ಪಂಕಜ್ ಚೌಧರಿ 
ರಾಜ್ಯ

ಬ್ಯಾಂಕ್ ಸಾಲದಲ್ಲಿ ಸುಧಾರಣೆ ಹಿನ್ನೆಲೆ ಕರ್ನಾಟಕದ NABARD ಅನುದಾನ ಕಡಿತ: ಕೇಂದ್ರ ಸರ್ಕಾರ ಸ್ಪಷ್ಟನೆ

2023-24 ಮತ್ತು 2024-25ರಲ್ಲಿ ಗೋದಾಮು ಮೂಲಸೌಕರ್ಯ ನಿಧಿಯ ಅಡಿಯಲ್ಲಿ ಯಾವುದೇ ಸಾಲವನ್ನು ಮಂಜೂರು ಮಾಡಲಾಗಿಲ್ಲ, ಆದರೆ 2022-23ರಲ್ಲಿ 46.07 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.

ಶಿವಮೊಗ್ಗ: ಕರ್ನಾಟಕಕ್ಕೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ನಿಂದ ಇತ್ತೀಚಿನ ವರ್ಷಗಳಲ್ಲಿ ಅನುದಾನ ಕಡಿಮೆಯಾಗಲು ಬ್ಯಾಂಕ್‌ಗಳು ತಮ್ಮ ಆದ್ಯತಾ ವಲಯದ ಸಾಲ (Priority Sector Lending - PSL) ಗುರಿಗಳನ್ನು ಉತ್ತಮವಾಗಿ ಪೂರೈಸಿರುವುದು ಕಾರಣ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಲೋಕಸಭೆಯಲ್ಲಿ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಉತ್ತರ ನೀಡಿದರು.

ಬ್ಯಾಂಕಿಂಗ್ ವ್ಯವಸ್ಥೆಯಿಂದ ಆರ್ಥಿಕತೆಯ ನಿರ್ಣಾಯಕ ವಲಯಗಳಿಗೆ ಸಾಲದ ಹರಿವನ್ನು ಖಚಿತಪಡಿಸಿಕೊಳ್ಳಲು ಆರ್‌ಬಿಐ ಬ್ಯಾಂಕ್‌ಗಳಿಗೆ ಪಿಎಸ್‌ಎಲ್ ಗುರಿಗಳನ್ನು ನಿಗದಿಪಡಿಸುತ್ತದೆ. ಈ ಗುರಿ ತಲುಪಲು ವಿಫಲವಾದ ಬ್ಯಾಂಕ್‌ಗಳು, ತಮ್ಮ ಕೊರತೆಯ ಮೊತ್ತವನ್ನು 'ಪಿಎಸ್‌ಎಲ್ ಕೊರತೆ ಕಾರ್ಪಸ್' (PSL shortfall corpus) ನಿಧಿಗೆ ಜಮಾ ಮಾಡಬೇಕಾಗುತ್ತದೆ. ಬ್ಯಾಂಕ್‌ಗಳ ಸುಧಾರಿತ ಕಾರ್ಯಕ್ಷಮತೆಯಿಂದ ಈ ಹೂಡಿಕೆ ಕಡಿಮೆಯಾಗುತ್ತಿದೆ.

