ಬೆಂಗಳೂರು: ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರು ಮಧ್ಯಾಹ್ನದ ಊಟದ ಭಾಗವಾಗಿ ಮಕ್ಕಳಿಗೆ ಮೊಟ್ಟೆಗಳನ್ನು ನೀಡಲು ತಮ್ಮ ಜೇಬಿನಿಂದ ಹಣ ಖರ್ಚು ಮಾಡಿ ಮಕ್ಕಳಿಗೆ ನೀಡುತ್ತಿದ್ದಾರೆ. ಈ ಹಣ ಮರು ಪಾವತಿಯಾಗುವ ಬಗ್ಗೆ ಯಾವುದೇ ಭರವಸೆ ಇಲ್ಲದಿದ್ದರೂ ವಿದ್ಯಾರ್ಥಿಗಳಿಗಾಗಿ ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿದ್ದಾರೆ.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಶಿಕ್ಷಕರೊಬ್ಬರು, ನಮ್ಮ ಶಾಲೆಯಲ್ಲಿ 560 ಮಕ್ಕಳಿದ್ದಾರೆ, ಅವರಲ್ಲಿ ಕನಿಷ್ಠ 400 ಮಕ್ಕಳು ಮೊಟ್ಟೆ ತಿನ್ನಲು ಆಯ್ಕೆ ಮಾಡುತ್ತಾರ, ಉಳಿದವರು ಬಾಳೆಹಣ್ಣು ತಿನ್ನಲು ಆಯ್ಕೆ ಮಾಡುತ್ತಾರೆ. ಕೆಲವೊಮ್ಮೆ, ಬಾಳೆಹಣ್ಣು ತಿನ್ನಲು ಇಷ್ಟಪಡುವವರು ಸಹ ಮೊಟ್ಟೆಗಳನ್ನು ಕೇಳುತ್ತಾರೆ. ಮಕ್ಕಳು ಹಾಗೆ ಮಾಡುವುದನ್ನು ನಾವು ತಡೆಯಲು ಸಾಧ್ಯವಿಲ್ಲ.
ಸರ್ಕಾರವು ನಮಗೆ ಪ್ರತಿ ಮೊಟ್ಟೆಗೆ 6 ರೂ.ಗಳನ್ನು ನೀಡುತ್ತಿದೆ, ಅದರಲ್ಲಿ ಮೊಟ್ಟೆಗೆ 5 ರೂ, ಸಾರಿಗೆ ಶುಲ್ಕಕ್ಕೆ 20 ಪೈಸೆ, ಮಧ್ಯಾಹ್ನದ ಊಟಕ್ಕೆ 30 ಪೈಸೆ, ಮೊಟ್ಟೆ ಸಿಪ್ಪೆ ತೆಗೆಯುವ ಕಾರ್ಮಿಕರಿಗೆ ಕುದಿಸಲು 50 ಪೈಸೆ ನೀಡಲಾಗುತ್ತದೆ. ಆದರೆ ಮೊಟ್ಟೆಗಳ ಬೆಲೆಗಳು ಎಂದಿಗೂ 5 ರೂಪಾಯಿ ಇರುವುದಿಲ್ಲ ಹೀಗಾಗಿ ನಾನು 7 ರೂಪಾಯಿ 50 ಪೈಸೆಗಳಿಗೆ ಮೊಟ್ಟೆ ಖರೀದಿಸಿದ್ದೇನೆ ಎಂದಿದ್ದಾನೆ.
ಈ ವರ್ಷ ನನ್ನ ಸಂಬಳದಿಂದ 60,000 ರೂ. ಹೆಚ್ಚುವರಿಯಾಗಿ ಖರ್ಚು ಮಾಡಿದ್ದೇನೆ ಮತ್ತು ಅದನ್ನು ಮರುಪಾವತಿಸಲಾಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ. ಈ ಹಿಂದೆ, ವಾರಕ್ಕೆ ಮೂರು ಬಾರಿ ಮೊಟ್ಟೆಗಳನ್ನು ನೀಡುವಂತೆ ಸೂಚಿಸಲಾಗಿತ್ತು, ಆದರೆ ಈಗ ಪ್ರತಿದಿನ ನೀಡುವಂತೆ ಹೇಳಿದ್ದಾರೆ. ಅದೇ ರೀತಿ, ಬಾಳೆಹಣ್ಣು ಖರೀದಿಸಲು ನಮಗೆ 6 ರೂ. ನೀಡಲಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿನ ಬೆಲೆಯನ್ನು ಅವಲಂಬಿಸಿ, ನಾವು ವಿದ್ಯಾರ್ಥಿಗೆ ಎರಡು ಬಾಳೆಹಣ್ಣು ಅಥವಾ ಒಂದು ಬಾಳೆಹಣ್ಣನ್ನು ನೀಡುತ್ತೇವೆ. ಪ್ರಸ್ತುತ, ಒಂದು ಕೆಜಿ ಏಲಕ್ಕಿ ಬಾಳೆಹಣ್ಣಿಗೆ 80 ರೂ. ಇದೆ ಎಂದು ಅವರು ಹೇಳಿದರು.
