ಬೆಂಗಳೂರು: ಅಕ್ರಮವಾಗಿ ಸಾಲ ವಸೂಲಾತಿ ಅಥವಾ ಬಡ್ಡಿ ವಿಧಿಸುವುದನ್ನು ಸಂವಿಧಾನದ ಅಡಿಯಲ್ಲಿ "ಮೂಲಭೂತ ಹಕ್ಕು" ಎಂದು ಪರಿಗಣಿಸಿದರೆ ಸಮಾಜದಲ್ಲಿ ಕಾನೂನುಬಾಹಿರ ಸಾಲ ಪದ್ಧತಿಗಳನ್ನು ಪ್ರೋತ್ಸಾಹಿಸದಂತಾಗುತ್ತದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ಅವರು ಶುಕ್ರವಾರ ಹೇಳಿದ್ದಾರೆ.
ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಕರ್ನಾಟಕ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆ 2025 ಅನ್ನು ತಿರಸ್ಕರಿಸಿದ್ದು, ಇದರಿಂದ ಸಮಾಜದ ಭಾಗವಾಗಿರುವ ಸಾಲದಾತರಿಗೆ ದೊಡ್ಡ ಅನ್ಯಾಯವಾಗುತ್ತದೆ. ಪ್ರಸ್ತುತ ಇರುವ ಕಾನೂನುಗಳಡಿ ಸಾಲ ನೀಡಿದ ವ್ಯಕ್ತಿಗಳ ಕಾನೂನಾತ್ಮಕ ಹಕ್ಕುಗಳನ್ನು ರಕ್ಷಿಸಬೇಕಾದದ್ದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ.
ರಾಜ್ಯಪಾಲರು ಸುಗ್ರೀವಾಜ್ಞೆ ತಿರಸ್ಕರಿಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಎಚ್ ಕೆ ಪಾಟೀಲ್ ಅವರು, ರಾಜ್ಯದಲ್ಲಿ ಕಳೆದ ಕೆಲ ವಾರಗಳಿಂದ ಮೈಕ್ರೋಫೈನಾನ್ಸ್ ಸಂಸ್ಥೆಗಳ ಸಾಲ ವಸೂಲಾತಿ ವಿಧಾನಗಳ ವಿರುದ್ಧ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ ಮತ್ತು ಹಲವಾರು ಆತ್ಮಹತ್ಯೆಗಳು ನಡೆದಿವೆ. ಈ ಬಗ್ಗೆ ಹಲವು ದೂರುಗಳು ಬಂದ ನಂತರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೈಕ್ರೋಫೈನಾನ್ಸ್ ಅನ್ನು ನಿಯಂತ್ರಿಸುವ ಉದ್ದೇಶದಿಂದ ಸುಗ್ರೀವಾಜ್ಞೆ ರೂಪಿಸಿದೆ ಎಂದರು.
ರಾಜ್ಯಪಾಲರು ತಪ್ಪು ಗ್ರಹಿಕೆಯಿಂದ ಮತ್ತು ಮಾಹಿತಿ ಕೊರತೆಯಿಂದ ಸುಗ್ರೀವಾಜ್ಞೆಯನ್ನು ತಿರಸ್ಕರಿಸಿದ್ದಾರೆ. ಅವರು ಆಕ್ಷೇಪ ವ್ಯಕ್ತಪಡಿಸಿರುವ ಎಲ್ಲಾ ಅಂಶಗಳಿಗೆ ವಿವರವಾದ ಉತ್ತರಗಳೊಂದಿಗೆ ಮತ್ತೊಮ್ಮೆ ಸುಗ್ರೀವಾಜ್ಞೆನೆ ಶಿಫಾರಸು ಮಾಡಲಾಗುವುದು ಎಂದರು.
ನೋಂದಣಿಯಾಗದ ಮತ್ತು ಪರವಾನಗಿ ಪಡೆಯದ ವ್ಯಕ್ತಿಗಳು ಅಥವಾ ಸಂಸ್ಥೆಗಳು ಹಣವನ್ನು ಸಾಲ ನೀಡಲು ಅಥವಾ ಅತಿಯಾದ ಬಡ್ಡಿದರಗಳು, ಚಕ್ರಬಡ್ಡಿ ಅಥವಾ ದಂಡದವನ್ನು ವಿಧಿಸಲು ಯಾವುದೇ ಕಾನೂನುಬದ್ಧ ಅಧಿಕಾರವನ್ನು ಹೊಂದಿಲ್ಲ. ಪರವಾನಗಿ ಇಲ್ಲದೆ ಖಾಸಗಿಯಾಗಿ ಸಾಲ ನೀಡುವುದು ಮತ್ತು ಹೆಚ್ಚಿನ ಬಡ್ಡಿಯನ್ನು ವಿಧಿಸುವುದು ಕಾನೂನುಬಾಹಿರ ಎಂದರು.
