ಉಡುಪಿ: ಕರ್ನಾಟಕದ ಉಡುಪಿಗೆ ಭೇಟಿ ನೀಡಿರುವ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಶ್ರೀಕೃಷ್ಣ ಮಠದಲ್ಲಿರುವ ಪೂಜಾ ಪಾತ್ರೆ ತೊಳೆಯುವ ಮೂಲಕ ಸರಳತೆ ಮೆರೆದಿದ್ದು ಅವರಿಗೆ ರಾಜ್ಯಸಭೆ ಸದಸ್ಯೆ ಸುಧಾಮೂರ್ತಿ ಸಾಥ್ ನೀಡಿದರು.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಶ್ರೀಕೃಷ್ಣ ಮಠದಲ್ಲಿ ಸಾಂಪ್ರದಾಯಿಕ ಹೊಸ್ತಿಲು ಪೂಜೆ, ದೇವರ ಪೂಜಾ ಸಾಮಗ್ರಿ ಸ್ವಚ್ಛ ನಡೆಸುವ ಮೂಲಕ ಗಮನ ಸೆಳೆದದ್ದು ಮಾತ್ರವಲ್ಲ, ತಮ್ಮ ಮನೆಯಿಂದಲೇ ತಂದ ಹಿಡಿ ಅವಲಕ್ಕಿಯನ್ನು ಶ್ರೀಪಾದರ ಮೂಲಕ ಕಾಣಿಕೆ ಸಮೇತವಾಗಿ ಶ್ರೀಕೃಷ್ಣ ದೇವರಿಗೆ ಅರ್ಪಿಸಿದರು.
ಶನಿವಾರ ಬೆಳಗ್ಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಸಚಿವರು ನವಗೃಹ ಕಿಂಡಿಯಲ್ಲಿ ಶ್ರೀಕೃಷ್ಣ ದೇವರ ಮಹಾಪೂಜೆಯನ್ನು ಕಂಡು ಅನಂತರ ಮುಖ್ಯಪ್ರಾಣ ಹಾಗೂ ಮಧ್ವಾಚಾರ್ಯರ ಪೂಜೆಯಲ್ಲಿ ಭಾಗವಹಿಸಿದರು. ಶ್ರೀಪಾದರು ನಡೆಸುವ ಪ್ರದಕ್ಷಿಣೆ ನಮಸ್ಕಾರ ಪೂಜೆಯಲ್ಲಿ ಪಾಲ್ಗೊಂಡರು.
ಆಷಾಢ ಮಾಸದ ಹುಣ್ಣಿಮೆಗೆ ಆಚರಿಸುವ ಹೊಸ್ತಿಲು ಬರೆಯುವ ಪೂಜೆಯ ನಿಮಿತ್ತ ಸಚಿವರು ಶ್ರೀಕೃಷ್ಣ ಮಠದ ಮುಖ್ಯದ್ವಾರ, ಸರ್ವಜ್ಞ ಪೀಠದ ದ್ವಾರದಲ್ಲಿ ಹೊಸ್ತಿಲು ಬರೆದು ಲಕ್ಷ್ಮೀ ಪೂಜೆ ನೆರವೇರಿಸಿದರು. ಅನಂತರ ಕೃಷ್ಣಮಠದ ಸುತ್ತು ಪೌಳಿಗೆ ಜೋಡಿಸಿರುವ ಕಾಷ್ಠ ಶಿಲ್ಪ ಯಾಳಿಯನ್ನು ಉದ್ಘಾಟಿಸಿದರು. ಮಠದ ಒಳಗೆ ಸಚಿವರಿಗೆ ಸಾಂಪ್ರದಾಯಿಕ ಶೈಲಿಯಲ್ಲಿ ಬಾಗಿನ ನೀಡಿ ಗೌರವಿಸಲಾಯಿತು.
