ಬೆಂಗಳೂರು: ನಮ್ಮ ಮೆಟ್ರೋ ಜನರದ್ದು, ಯಾವ ಪಕ್ಷದ ಸ್ವತ್ತು ಅಲ್ಲ ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ ಬಿಜೆಪಿಯವರಿಗೆ ಜನಾಸಕ್ತಿಗಿಂತ, ಪ್ರಚಾರಸಕ್ತಿ ಹೆಚ್ಚು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ತೀವ್ರವಾಗಿ ಕಿಡಿಕಾರಿದ್ದಾರೆ.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಸಂಬಂಧಿಸಿ ಬಿಜೆಪಿ ನಾಯಕರು ಇಡೀ ಮೆಟ್ರೋ ಯೋಜನೆಯನ್ನೇ ಕೇಂದ್ರದ ಬಿಜೆಪಿ ಸರ್ಕಾರ ಮಾಡಿದೆ ಎಂದು ಪ್ರಚಾರ ಮಾಡುತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿರುವ ಹಿನ್ನೆಲೆಯಲ್ಲಿ ರಾಮಲಿಂಗಾ ರೆಡ್ಡಿಯವರು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯ ವಿಧಾನಸಭಾ ಮತ್ತು ಲೋಕಸಭಾ ಸದಸ್ಯರುಗಳಿಗೆ, ಪ್ರಮುಖ ಮುಖಂಡರುಗಳಿಗೆ ಎಲ್ಲಾ ಸತ್ಯಗಳು ತಿಳಿದಿದ್ದರೂ ಕೂಡ ಅದನ್ನು ಲೆಕ್ಕಿಸದೇ, ಸ್ವಲ್ಪವೂ ನಾಚಿಕೆಯಿಲ್ಲದೇ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ನಮ್ಮಮೆಟ್ರೋ ಶ್ರೇಯಸ್ಸು ಕೊಡುತ್ತಿದ್ದಾರೆ. 2006 ರಲ್ಲಿ ಮನಮೋಹನ್ ಸಿಂಗ್ ರವರು ಪ್ರಧಾನ ಮಂತ್ರಿಗಳಾಗಿದ್ದಾಗ, ಧರ್ಮಸಿಂಗ್ ಮುಖ್ಯಮಂತ್ರಿಯಾಗಿದ್ದಾಗಸ, ನಾನು ಬೆಂಗಳೂರು ಉಸ್ತುವಾರಿ ಸಚಿವನಾಗಿದ್ದಾಗ ಎಂ.ಜಿ ರಸ್ತೆಯಲ್ಲಿ ನಮ್ಮ ಮೆಟ್ರೋಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ನಮ್ಮ ಮೆಟ್ರೋ ಜನರದ್ದು, ಯಾವ ಪಕ್ಷದ ಸ್ವತ್ತು ಅಲ್ಲ ಎಂಬುದು ನಮ್ಮ ಭಾವನೆಯಾಗಿತ್ತು. ಆದರೆ, ಬಿಜೆಪಿಯವರಿಗೆ ಜನಾಸಕ್ತಿಗಿಂತ, ಪ್ರಚಾರಸಕ್ತಿ ಹೆಚ್ಚಿದೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕ ಸರ್ಕಾರ ಸರಳ ಪಾಲುದಾರ ಅಲ್ಲ. ಅನೇಕ ಸಂದರ್ಭಗಳಲ್ಲಿ ಅದು ಹೆಚ್ಚಿನ ಹಣವನ್ನು ಖರ್ಚು ಮಾಡುತ್ತದೆ, ವಿಶೇಷವಾಗಿ ಜಮೀನು ಖರೀದಿ, ವೆಚ್ಚ ಮಿತಿಗೆ ಮೇಲ್ಪಟ್ಟ ಭಾಗಗಳು ಮತ್ತು ಪ್ರಮುಖ ಯೋಜನಾ ಅಂಶಗಳಿಗಾಗಿ ಕರ್ನಾಟಕ ಸರ್ಕಾರವು ಖರ್ಚು ಮಾಡುತ್ತಿದೆ. ಬಿಜೆಪಿ ನಾಯಕರು ಅರ್ಧ ಸತ್ಯಗಳನ್ನು ಹರಡುವುದನ್ನು ನಿಲ್ಲಿಸಿ, ಕರ್ನಾಟಕ ಸರ್ಕಾರಕ್ಕೆ ಅದರ ನಿಜವಾದ ಗೌರವ ನೀಡಬೇಕು ಎಂದು ಹೇಳಿದ್ದಾರೆ.
‘ನಮ್ಮ ಮೆಟ್ರೊದ ಹಂತ 3ರಲ್ಲಿ ಕರ್ನಾಟಕ ಶೇ 20 ಅನುದಾನ ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ ಕೇಂದ್ರ ಸರ್ಕಾರ ಶೇ 20 ಉಳಿದ ಶೇ 60 ಅನುದಾನವನ್ನು ಮೆಟ್ರೋ ಸಂಸ್ಥೆ ಸಾಲವಾಗಿ ಪಡೆದಿದೆ. ಈ ಸಾಲಕ್ಕೆ ರಾಜ್ಯ ಸರ್ಕಾರ ಖಾತರಿ ನೀಡಿದೆ. ‘ಮೆಟ್ರೊ ಒಟ್ಟಾರೆ ಕಾಮಗಾರಿಗೆ ಈವರೆಗೆ ರಾಜ್ಯ ಸರ್ಕಾರ ರೂ. 24064.30 ಕೋಟಿ ನೀಡಿದರೆ ಕೇಂದ್ರ ಸರ್ಕಾರ ರೂ. 17803.85 ಕೋಟಿ ನೀಡಿದೆ. ಮೆಟ್ರೊ ಸಂಸ್ಥೆ ರೂ,435498.53 ಕೋಟಿ ಸಾಲ ಮಾಡಿದೆ. ರಾಜ್ಯದ ಪಾಲೇ ಹೆಚ್ಚಿದೆ. ಇನ್ನೆಷ್ಟು ಕಾಲ ಬಿ.ಜೆ.ಪಿ ನಾಯಕರು ತಮ್ಮದೇ ರಾಜ್ಯವನ್ನು ಇಂಥ ನಿರ್ಲಕ್ಷ್ಯದಿಂದ ಅವಮಾನಿಸುತ್ತಾ, ನಮ್ಮ ಮೆಟ್ರೋ ಕೇಂದ್ರದ ಉಡುಗೊರೆ ಎಂದು ನಟಿಸುತ್ತಾರೆ? ನಂಬಿಸುತ್ತಾರೆ? ಎಂದು ವಾಗ್ದಾಳಿ ನಡೆಸಿದ್ದಾರೆ.