ಮಂಡ್ಯ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ಧರ್ಮಸ್ಥಳ ಸಾಮೂಹಿಕ ಸಮಾಧಿ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರ ಎಂದು ಹೇಳಿಕೊಂಡಿರುವ ಮುಸುಕುಧಾರಿಯ ಕುರಿತು ಆತನ ಮೊದಲ ಪತ್ನಿಯೇ ನೀಡಿರುವ ಹೇಳಿಕೆಗಳು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ ಮಾಸ್ಕ್ ಮ್ಯಾನ್ (Mask Man) ಕುರಿತು ಆತನ ಮೊದಲ ಪತ್ನಿ ಸುದ್ದಿಮಾಧ್ಯಮದೊಂದಿಗೆ ಮಾತನಾಡಿದದು, ಆತ ಮಹಾ ಸುಳ್ಳುಗಾರ ಮತ್ತು ಮೋಸಗಾರ ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.
ಈ ಮುಸುಕುಧಾರಿ ಯಾರು ಎಂಬ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿತ್ತಾದರೂ, ನಿನ್ನೆಯಷ್ಟೇ ಮಾಸ್ಕ್ ಮ್ಯಾನ್ ಸ್ನೇಹಿತ ರಾಜು ಎನ್ನುವಾತ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದ. ಇದರ ಬೆನ್ನಲ್ಲೇ ಇದೀಗ ಸ್ವತಃ ಅನಾಮಿಕನ ಹಾವಭಾವ , ಆತನ ದೇಹದ ಆಕಾರ ನೋಡಿ ಮಾಜಿ ಪತ್ನಿ ಪ್ರತ್ಯಕ್ಷಳಾಗಿದ್ದು, ತಾನು ಮಾಸ್ಕ್ ಮ್ಯಾನ್ ಪತ್ನಿ ಎಂದು ಹೇಳಿಕೊಂಡಿದ್ದಾಳೆ.
ಈಕೆ ಮಾಸ್ಕ್ ಮ್ಯಾನ್ ನ ಮೊದಲ ಪತ್ನಿ ಎಂದು ಹೇಳಿಕೊಂಡಿದ್ದು, ಮಂಡ್ಯದಲ್ಲಿ ಮಾತನಾಡಿರುವ ಅನಾಮಿಕನ ಮೊದಲ ಪತ್ನಿ,1999ರಲ್ಲಿ ಮದುವೆಯಾಗಿದ್ದು, 7 ವರ್ಷ ಸಂಸಾರ ಮಾಡಿದ್ದೆವು. ನಮಗೆ ಒಂದು ಹೆಣ್ಣು, ಒಂದು ಗಂಡು ಮಕ್ಕಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
'ಒಳ್ಳೆ ಗುಣಗಳಿರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದ'
ಇದೇ ವೇಳೆ ಅವನ ಬಳಿ ಒಳ್ಳೆತನ ಇರಲಿಲ್ಲ. ಬರೀ ಸುಳ್ಳು ಹೇಳುತ್ತಿದ್ದ. ನನಗೆ ಹೊಡೆಯುವುದು, ಬಡಿಯುವುದು ಮಾಡುತ್ತಿದ್ದ. ವಿಚ್ಚೇದನ ವೇಳೆ ಜೀವನಾಂಶ ಕೊಡಲು ಸುಳ್ಳು ಹೇಳಿದ್ದ. ಜೀವನಾಂಶ ಕೊಡಲು ಕೆಲಸ ಮಾಡುತ್ತಿಲ್ಲ ಎಂದು ಕೋರ್ಟ್ಗೆ ಸುಳ್ಳು ಹೇಳಿದ್ದ. ಅಲ್ಲು ನನಗೆ ನ್ಯಾಯ ಸಿಗಲಿಲ್ಲ. ನನ್ನ ತಾಯಿಯೇ ನನ್ನ ಮಕ್ಕಳನ್ನ ಸಾಕಿದ್ರು. ಯಾವಾಗಲೂ ಅಹಂಕಾರದಲ್ಲೇ ಮೆರೆಯುತ್ತಿದ್ದ. ಅಣ್ಣ ತಮ್ಮಂದಿರಿಗೂ ಬಾಯಿಗೆ ಬಂದಹಾಗೇ ಬೈಯ್ಯುತ್ತಿದ್ದ. ಅವನು ಮೋಸಗಾರ, ಸುಳ್ಳುಗಾರ. ಅವನನ್ನು ಬಿಟ್ಟು ಬಂದದ್ದು ಒಳ್ಳೆಯದಾಯಿತು. ಇಟ್ಕೊಂಡಳವಳನ್ನ ಮದುವೆ ಮಾಡಿಕೊಳ್ಳಲು ನನಗೆ ಚಿತ್ರಹಿಂಸೆ ಕೊಟ್ಟು ಓಡಿಸಿದ ಎಂದರು.
