ಬೆಂಗಳೂರು: ವಿಧಾನಮಂಡಲ ಮುಂಗಾರು ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ವಿರೋಧ ಪಕ್ಷಗಳ ಆಧಾರರಹಿತ ಆರೋಪಗಳು ಹಾಗೂ ಸುಳ್ಳುಗಳನ್ನು ಸಮರ್ಥವಾಗಿ ಎದುರಿಸುವಂತೆ ಪಕ್ಷದ ಶಾಸಕರಿಗೆ ಮುಖ್ಯಮಂತ್ರಿ ಹಾಗೂ ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ಸೂಚನೆ ನೀಡಿದ್ದಾರೆ.
ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆದಿದ್ದು, ಸಭೆಯಲ್ಲಿ ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರು ಗೈರು ಹಾಜರಾಗಿದ್ದರು ಎಂದು ತಿಳಿದಬಂದಿದೆ. ಆದರೆ, ಅವರ ಪುತ್ರ, ಎಂಎಲ್'ಲಿ ರಾಜೇಂದ್ರ ರಾಜಣ್ಣ ಅವರು ಹಾಜರಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಶಾಸಕರು ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ, ಸರ್ಕಾರದ ನೀತಿಗಳನ್ನು ಸಮರ್ಥಿಸಿಕೊಳ್ಳಲು ಹಾಗೂ ಉದ್ದೇಶಿಸಿರುವ ಮಸೂದೆಗಳ ಅಂಗೀಕಾರ ಖಚಿತಪಡಿಸಿಕೊಳ್ಳಲು ಸದನದಲ್ಲಿ ಹಾಜರಿರುವಂತೆ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಇತರ ಕಾರ್ಯಕ್ರಮಗಳಿಗೆ ಹಾಜರಾಗುವ ನೆಪದಲ್ಲಿ ಶಾಸಕರು ಸದನಕ್ಕೆ ಗೈರು ಹಾಜರಾಗುವಂತಿಲ್ಲ ಎಂದು ಖಡಕ್ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.
ಇದೇ ವೇಳೆ ಜೂನ್ 4 ರಂದು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ವಿಚಾರವನ್ನು ಸಿದ್ದರಾಮಯ್ಯ ಅವರು ಉಲ್ಲೇಖಿಸಿದ್ದಾರೆನ್ನಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಆಗಿರುವ ಬಗ್ಗೆ ಹಾಗೂ ಸಾವು ಸಂಭವಿಸಿರುವ ಬಗ್ಗೆ ಅಧಿಕಾರಿಗಳು ನಮಗೆ ಮಾಹಿತಿ ನೀಡಿರಲಿಲ್ಲ. ಮೊದಲ ಸಾವು ಸಂಭವಿಸಿದಾಗಲೇ ಮಾಹಿತಿ ನೀಡಿದ್ದರೆ ವಿಧಾನಸೌಧ ಭವ್ಯ ಮೆಟ್ಟಿಲ ಮೇಲಿನ ಕಾರ್ಯಕ್ರಮ ರದ್ದು ಮಾಡುತ್ತಿದ್ದೆವು. ಕಾರ್ಯಕ್ರಮ ಮುಗಿದ ಬಳಿಕವೂ ನಮಗೆ ಸಾವಿನ ಬಗ್ಗೆ ಮಾಹಿತಿ ಇರಲಿಲ್ಲ. ಸಂಜೆ 5.30ಕ್ಕೆ ಎ.ಎಸ್. ಪೊನ್ನಣ್ಣ ಮಾಹಿತಿ ನೀಡಿದರು.
ಬಳಿಕ ನಾನು ಪೊಲೀಸ್ ಆಯುಕ್ತರನ್ನು ವಿಚಾರಿಸಿದರೆ ಆಗ ಅವರು ಸಾವು ಖಚಿತಪಡಿಸಿದರು. ಆಗಲೂ ನನಗೆ ಸರಿಯಾದ ಸಾವಿನ ಸಂಖ್ಯೆ ನೀಡಿರಲಿಲ್ಲ. ಹೀಗಾಗಿ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕಾಯಿತು ಎಂದು ವಿವರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ.
