ ಪೂರ್ಣಗೊಳ್ಳುತ್ತದೆ ಎಂದು ಬಿಬಿಎಂಪಿಯ ರಸ್ತೆ ಮೂಲಸೌಕರ್ಯ ವಿಭಾಗದ ಹಿರಿಯ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.

ಕಾರ್ಮೆಲಾರಾಮ್ ಜಂಕ್ಷನ್‌ನಲ್ಲಿ, ಬಿಬಿಎಂಪಿಯ ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕುಗಳನ್ನು (ಟಿಡಿಆರ್) ಮಾಲೀಕರು ತಿರಸ್ಕರಿಸಿರುವುದರಿಂದ ರೈಲ್ವೆ ಓವರ್ ಬ್ರಿಡ್ಜ್‌ನ ಕೆಲಸ ಸ್ಥಗಿತಗೊಂಡಿದೆ. ಹತ್ತೊಂಬತ್ತು ಆಸ್ತಿಗಳನ್ನು ಗುರುತಿಸಲಾಗಿದೆ ಮತ್ತು 36 ಮಾಲೀಕರಿದ್ದಾರೆ. ಅವರೆಲ್ಲರೂ ಟಿಡಿಆರ್ ತಿರಸ್ಕರಿಸಿದ್ದಾರೆ ಎಂದು ತಿಳಿಸಿದ್ದಾರೆ. ಈಗ ನಾವು ನಗದು ಪರಿಹಾರವನ್ನು ರೂಪಿಸಬೇಕು ಮತ್ತು ಭೂಸ್ವಾಧೀನಕ್ಕಾಗಿ ಪ್ರಸ್ತಾವನೆಯನ್ನು ಕಳುಹಿಸಬೇಕು ಎಂದು ಬಿಬಿಎಂಪಿಯ ಭೂಸ್ವಾಧೀನ ವಿಭಾಗದ ಅಧಿಕಾರಿಯೊಬ್ಬರು ಹೇಳಿದರು.

ಏತನ್ಮಧ್ಯೆ, ರೈಲ್ವೆ ಓವರ್ ಬ್ರಿಡ್ಜ್ (ಆರ್‌ಒಬಿ) ಗಾಗಿ ಗಿರ್ಡರ್‌ಗಳು ಮತ್ತು ಪಿಯರ್‌ಗಳ ಕೆಲಸ ಮುಗಿದಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇಲ್ಲಿಯವರೆಗೆ, ಕಾರ್ಮೆಲಾರಾಮ್ ಜಂಕ್ಷನ್‌ನಲ್ಲಿ ಕೇವಲ ಶೇ. 30 ರಷ್ಟು ಕೆಲಸ ಪೂರ್ಣಗೊಂಡಿದೆ. ಉಳಿದ ಶೇ. 70 ರಷ್ಟು ಕೆಲಸವು ಬಿಬಿಎಂಪಿ ಆರ್‌ಒಬಿ ಕೆಲಸಕ್ಕಾಗಿ ರೈಲ್ವೆ ಇಲಾಖೆಗೆ ಭೂಮಿಯನ್ನು ಹಸ್ತಾಂತರಿಸಿದರೆ ಮಾತ್ರ ನಡೆಯುತ್ತದೆ. ಸದ್ಯಕ್ಕೆ, ಕೆಲವು ಮಾಲೀಕರು ತಮ್ಮ ಭೂಮಿಯಲ್ಲಿ ಸಂಚಾರಕ್ಕೆ ಅವಕಾಶ ನೀಡುವಂತೆ ನಾವು ವಿನಂತಿಸಿದ್ದೇವೆ ಎಂದು ನೈಋತ್ಯ ರೈಲ್ವೆಯ ಹಿರಿಯ ಅಧಿಕಾರಿ ಹೇಳಿದರು.

ಅದೇ ರೀತಿ, ವರ್ತೂರು ಮುಖ್ಯ ರಸ್ತೆಯಲ್ಲಿರುವ 143 ಆಸ್ತಿ ಮಾಲೀಕರು ಬಿಬಿಎಂಪಿಯಿಂದ ಟಿಡಿಆರ್‌ಗೆ ಒಪ್ಪಿಗೆ ನೀಡಿಲ್ಲ, ಮತ್ತು ಪರಿಣಾಮವಾಗಿ, ವರ್ತೂರು ಮುಖ್ಯ ರಸ್ತೆಯ ಮೂಲಕ ಹಾದುಹೋಗುವ ಆನೇಕಲ್ ಮತ್ತು ಹೊಸಕೋಟೆ ನಡುವಿನ ಎಲಿವೇಟೆಡ್ ಕಾರಿಡಾರ್ ಮತ್ತು ಗ್ರೇಡ್ ಸಪರೇಟರ್‌ನ ಕೆಲಸ ಇನ್ನೂ ಪ್ರಾರಂಭವಾಗಿಲ್ಲ. ವಿಳಂಬದಿಂದಾಗಿ, ಪೀಕ್ ಅವರ್‌ನಲ್ಲಿ ಈ ಪ್ರದೇಶಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿರುತ್ತದೆ.