ದೇಗುಲದಲ್ಲಿ ಕಸಗೂಡಿಸುವ ಕೆಲಸ ಮಾಡುತ್ತಿದ್ದ
ಅಂತೆಯೇ ಮದುವೆ ಬಳಿಕ ಧರ್ಮಸ್ಥಳದ ನೇತ್ರಾವತಿಯಲ್ಲಿ 7 ವರ್ಷ ಇದ್ದೆವು. ಧರ್ಮಸ್ಥಳದಲ್ಲಿ ಕಸಗುಡಿಸುವುದು, ಬಾತ್ರೂಂ ತೊಳೆಯುವುದು ಮಾಡುತ್ತಿದ್ದರು. ಆದರೆ, ಈಗ ಆತ ನೂರಾರು ಶವ ಹೂತಿದ್ದೇನೆ ಎಂದು ಹೇಳುತ್ತಿರುವುದು ಸುಳ್ಳು. ದುಡ್ಡಿನ ಆಮಿಷಕ್ಕೆ ಹೀಗೆ ಮಾಡುತ್ತಿರುಬಹುದು ಎಂದು ಸ್ಫೋಟಕ ವಿಚಾರಗಳನ್ನು ಆತನ ಪತ್ನಿ ಬಿಚ್ಚಿಟ್ಟಿದ್ದಾಳೆ.
'ಏನೋ ಕಿತಾಪತಿ ಮಾಡುತ್ತಿದ್ದಾನೆ'
ಇನ್ನು ಧರ್ಮಸ್ಥಳ ವಿಚಾರವಾಗಿ ಮಾತನಾಡಿದ ಆಕೆ, 'ಧರ್ಮಸ್ಥಳ ಎಂದರೆ ನಮ್ಮ ಮನೆಯವರಿಗೆಲ್ಲಾ ಪ್ರೀತಿ. ಗುಂಡಿ ತೋಡಿದ್ರು ಏನು ಸಿಕ್ಕಿಲ್ಲ ಅಂದ್ರೆ ಏನೋ ಕಿತಾಪತಿ ಮಾಡುತ್ತಿದ್ದಾನೆ ಎನಿಸುತ್ತದೆ. ಅತ್ಯಾಚಾರ, ಕೊಲೆಯಾದ ಶವಗಳನ್ನು ಹೂತ ಬಗ್ಗೆ ಯಾವತ್ತು ಹೇಳಿಲ್ಲ.
ಕೆಲಸಕೊಟ್ಟ, ಅನ್ನ ಕೊಟ್ಟ ಜಾಗಕ್ಕೆ ಅನ್ಯಾಯ ಮಾಡಬಾರದು. ಅವಳ ಒತ್ತಡಕ್ಕೆ, ಆಮಿಷಕ್ಕೆ ಒಳಗಾಗಿ ಹೀಗೆ ಮಾಡ್ತಿದ್ದಾನೆ. ದೇವಸ್ಥಾನದ ಹೆಸರು ಕೆಡಿಸುತ್ತಿರುವ ಅವನು ಹಾಳಾಗಬೇಕು. ಅವನು ಸತ್ತು, ಹೆಣ ಆದರೂ ನಾವು ಹೋಗಿ ನೋಡುವುದಿಲ್ಲ. ಮಾಸ್ಕ್ ಮ್ಯಾನ್ ಅಣ್ಣ ಹಾಗೂ ಮನೆಯವರೆಲ್ಲ ಒಳ್ಳೆಯವರು. ಆತ ನನಗೆ ಹೊಡೆದಾಗ ನನ್ನ ಪರವಾಗಿ ಇದ್ದರು. ಈತ ಸರಿ ಇಲ್ಲ. ಅವನನ್ನ ಟಿವಿಯಲ್ಲಿ ನೋಡಿದ ಮೊದಲ ದಿನವೇ ಗೊತ್ತಾಯಿತು. ಅವನ ದೇಹದ ಆಕಾರ ನೋಡಿ ಗೊತ್ತಾಯಿತು ಎಂದು ಆಕೆ ತಿಳಿಸಿದ್ದಾಳೆ ಎಂದು ವರದಿ ಮಾಡಲಾಗಿದೆ.