ಸಭೆಯಲ್ಲಿ ಸದನದಲ್ಲಿ ವಿಪಕ್ಷಗಳ ಮಣಿಸುವ ಕುರಿತಂತೆಯೂ ಕಾರ್ಯತಂತ್ರ ರೂಪಿಸಲಾಗಿದ್ದು, ವಿರೋಧ ಪಕ್ಷದ "ಆಧಾರರಹಿತ ಆರೋಪಗಳು ಮತ್ತು ಸುಳ್ಳುಗಳನ್ನು ದಾಖಲೆ ಮತ್ತು ಅಂಕಿಅಂಶಗಳ ಸಹಿತ ಎದುರಿಸುವಂತೆ ಶಾಸಕರಿಗೆ ಸಿದ್ದರಾಮಯ್ಯ ಅವರು ಸಲಹೆ ನೀಡಿದ್ದಾರೆಂದು ತಿಳಿದುಬಂದಿದೆ.
ದತ್ತಾಂಶವನ್ನು ಸ್ಪಷ್ಟವಾಗಿ ಪ್ರಸ್ತುತಪಡಿಸಿ ಮತ್ತು ಆತ್ಮವಿಶ್ವಾಸದಿಂದ ಪ್ರತಿಕ್ರಿಯಿಸಿ ಎಂದು ಶಾಸಕರಿಗೆ ತಿಳಿಸಿದ್ದಾರೆಂದು ವರದಿಗಳು ತಿಳಿಸಿವೆ.
ಸಭೆ ವೇಳೆ ಮಾತನಾಡಿರುವ ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರ ನಡುವೆ ಸಮಸ್ಯೆ ಉಂಟಾಗುತ್ತಿರಬಹುದು. ಹೀಗಾಗಿ ಕಾಲಕಾಲಕ್ಕೆ ಉಸ್ತುವಾರಿ ಸಚಿವರು ಹಾಗೂ ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಹೇಳಿದ್ದಾರೆಂದು ತಿಳಿದುಬಂದಿದೆ.
ಜಿಲ್ಲೆಗಳಲ್ಲಿ ಉಸ್ತುವಾರಿ ಸಚಿವರು, ಶಾಸಕರ ನಡುವೆ ಉಂಟಾಗುತ್ತಿದ್ದ ಗೊಂದಲ ಬಗೆಹರಿಸಲು ಇತ್ತೀಚೆಗೆ ಹಿರಿಯ ನಾಯಕರು ಸಭೆ ನಡೆಸಿದರು. ಶಾಸಕರು, ಉಸ್ತುವಾರಿ ಸಚಿವರ ನಡುವೆ ಆಗಾಗ್ಗೆ ಸಮಸ್ಯೆ, ಬರುತ್ತಲೇ ಇರುತ್ತವೆ. ಹೀಗಾಗಿ ಸಿದ್ದರಾಮಯ್ಯ ಅವರು ತಮ್ಮ ನೇತೃತ್ವದಲ್ಲಿ ಸಭೆ ನಡೆಸುತ್ತಿರಬೇಕು. ಕನಿಷ್ಟ 2-3 ತಿಂಗಳಿಗೊಮ್ಮೆ ಸಭೆಗೆ ಒತ್ತಾಯಿಸಿದರು ಎನ್ನಲಾಗಿದೆ.
ಇದೇ ವೇಳೆ ತಮ್ಮ ಕ್ಷೇತ್ರಗಳಿಗೆ ತಲಾ 250 ಕೋಟಿ ಅನುದಾನ ನೀಡಿರುವುದಕ್ಕೆ ಸಭೆಯಲ್ಲಿ ಸದಸ್ಯರು ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸಿದರು ಎನ್ನವಾಗಿದೆ,
ಇದೇ ವೇಳೆ ಎಂಎಲ್ ಸಿಗಳು ಹೆಚ್ಚುವರಿ ಅನುದಾನ ನೀಡಬೇಕು ಎಂದು ಮನವಿ ಮಾಡಿದ್ದು, ಮುಂದಿನ ವಾರದ ಬಳಿಕ ಸಭೆ ನಡೆಸಿ ಚರ್ಚಿಸೋಣ ಎಂದು ಸಿಎಂ ಹೇಳಿದರು ಎನ್ನಲಾಗಿದೆ.