ನನ್ನ ಶಾಲೆಯಲ್ಲಿ 120 ಮಕ್ಕಳಿದ್ದಾರೆ, ಎಲ್ಲರೂ ಮಧ್ಯಾಹ್ನದ ಊಟದಲ್ಲಿ ಮೊಟ್ಟೆಗಳನ್ನು ಸೇವಿಸುತ್ತಾರೆ ಮತ್ತು ಯಾವುದೇ ವಿದ್ಯಾರ್ಥಿಗಳು ಬಾಳೆಹಣ್ಣುಗಳನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ, ಈ ವರ್ಷ ನಾವು ನಮ್ಮ ಜೇಬಿನಿಂದ ಸುಮಾರು 18,000 ರೂ. ಹೆಚ್ಚುವರಿ ಹಣ ಖರ್ಚು ಮಾಡಿದ್ದೇವೆ. ನಾವು ಇದನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ, ಮಧ್ಯಾಹ್ನದ ಊಟದ ಪರಿಶೀಲನೆಗಾಗಿ ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಿಂದ ಬರುವ ಪ್ರತಿನಿಧಿಗಳ ಗಮನಕ್ಕೆ ತಂದಿದ್ದೇವೆ.
ಇದಕ್ಕಾಗಿ ಈಗಾಗಲೇ ಬಜೆಟ್ ನಿಗದಿಪಡಿಸಲಾಗಿದೆ, ಇದನ್ನು ಈಗ ಹೆಚ್ಚಿಸಲು ಸಾಧ್ಯವಿಲ್ಲ ಎಂದು ನಮಗೆ ತಿಳಿಸಲಾಗಿದೆ. ಶಾಲೆಗಳಿಗೆ ಮೊಟ್ಟೆಗಳಿಗೆ ನೀಡುವ ಮೊತ್ತವನ್ನು ಹೆಚ್ಚಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಟ್ಟಾಗಿ ಕೆಲಸ ಮಾಡಬೇಕು ಎಂದು ದಕ್ಷಿಣ ಕನ್ನಡದ ನಾಡಾ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮತ್ತೊಬ್ಬ ಶಿಕ್ಷಕರು ತಿಳಿಸಿದ್ದಾರೆ.
ಆಗಸ್ಟ್ 2024 ರಲ್ಲಿ, ಅಜೀಂ ಪ್ರೇಮ್ಜಿ ಫೌಂಡೇಶನ್ ಮಧ್ಯಾಹ್ನದ ಊಟ ಕಾರ್ಯಕ್ರಮವನ್ನು ಬೆಂಬಲಿಸಲು ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿತು. ಎಲ್ಕೆಜಿಯಿಂದ 10ನೇ ತರಗತಿಯವರೆಗಿನ ಸರ್ಕಾರಿ ಶಾಲೆಗಳಿಗೆ ಮೊಟ್ಟೆಗಳನ್ನು ಒದಗಿಸಲು ಅವರು ಮೂರು ವರ್ಷಗಳ ಕಾಲ 1,500 ಕೋಟಿ ರೂ.ಗಳನ್ನು ಹಂಚಿಕೆ ಮಾಡಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಶಿಕ್ಷಣ ಆಯುಕ್ತ ವಿಕಾಸ್ ಕಿಶೋರ್ ಸುರಲ್ಕರ್ ಮಾತನಾಡಿ, ಶಿಕ್ಷಕರು ತಮ್ಮ ಜೇಬಿನಿಂದ ಹೆಚ್ಚುವರಿ ಖರ್ಚು ಮಾಡುವುದು ವಾಸ್ತವಿಕವಾಗಿ ಸರಿಯಾಗಿಲ್ಲದಿರಬಹುದು. ಮೊಟ್ಟೆ ಅಥವಾ ಬಾಳೆಹಣ್ಣಿನ ಪ್ರಸ್ತುತ ಮಾರುಕಟ್ಟೆ ದರಕ್ಕೆ ಅನುಗುಣವಾಗಿ ದರಗಳನ್ನು ಪರಿಷ್ಕರಿಸಲು ಇಲಾಖೆ ಚರ್ಚಿಸುತ್ತಿದೆ. ಒಮ್ಮೆ ಪರಿಷ್ಕರಿಸಿದ ನಂತರ, ಅದಕ್ಕಾಗಿ ಹಣವನ್ನು ಹಂಚಿಕೆ ಮಾಡಬಹುದು ಎಂದು ಹೇಳಿದರು.