ಈ ಹಿಂದಿನ ವರ್ಷಗಳಲ್ಲಿ ಬೇಡಿಕೆ, ಸರ್ಕಾರದ ಆದ್ಯತೆಗಳು ಮತ್ತು ಬಳಕೆಯ ಆಧಾರದ ಮೇಲೆ ವಿವಿಧ PSL-ಸಂಬಂಧಿತ ನಿಧಿಗಳ ಅಡಿಯಲ್ಲಿ ಹಂಚಿಕೆಗಳನ್ನು ತರ್ಕಬದ್ಧಗೊಳಿಸಲಾಗಿದೆ. ಇದರ ಪರಿಣಾಮ ಕರ್ನಾಟಕದ ನಬಾರ್ಡ್ ಅನುದಾನದಲ್ಲಿ ಕಡಿತವಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕಕ್ಕೆ ನಬಾರ್ಡ್‌ನ ದೀರ್ಘಾವಧಿಯ ಮರು ಹಣಕಾಸು 2023-24ರಲ್ಲಿ 11,479.6 ಕೋಟಿ ರೂ.ಗಳಿಂದ 2024-25ರಲ್ಲಿ 7,128.37 ಕೋಟಿ ರೂ.ಗಳಿಗೆ ಇಳಿದಿದೆ. ಅಲ್ಪಾವಧಿಯ ಮರುಹಣಕಾಸು 2024-25ರಲ್ಲಿ 14,313.6 ಕೋಟಿ ರೂ.ಗಳಲ್ಲಿ ಹೆಚ್ಚಾಗಿ ಸ್ಥಿರವಾಗಿತ್ತು. ಅದೇ ಸಮಯದಲ್ಲಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (RIDF) ಅಡಿಯಲ್ಲಿ ಹಣಕಾಸು ಹೆಚ್ಚಾಗಿದೆ. 2023-24ರಲ್ಲಿ ರೂ.1,727.50 ಕೋಟಿ ಇದ್ದದ್ದು, 2024-25ರಲ್ಲಿ ರೂ.2,408.11 ಕೋಟಿಗೆ ಏರಿದೆ. ನೀರಾವರಿ ನಿಧಿಯು 2023-24ರಲ್ಲಿ ರೂ.110.23 ಕೋಟಿಯಿಂದ 2024-25ರಲ್ಲಿ ರೂ.49.63 ಕೋಟಿಗೆ ಗಣನೀಯವಾಗಿ ಕಡಿತಗೊಂಡಿದೆ.

2023-24 ಮತ್ತು 2024-25ರಲ್ಲಿ ಗೋದಾಮು ಮೂಲಸೌಕರ್ಯ ನಿಧಿಯ ಅಡಿಯಲ್ಲಿ ಯಾವುದೇ ಸಾಲವನ್ನು ಮಂಜೂರು ಮಾಡಲಾಗಿಲ್ಲ, ಆದರೆ 2022-23ರಲ್ಲಿ 46.07 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಇದೇ ವೇಳೆ ನಬಾರ್ಡ್ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಮರುಹಣಕಾಸು ಯೋಜನೆಗಳು, ಮೂಲಸೌಕರ್ಯ ನಿಧಿ ಮತ್ತು ಬುಡಕಟ್ಟು ಅಭಿವೃದ್ಧಿ ನಿಧಿ ಮತ್ತು ಆಹಾರ ಸಂಸ್ಕರಣಾ ನಿಧಿಯಂತಹ ಉದ್ದೇಶಿತ ಉಪಕ್ರಮಗಳ ಮೂಲಕ ಬೆಂಬಲ ನೀಡುವುದನ್ನು ಮುಂದುವರೆಸಿದೆ ಎಂದೂ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಧಾನಸಭೆಯಲ್ಲಿ 'ಗೃಹ ಲಕ್ಷ್ಮಿ' ಕೋಲಾಹಲ: ಬಿಜೆಪಿ ಸಭಾತ್ಯಾಗ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿಷಾದ.. ಇಷ್ಟಕ್ಕೂ ಆಗಿದ್ದೇನು? Video

ಪ್ರಚಾರಕ್ಕಾಗಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚು ಖರ್ಚು ಮಾಡಿದೆ; ಗೆದ್ದ ಕ್ಷೇತ್ರಗಳು ಮಾತ್ರ ಶೂನ್ಯ: ADR

Video: ಡಾಲ್ಹೌಸಿ ಬಳಿ ಇಳಿಜಾರಿಗೆ ಉರುಳಿದ ವ್ಯಾನ್, ಪ್ರಯಾಣಿಕರ ನಾಟಕೀಯ ಪಾರು!

15 ವರ್ಷ ಮೀರಿದ ವಾಹನಗಳು ಗುಜುರಿಗೆ, ಸರ್ಕಾರದಿಂದ ಅನುಮೋದನೆ: ಸಚಿವ ರಾಮಲಿಂಗಾರೆಡ್ಡಿ

ಭಾರತಕ್ಕೆ NCP ಧಮ್ಕಿ: ಭದ್ರತಾ ಕಾರಣ ಢಾಕಾದಲ್ಲಿರುವ ವೀಸಾ ಕೇಂದ್ರ ಮುಚ್ಚಿದ ಭಾರತ!

SCROLL FOR NEXT