ಶರಣು ಸಲಗರ್  
ರಾಜ್ಯ

₹99 ಲಕ್ಷ ಸಾಲ ಪಡೆದು ವಂಚನೆ ಆರೋಪ: ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲು

ಶಾಸಕರ ದೂರದ ಸಂಬಂಧಿ ಎಂದು ಹೇಳಲಾಗುವ ದೂರುದಾರರು, ಶರಣು ಸಲಗರ್ ಅವರು ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಆರ್ಥಿಕ ಸಹಾಯ ಪಡೆದಿದ್ದರು. ಆದರೆ, ಹಣ ಹಿಂದಿರುಗಿಸಿಲ್ಲ ಎಂದಿದ್ದಾರೆ.

ಬೀದರ್: 2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಸಾಲವಾಗಿ ಪಡೆದಿದ್ದ 99 ಲಕ್ಷ ರೂ. ಹಣವನ್ನು ಹಿಂದಿರುಗಿಸಲು ವಿಫಲವಾದ ಆರೋಪದ ಮೇಲೆ ಬಿಜೆಪಿ ಶಾಸಕ ಶರಣು ಸಲಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಶಾಸಕರ ದೂರದ ಸಂಬಂಧಿ ಎಂದು ಹೇಳಲಾಗುವ ದೂರುದಾರರು, ಶರಣು ಸಲಗರ್ ಅವರು ಚುನಾವಣಾ ಸಂಬಂಧಿತ ವೆಚ್ಚಗಳಿಗಾಗಿ ಆರ್ಥಿಕ ಸಹಾಯವನ್ನು ಕೋರಿದ್ದರು. 2023ರ ಜನವರಿ ಮತ್ತು ಫೆಬ್ರುವರಿ ನಡುವೆ ಬಹು ಕಂತುಗಳಲ್ಲಿ ಹಣವನ್ನು ಪಡೆದಿದ್ದರು ಮತ್ತು ಆರು ತಿಂಗಳೊಳಗೆ ಸಾಲ ಮರುಪಾವತಿ ಮಾಡುವುದಾಗಿ ಭರವಸೆ ನೀಡಿದ್ದರು.

ಆದಾಗ್ಯೂ, ದೂರುದಾರರು ಎರಡು ವರ್ಷ ಕಾಯ್ದರೂ ಹಣ ಹಿಂದಿರುಗಿಸಿಲ್ಲ. ಪದೇ ಪದೆ ಹಣ ನೀಡುವಂತೆ ಕೇಳಿದರೂ ಶಾಸಕರು ಹಣ ಹಿಂದಿರುಗಿಸುವ ಯಾವುದೇ ಲಕ್ಷಣಗಳನ್ನು ತೋರಿಸದಿದ್ದಾಗ, 2025ರ ಸೆಪ್ಟೆಂಬರ್ 14 ರಂದು ಹಿರಿಯರ ಸಮ್ಮುಖದಲ್ಲಿ ಸಭೆ ಸೇರಿದ್ದಾರೆ. ಅಲ್ಲಿ ಶಾಸಕರು ಹಣ ನೀಡುವುದಾಗಿ ಒಪ್ಪಿಕೊಂಡು, ಖಾಲಿ ಚೆಕ್ ನೀಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಸೆಪ್ಟೆಂಬರ್ 16 ರಂದು ದೂರುದಾರರ ಕುಟುಂಬ ಸದಸ್ಯರು ಚೆಕ್ ಅನ್ನು ಬ್ಯಾಕಿಂಗೆ ಹಾಕಬಹುದೇ ಎಂದು ಖಚಿತಪಡಿಸಿಕೊಳ್ಳಲು ಶಾಸಕರ ನಿವಾಸಕ್ಕೆ ಭೇಟಿ ನೀಡಿದಾಗ, ಶರಣು ಸಲಗರ್ ಗಲಾಟೆ ಮಾಡಿದ್ದಾರೆ ಮತ್ತು ಬೆದರಿಕೆ ಹಾಕಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.

