ಮಾಗಡಿ: ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಹಶೀಲ್ದಾರ್ ಶರತ್ ಕುಮಾರ್ ಅವರಿಗೆ ಜನರಿಂದ ಚಪ್ಪಲಿಯಲ್ಲಿ ಹೊಡೆಸ್ತೇನೆ ಎಂದು ಶಾಸಕ ಹೆಚ್.ಸಿ. ಬಾಲಕೃಷ್ಣ ಹಾಕಿರುವ ಆವಾಜ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ರೈತರ ದೂರುಗಳನ್ನು ಆಲಿಸಿದ ಶಾಸಕರು, ಸಾರ್ವಜನಿಕರು ಹಾಗೂ ಮಾಧ್ಯಮಗಳ ಎದುರೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.ಮಾಗಡಿ ತಾಲ್ಲೂಕಿನಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸುವ ವೇಳೆ ಈ ಘಟನೆ ನಡೆದಿದೆ.
ರೈತರ ದೂರುಗಳನ್ನು ಪ್ರಸ್ತಾಪಿಸಿದ ಶಾಸಕರು, ಜನರ ಕೆಲಸಗಳು ಸರಿಯಾಗಿ ಆಗದಿದ್ದರೆ ಜನ ನಿನಗೂ ಹೊಡಿತಾರೆ, ನನಗೂ ಹೊಡಿತಾರೆ. ಸರಿಯಾಗಿ ಕೆಲಸ ಮಾಡಿಸಲು ಆಗದಿದ್ದಕ್ಕೆ ಮೊದಲು ನನಗೆ ಚಪ್ಪಲಿಯಲ್ಲಿ ಹೊಡಿತಾರೆ, ಆಮೇಲೆ ನಿನಗೆ ಹೊಡಿತಾರೆ ಎಂದು ತಹಶಿಲ್ದಾರ್ ಅವರಿಗೆ ಖಡಕ್ ಎಚ್ಚರಿಕೆ ನೀಡಿದರು.
ಅಧಿಕಾರಿಗಳ ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದ ಜನಪ್ರತಿನಿಧಿಯಾಗಿ ನಮ್ಮಂತವರಿಗೆ ಮುಜುಗರವಾಗುತ್ತಿದೆ ಎಂದು ಕಿಡಿಕಾರಿದರು.
ರೈತರು ಕಚೇರಿಗಳಿಗೆ ಅಲೆದಾಡುತ್ತಿರುವ ವಿಷಯ ತಿಳಿದು ಗರಂ ಆದ ಬಾಲಕೃಷ್ಣ, ಜನರನ್ನ ಯಾಕೆ ಹೀಗೆ ಸಾಯಿಸುತ್ತೀರಾ? ಕೆಲಸ ಮಾಡಲು ನಾಚಿಕೆ ಆಗಲ್ವಾ ನಿಮಗೆ? ಎಷ್ಟೋ ಅಧಿಕಾರಿಗಳು ಉತ್ತಮ ಕೆಲಸ ಮಾಡಿ ಹೆಸರುವಾಸಿಯಾಗಿದ್ದಾರೆ. ಆದರೆ ನೀವು ಜನರನ್ನು ಯಾಕೆ ಸತಾಯಿಸುತ್ತಿದ್ದೀರಿ, ಯಾಕೆ ಬೇಕು ನಿಮಗೆ ಈ ಕೆಲಸ? ಎಂದು ತಹಶೀಲ್ದಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ಇದೇ ವೇಳೆ ದಿವಂಗತ ಐಎಎಸ್ ಅಧಿಕಾರಿ ಡಿಕೆ ರವಿ ಅವರನ್ನು ಸ್ಮರಿಸಿದ ಶಾಸಕರು, ಐಎಎಸ್ ಅಧಿಕಾರಿ ಡಿಕೆ ರವಿ ಅವರು ತೀರಿಕೊಂಡಾಗ ಜನ ಕಣ್ಣೀರು ಹಾಕಿದ್ದರು. ಅವರು ಮಾಡಿದ ಕೆಲಸ ಹಾಗಿತ್ತು. ಆದರೆ ನೀವು ಹೀಗೆ ಜನರನ್ನು ಸತಾಯಿಸುತ್ತಾ ಹೋದರೆ, ನೀವು ಸತ್ತಾಗ ಯಾರಾದರೂ ಬಂದು ಕಣ್ಣೀರು ಹಾಕುತ್ತಾರಾ? ಎಂದು ಹೇಳುವ ಮೂಲಕ ಕಚೇರಿಗಳಿಗೆ ಜನರನ್ನು ಅಲೆಸದೆ ಆದಷ್ಟು ಬೇಗನೆ ಅವರ ಕೆಲಸಗಳನ್ನು ಮಾಡಿಕೊಡುವಂತೆ ಸೂಚಿಸಿದರು.