ದೇವರ ಪೂಜಾಪಾತ್ರೆ ತೊಳೆದ ವಿತ್ತ ಸಚಿವೆ
ಇದೇ ವೇಳೆ ಅನಂತರ ಭೋಜನ ಶಾಲೆಯಲ್ಲಿ ದೇವರ ಬೆಳ್ಳಿ ಪಾತ್ರೆಗಳನ್ನು ಶುಚಿಗೊಳಿಸುವ ಕಾಯಕದಲ್ಲೂ ಪಾಲ್ಗೊಂಡು ನಿರ್ಮಲಾ ಸೀತಾರಾಮನ್ ಗಮನ ಸೆಳೆದರು. ಅಂತೆಯೇ ಗೋ ಶಾಲೆಯಲ್ಲಿ ಹಸುಗಳಿಗೆ ಹುಲ್ಲು ನೀಡಿದರು. ಅನಂತರ ಭೋಜನ ಶಾಲೆಯಲ್ಲಿ ಶ್ರಾವಣ ಶನಿವಾರದ ನಿಮಿತ್ತ ಒಂದು ಬಗೆಯ ಸಿಹಿ ತಿಂಡಿ ತಯಾರಿಸಲು ಸೌಟು ಹಿಡಿದು ಹಲ್ವಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದರು. ಅನಂತರ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ, ಮಂಡಲೋತ್ಸವದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡರು. ಒಟ್ಟಿನಲ್ಲಿ ಅವರ ಶ್ರೀಕೃಷ್ಣ ಮಠದ ಭೇಟಿಯು ಸಂಪ್ರದಾಯಿಕ ಬಾಂಧವ್ಯದ ಸಲೆಯಾಗಿತ್ತು. ಈ ಎಲ್ಲ ಚಟುವಟಿಕೆಗಳಲ್ಲಿ ಸುಧಾ ಮೂರ್ತಿಯವರು ಅವರೊಂದಿಗೆ ಇದ್ದರು.
ಹೊಸ್ತಿಲು ಪೂಜೆ
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿಯವರು ಆಷಾಢ ಮಾಸದ ಹುಣ್ಣಿಮೆಯಂದು ನಡೆಸುವ ಹೊಸ್ತಿಲು ಪೂಜೆಯನ್ನು ನಡೆಸಿದರು. ಹಾಗೆಯೇ ದೇವರ ಪಾತ್ರೆಗಳನ್ನು ಸುಧಾಮೂರ್ತಿ ಹಾಗೂ ಸಚಿವೆ ಇಬ್ಬರೂ ಸೇರಿ ಶುಚಿಗೊಳಿಸಿ ದೇವರ ಸೇವೆ ಮಾಡಿದರು.
ಭಾರತ ಲಕ್ಷ್ಮಿ ಬಿರುದು ಪ್ರದಾನ
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ಗೆ ಭಾರತ ಲಕ್ಷ್ಮಿ ಎಂಬ ಬಿರುದು ನೀಡಿ ಉಡುಪಿ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಗೌರವಿಸಿದ್ದಾರೆ. ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರಿಂದ ಬಿರುದು ಪ್ರದಾನ ಮಾಡಿದರು. ಬಿರುದು ಸ್ವೀಕರಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಭಾವುಕರಾದರು. ಶ್ರೀಕೃಷ್ಣನ ಸಂದೇಶಗಳನ್ನು ಪಸರಿಸುವಲ್ಲಿ ಪುತ್ತಿಗೆ ಮಠದ ಕೊಡುಗೆ ಅನನ್ಯ. ಪ್ರತಿದಿನ ಜನರಿಂದ ಭಗವದ್ಗೀತೆ ಬರೆಯಿಸುವುದು ಒಂದು ಯಜ್ಞದಂತೆ ನಡೆಯುತ್ತಿದೆ. ಒಂದು ಕೋಟಿ ಭಗವದ್ಗೀತೆಯ ಬರಹಗಳ ಸಂಗ್ರಹ ಶ್ಲಾಘನೀಯಕಾರ್ಯ. ಇದರಿಂದ ಪ್ರಪಂಚಕ್ಕೆ ಕೃಷ್ಣನ ಸಂದೇಶ ಪಸರಿಸಲಿದೆ ಅಂತ ಶ್ಲಾಘಿಸಿದರು.
ಜನರಿಗೆ ನಿತ್ಯ ಅನ್ನ ದಾಸೋಹ ನಡೆಸುವ ಮೂಲಕ ಅನ್ನ ಬ್ರಹ್ಮನ ಸೇವೆ ಮಾಡಲಾಗುತ್ತಿದೆ. ಒಂದು ದಿನವೂ ಬಿಡುವು ನೀಡದೇ ಕೃಷ್ಣನ ಭೋಜನ ಶಾಲೆಯಲ್ಲಿ ದಾಸೋಹ ನಡೆಯುತ್ತಿದೆ. ಉತ್ತಮ ಭೋಜನದಿಂದ ಸಂತುಷ್ಟನಾದ ಭಕ್ತರಲ್ಲಿ ಕೃಷ್ಣನನ್ನು ಕಾಣಬಹುದು ಅಂತ ನಿರ್ಮಲಾ ಸೀತಾರಾಮನ್ ಹೇಳಿದರು.