ದೂರುದಾರರ ಪ್ರಕಾರ, ಶಾಸಕರ ಬೆದರಿಕೆಗಳನ್ನು ರೆಕಾರ್ಡ್ ಮಾಡಿಕೊಳ್ಳಲಾಗಿದ್ದು, ಅದನ್ನು ಎಲೆಕ್ಟ್ರಾನಿಕ್ ಪುರಾವೆಯಾಗಿ ದೂರಿನ ಜೊತೆಗೆ ಸಲ್ಲಿಸಲಾಗಿದೆ.

ಅದರ ಮರುದಿನ ಸೆಪ್ಟೆಂಬರ್ 18 ರಂದು ದೂರುದಾರರ ಬ್ಯಾಂಕ್‌ಗೆ ಚೆಕ್ ಹಾಕಲು ಮುಂದಾದಾಗ, ಆ ಬ್ಯಾಂಕಿನಲ್ಲಿದ್ದ ಶಾಸಕರ ಖಾತೆಯನ್ನು ಮುಚ್ಚಿರುವುದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಳಿಕ, ಸೆಪ್ಟೆಂಬರ್ 22 ರಂದು ನಿಗದಿತ ಅವಧಿಯೊಳಗೆ ಹಣ ಪಾವತಿಸುವಂತೆ ಕೋರಿ ಶಾಸಕರಿಗೆ ಕಾನೂನು ನೋಟಿಸ್ ನೀಡಲಾಗಿದೆ. ಆಗಲೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ದೂರಿನ ಆಧಾರದ ಮೇಲೆ, ಡಿಸೆಂಬರ್ 27 ರಂದು ಬಸವ ಕಲ್ಯಾಣ ಪೊಲೀಸ್ ಠಾಣೆಯಲ್ಲಿ ಶಾಸಕರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 109 (ಕೊಲೆ ಯತ್ನ), 314 (ಅಪ್ರಾಮಾಣಿಕ ಆಸ್ತಿ ದುರುಪಯೋಗ), 318 (ವಂಚನೆ), 352 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ), 351 (ಕ್ರಿಮಿನಲ್ ಬೆದರಿಕೆ) ಮತ್ತು 74 (ಮಹಿಳೆಯ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಬಲವಂತ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸದ್ಯ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Unnao Rape Case: ಕುಲದೀಪ್ ಸಿಂಗ್ ಸೆಂಗಾರ್'ಗೆ ತೀವ್ರ ಹಿನ್ನಡೆ, ಜೀವಾವಧಿ ಶಿಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Andhra Pradesh: ಎಕ್ಸ್ ಪ್ರೆಸ್ ರೈಲಿಗೆ ಬೆಂಕಿ, ಓರ್ವನ ಸಾವು, ಹಲವು ಪ್ರಯಾಣಿಕರಿಗೆ ಗಾಯ, Video

Horrific Video: Mahindra Bolero ವಾಹನದ ಮೇಲೆ ಬಿದ್ದ ಟ್ರಕ್, ಕಾರು ಅಪ್ಪಚ್ಚಿ, ಚಾಲಕ ಸಾವು!

‘Parivar together’: ಪಿಂಪ್ರಿ-ಚಿಂಚ್‌ವಾಡ್ ಪಾಲಿಕೆ ಚುನಾವಣೆ; ಶರದ್ ಪವಾರ್ ಜೊತೆ ಮೈತ್ರಿ ಘೋಷಿಸಿದ ಅಜಿತ್ ಪವಾರ್!

'ಎಂತೆಂಥಹ ಚಕ್ರವರ್ತಿಗಳೇ ಮೂಲೆಗುಂಪಾಗಿದ್ದಾರೆ; ಮುಕ್ಕಾಲು ಪ್ರಪಂಚ ಗೆದ್ದ ಅಲೆಕ್ಸಾಂಡರ್ ಶಾಶ್ವತ ಇರಲಿಲ್ಲ; ಸದ್ದಾಂ ಹುಸೇನ್ ಅವಿತುಕೊಂಡ'

SCROLL FOR NEXT