ಬೆಂಗಳೂರು: ಪೈರಸಿ ಮಾಡುವವರ ವಿರುದ್ಧ ನಮ್ಮ ಹೋರಾಟ ಅನ್ನೋದು ಸುದೀಪ್ ಅವರ ಮಾತಿನ ಅರ್ಥ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ? ಎಂದು ಚಕ್ರವರ್ತಿ ಚಂದ್ರಚೂಡ್ (Chakravarthy Chandrachud) ಹೇಳಿದ್ದಾರೆ.
ಮಾರ್ಕ್ (Mark) ಸಿನಿಮಾ ಇವೆಂಟ್ ವೇಳೆ ನಟ ಕಿಚ್ಚ ಸುದೀಪ್ (Kichcha Sudeep) ಆಡಿದ ಮಾತುಗಳು ಹಲವು ಚರ್ಚೆಗೆ ಆಸ್ಪದ ನೀಡಿದ್ದು, ಇದು ನಟ ದರ್ಶನ್ ಅಭಿಮಾನಿಗಳ ಫ್ಯಾನ್ಸ್ ವಾರ್ ಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಫೇಸ್ಬುಕ್ ಲೈವ್ನಲ್ಲಿ ಮಾತನಾಡಿರುವ ಚಕ್ರವರ್ತಿ ಚಂದ್ರಚೂಡ್ ಅವರು, 'ಪೈರಸಿ ಸಮಸ್ಯೆ ಎಲ್ಲ ಸಿನಿಮಾದವರಿಗೂ ಎದುರಾಗುತ್ತದೆ. ನಾವಷ್ಟೇ ಅಲ್ಲ, 45, ಡೆವಿಲ್ ಎಲ್ಲಾ ಚಿತ್ರಗಳಿಗೂ ಈ ಸಮಸ್ಯೆ ಎದುರಾಗುತ್ತಿದೆ. ಡೆವಿಲ್ ಅವರು ಕೂಡ 9,000ಕ್ಕೂ ಅಧಿಕ ಪೈರಸಿ ಲಿಂಕ್ ಡಿಲೀಟ್ ಮಾಡಿದ್ದೇವೆ ಅಂತ ಹೇಳಿಕೊಂಡಿದ್ದಾರೆ. ಹೀಗಾಗಿ ಅದರ ವಿರುದ್ಧ ಕಿಚ್ಚ ಸುದೀಪ್ ಅವರು ಯುದ್ಧ ಸಾರುವುದಕ್ಕೆ ನಿಂತಿದ್ದಾರೆ ಎಂದರು.
ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳೋದು ಯಾಕೆ?
ಸೋಷಿಯಲ್ ಮೀಡಿಯಾದಲ್ಲಿ ಕೆಲವು ವಿಚಾರಗಳ ಕುರಿತು ಚರ್ಚೆ ನಡೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಫ್ಯಾನ್ ವಾರ್ – ಸ್ಟಾರ್ ವಾರ್ ನಡೆಯುತ್ತಿದೆ, ಕಿಚ್ಚ ಸುದೀಪ್ ಅವರು ಇನ್ನೊಬ್ಬ ನಟರಿಗೆ ಟಾಂಗ್ ಕೊಟ್ರು, ಯುದ್ಧ ಸಾರುತ್ತೇನೆ ಅಂದ್ರು ಅಂತ ಮಾತನಾಡುತ್ತಿದ್ದಾರೆ. ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಳ್ಳುವುದು ಯಾಕೆ? ಎಂದು ಚಂದ್ರಚೂಡ್ ಪ್ರಶ್ನಿಸಿದ್ದಾರೆ.
ಅಂತೆಯೇ ಸಿನಿಮಾಗಳನ್ನ ಹಾಳು ಮಾಡುವವರ ಒಂದು ಪಡೆ ಇದೆ. ಯಾವುದೋ ಒಂದು ಸಿನಿಮಾ ಯಶಸ್ವಿಯಾಗಬಾರದು ಅಂತ ಭಯೋತ್ಪಾದಕರಂತೆ ವರ್ತಿಸುತ್ತಾರೆ. ಸಿನಿಮಾ ರಿಲೀಸ್ ಆದ ಬಳಿಕ ಫಸ್ಟ್ ಶೋ ಮುಗಿದ ಕೂಡಲೇ ಪೈರಸಿ ಸಿನಿಮಾ ಲೀಕ್ ಆಗುತ್ತವೆ. ಮ್ಯಾಕ್ಸ್ ಸಿನಿಮಾ ರಿಲೀಸ್ ಆದಾಗ ನಾವೇ ಖುದ್ದು 11,000ಕ್ಕೂ ಅಧಿಕ ಪೈರಸಿ ಲಿಂಕ್ಗಳನ್ನು ಡಿಲೀಟ್ ಮಾಡಿದ್ದೀವಿ ಎಂದು ತಿಳಿಸಿದ್ದಾರೆ.
ಪೈರಸಿ ತಡೆಗೆ ಮನವಿ
ಕಷ್ಟಪಟ್ಟು ಸಿನಿಮಾ ಮಾಡಿರುತ್ತೇವೆ. ಆದರೆ ಸಿನಿಮಾ ರಿಲೀಸ್ ಆದಮೇಲೆ ಪೈರಸಿ ಅಂತಹ ಕೆಲವು ಸಮಸ್ಯೆ ಎದುರಾಗುತ್ತೇವೆ. ಇದೊಂದು ಶಾಪದಂತಾಗಿದೆ. ಇದರ ವಿರುದ್ಧ ಸಿಎಂಗೆ ಮನವಿ ಮಾಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಜಾತಿ, ಬೇಧ ಇಲ್ಲದೇ ಜನರನ್ನು ಒಂದುಕಡೆ ಸೇರಿಸುವ ಜಾಗವೆಂದರೆ ಅದು ಚಿತ್ರಮಂದಿರ. ಪೈರಸಿ ಮಾಡುವ ಮೂಲಕ ಅದಕ್ಕೂ ಕಲ್ಲು ಹಾಕಬೇಡಿ. ಹೀಗಾಗಿ ಮಾರ್ಕ್ ಸಿನಿಮಾ ತಂಡ, ಕಿಚ್ಚ ಸುದೀಪ್ ಅವರು ಪೈರಸಿ ಮಾಡುವವರ ವಿರುದ್ಧ, ಇಂತಹ ಅಸಭ್ಯತೆಗಳನ್ನ ತಡೆಯೋಕೆ ಯುದ್ಧ ಮಾಡುತ್ತೇನೆ ಅಂದಿದ್ದಾರೆ ಎಂದು ಕಿಡಿಕಾರಿದ್ದಾರೆ.