ಈ ಕಾರಿಡಾರ್ ದೇಶದ ಅತಿ ಹೆಚ್ಚು ಜಿಎಸ್‌ಟಿ ಮತ್ತು ರಸ್ತೆ ತೆರಿಗೆ ಸಂಗ್ರಹದ ಮೂಲಕ ರಾಜ್ಯ ಮತ್ತು ಕೇಂದ್ರ ಖಜಾನೆಗೆ ಗಣನೀಯವಾಗಿ ಕೊಡುಗೆ ನೀಡುತ್ತದೆ ಎಂದು ಕಾರ್ಮೆಲಾರಾಮ್ ಬಳಿ ವಾಸಿಸುವ ಮತ್ತು ಔಟರ್ ರಿಂಗ್ ರಸ್ತೆಯಲ್ಲಿರುವ ಖಾಸಗಿ ಕಂಪನಿಯ ಪ್ರಧಾನ ಸಲಹೆಗಾರರಾಗಿ ಕೆಲಸ ಮಾಡುತ್ತಿರುವ ಸಂಧ್ಯಾ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಆದರೂ, ನಾವು ಪ್ರತಿದಿನ, ವಿಶೇಷವಾಗಿ ಕಾರ್ಮೆಲಾರಾಮ್, ಎಇಟಿ ಮತ್ತು ಪಾಣತ್ತೂರು ಜಂಕ್ಷನ್‌ಗಳಲ್ಲಿ ನಿರಂತರ ಸಂಚಾರ ದಟ್ಟಣೆಯನ್ನು ಎದುರಿಸುತ್ತಿದ್ದೇವೆ, ಇದು ಸರ್ಜಾಪುರ ರಸ್ತೆ ಮತ್ತು ಔಟರ್ ರಿಂಗ್ ರಸ್ತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದಿದ್ದಾರೆ.

ಪಾಣತ್ತೂರು ಜಂಕ್ಷನ್‌ನಲ್ಲಿ ಹೆಚ್ಚುವರಿ ಸಂಚಾರ ಪೊಲೀಸರು ಮತ್ತು ಮಾರ್ಷಲ್‌ಗಳನ್ನು ನಿಯೋಜಿಸುವುದು ಮತ್ತು 2025 ರಲ್ಲಿ ಎಇಟಿ ಜಂಕ್ಷನ್‌ನಲ್ಲಿ ಹೊಸ ಸಂಚಾರ ಸಿಗ್ನಲ್ ಸ್ಥಾಪಿಸುವುದು ಸೇರಿದಂತೆ ಹಲವು ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿವೆ. ಆದಾಗ್ಯೂ, ಪೀಕ್ ಅವರ್‌ನಲ್ಲಿ ಕಳಪೆ ಸಂಚಾರ ನಿರ್ವಹಣೆ ಮತ್ತು ಬೆಸ್ಕಾಂ ಮತ್ತು ಬಿಬಿಎಂಪಿ ಗುತ್ತಿಗೆದಾರರಿಂದ ಅನಿಯಂತ್ರಿತ ರಸ್ತೆ ಅಗೆಯುವಿಕೆಯಿಂದಾಗಿ ಸಂಚಾರ ದಟ್ಟಣೆ ಮುಂದುವರೆದಿದೆ ಎಂದು ಅವರು ಹೇಳಿದರು.

ಕಾರ್ಮೆಲಾರಾಮ್ ರೈಲ್ವೆ ಕ್ರಾಸಿಂಗ್ ಕಳೆದ 18 ತಿಂಗಳುಗಳಿಂದ ನಡೆಯುತ್ತಿರುವ ಆರ್‌ಒಬಿ ಕೆಲಸದಿಂದಾಗಿ ಮುಚ್ಚಲ್ಪಟ್ಟಿದೆ ಎಂದು ಮಹದೇವಪುರ ನಿವಾಸಿ ಜೋಸ್ ವಿ ಹೇಳಿದರು. ಚಿಕ್ಕಬೆಳ್ಳಂದೂರನ್ನು ಸರ್ಜಾಪುರ ಮುಖ್ಯ ರಸ್ತೆಗೆ ಸಂಪರ್ಕಿಸುವ ಸಮಾನಾಂತರ ರಸ್ತೆಯನ್ನು ತೆರೆಯಲಾಗಿದ್ದರೂ, ಅದು ಅರ್ಧದಷ್ಟು ಪೂರ್ಣಗೊಂಡಿದೆ, ಇದು ಹಲವಾರು ಅಪಘಾತಗಳು ಮತ್ತು ಸಂಚಾರ ದಟ್ಟಣೆಗೆ ಕಾರಣವಾಗಿದೆ.

ರಸ್ತೆಗಳ ಕಳಪೆ ಸ್ಥಿತಿಯಿಂದಾಗಿ ಇತ್ತೀಚೆಗೆ 19 ವರ್ಷದ ಬಾಲಕನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಆರ್‌ಒಬಿ ಮತ್ತು 100 ಅಡಿ ರಸ್ತೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ನಾವು ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