ಉಡುಪಿ ಕೃಷ್ಣಮಠದ ಜೊತೆ ನನಗೆ ಅವಿಸ್ಮರಣೀಯ ನೆನಪುಗಳಿವೆ. ಅಷ್ಟಮಠದ ಗುರುಗಳ ಕೃಪೆ ನನ್ನ ಮೇಲಿದೆ ಅಂತ ಸ್ಮರಿಸಿಕೊಂಡರು. ಕೃಷ್ಣ ಭಗವಂತನು ಭಾರತ ದೇಶವನ್ನು ಆಶೀರ್ವದಿಸಲಿ. ನಮ್ಮ ಪ್ರಧಾನಮಂತ್ರಿಗಳಿಗೆ ಶ್ರೀಕೃಷ್ಣನ ಆಶೀರ್ವಾದ ದೊರಕಲಿ. ನಮ್ಮ ದೇಶ ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಭಾರತಮಾತೆಯನ್ನು ದೇವಿ ಎಂದು ಭಾವಿಸುವ ಜನ ನಾವು. ಪ್ರಧಾನ ಮಂತ್ರಿಗಳು ಈ ದೇಶದ ಸೇವೆ ಮಾಡುತ್ತಿದ್ದಾರೆ. ಸ್ವಾರ್ಥವೇ ಇಲ್ಲದೆ ಅವರು ಸೇವೆ ಮಾಡುತ್ತಿದ್ದಾರೆ ಅಂತ ಪ್ರಧಾನಿ ಮೋದಿ ಬಗ್ಗೆ ನಿರ್ಮಲಾ ಸೀತಾರಾಮನ್ ಶ್ಲಾಘಿಸಿದ್ರು. ಸವಾಲುಗಳು ಸರಣಿ ಸರಣಿಯಾಗಿ ಬರುತ್ತಿವೆ. ಗುರುಗಳ ಪ್ರಾರ್ಥನೆ, ದೇವರ ಆಶೀರ್ವಾದ ನಮಗೆ ಶ್ರೀರಕ್ಷೆ ಎಂದರು.
ಹೂಕಟ್ಟಿದ ಸುಧಮ್ಮ
ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಸಾಮಾನ್ಯ ಗೃಹಣಿಯಂತೆ ವಿವಿಧ ಚಟುವಟಿಕೆಗಳಲ್ಲಿ ಭಾಗಿಯಾದರು. ತಮ್ಮ ಸರಳತೆಯಿಂದ ಗಮನ ಸೆಳೆಯುವ ರಾಜ್ಯಸಭಾ ಸದಸ್ಯೆ ಹಾಗೂ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಅವರು ಸಾತ್ ನೀಡಿದರು. ಕೃಷ್ಣನ ಸಮ್ಮುಖದಲ್ಲಿರುವ ಚಂದ್ರ ಶಾಲೆಯಲ್ಲಿ ಕುಳಿತು ಇಬ್ಬರೂ ಹೂವುಗಳನ್ನು ಪೋಣಿಸಿ ಮಾಲೆ ಮಾಡಿ ಅರ್ಪಿಸಿದರು. ಸುಧಾ ಮೂರ್ತಿ ಸ್ವತಃ ಹೂಮಾಲೆ ತಯಾರಿಸಿ ಕೃಷ್ಣನಿಗೆ ಅರ್ಪಿಸಿದರು.
ಬಳಿಕ ಅನ್ನಬ್ರಹ್ಮನ ಸನ್ನಿಧಿಯಲ್ಲಿ ಆಹಾರ ತಯಾರಿಯಲ್ಲೂ ಭಾಗವಹಿಸಿದರು. ಶ್ರೀ ಕೃಷ್ಣ ಮಠದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ತೋರಿಸಿದ ಸರಳತೆ ಮತ್ತು ಭಕ್ತಿ ಎಲ್ಲರ ಮನಸೂರೆಗೊಂಡಿತು. ಇಬ್ಬರೂ ಚಂದ್ರ ಶಾಲೆಯಲ್ಲಿ ಕುಳಿತು ದೇವರ ಸೇವೆಗೆ ಹೂವು ಕಟ್ಟಿದರು. ನಿರ್ಮಲಾ ಸೀತಾರಾಮನ್ ಅವರು ಸಾಮಾನ್ಯ ಗೃಹಿಣಿಯರಂತೆ ದೇವರ ನೈವೇದ್ಯದ ಪಾತ್ರೆಗಳನ್ನು ತೊಳೆದು ಸ್ವಚ್ಛಗೊಳಿಸಿದರು. ಬಳಿಕ ಅನ್ನಬ್ರಹ್ಮನ ಸನ್ನಿಧಿಯಲ್ಲಿ ಆಹಾರ ತಯಾರಿಯಲ್ಲೂ ಭಾಗವಹಿಸಿದರು. ಶ್ರೀ ಕೃಷ್ಣ ಮಠದ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಅವರು ತೋರಿಸಿದ ಸರಳತೆ ಮತ್ತು ಭಕ್ತಿ ಎಲ್ಲರ ಮನಸೂರೆಗೊಂಡಿತು.