"ಕಾನೂನಿನ ಅಡಿಯಲ್ಲಿ ಸೂಚಿಸಲಾದ ಬಡ್ಡಿದರಗಳೊಂದಿಗೆ ಕಾನೂನು ಕಾರ್ಯವಿಧಾನಗಳ ಮೂಲಕ ನೀಡಲಾದ ಸಾಲಗಳು ಮಾತ್ರ ವಸೂಲಿಗೆ ಅರ್ಹವಾಗಿವೆ. ಆದರೆ ಅಕ್ರಮ ವಿಧಾನಗಳ ಮೂಲಕ ಸಾಲಗಳನ್ನು ವಸೂಲಿ ಮಾಡಲು ಅಥವಾ ಅನ್ಯಾಯದ ಬಡ್ಡಿಯನ್ನು ವಿಧಿಸಲು ಯಾವುದೇ ಕಾನೂನಿನಲ್ಲಿ ಅವಕಾಶ ಇಲ್ಲ" ಎಂದು ಹೇಳಿದರು.
"ಸಾಲ ವಸೂಲಾತಿಗಾಗಿ ಕಾನೂನುಬಾಹಿರ ಕ್ರಮಗಳು, ಚಿತ್ರಹಿಂಸೆ ಮತ್ತು ಬಲವಂತದ ಕ್ರಮವನ್ನು ತಡೆಯಲು ಮತ್ತು ನಿಷೇಧಿಸಲು ಮಾತ್ರ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಲಾಗಿದೆ. 10 ವರ್ಷ ಜೈಲು, 5 ಲಕ್ಷ ರೂ. ದಂಡ ಸಹಜ ನ್ಯಾಯಕ್ಕೆ ವಿರುದ್ಧವಾಗಿಲ್ಲ. ಸಹಜ ನ್ಯಾಯ, ಯಾವುದೇ ವ್ಯಕ್ತಿಯ ಹಕ್ಕುಗಳು ಅಥವಾ ಕಾನೂನು ಹೋರಾಟದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಯಾವುದೇ ಕ್ರಮವನ್ನು ಈ ಸುಗ್ರೀವಾಜ್ಞೆಯಲ್ಲಿ ಪ್ರಸ್ತಾಪಿಸಿಲ್ಲ" ಎಂದು ಎಚ್ ಕೆ ಪಾಟೀಲ್ ಸ್ಪಷ್ಟಪಡಿಸಿದರು.
ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ, ಯಾವುದೇ ಭದ್ರತೆಯನ್ನು ಪಡೆಯದೆಯೇ ಮೈಕ್ರೋಫೈನಾನ್ಸ್ ಸಂಸ್ಥೆಗಳು ಸಾಲಗಳನ್ನು ಒದಗಿಸಬೇಕು ಎಂದು ಸ್ಪಷ್ಟವಾಗಿ ಷರತ್ತು ವಿಧಿಸಲಾಗಿದೆ ಎಂದು ಎಚ್ ಕೆ ಪಾಟೀಲ್ ಅವರು ಗಮನಸೆಳೆದರು.
"ಆದ್ದರಿಂದ, ಭದ್ರತೆಯನ್ನು ಪಡೆಯದೆಯೇ ಮೈಕ್ರೋಫೈನಾನ್ಸ್ ಒದಗಿಸಬೇಕು ಮತ್ತು ಭದ್ರತೆಯನ್ನು ಕಾನೂನುಬಾಹಿರವಾಗಿ ಪಡೆದಿದ್ದರೆ, ಮೈಕ್ರೋಫೈನಾನ್ಸ್ ಸಂಸ್ಥೆಯು ಅಂತಹ ಭದ್ರತೆಯನ್ನು ಹಿಂದಿರುಗಿಸಬೇಕು" ಎಂದು ಹೇಳಿದರು.
"ಸಾಲ ನೀಡುವ ಸಂಸ್ಥೆಗಳ ಕಾನೂನುಬಾಹಿರ ಕ್ರಮಗಳನ್ನು ಮಾತ್ರ ದಂಡನೀಯ ಅಪರಾಧವೆಂದು ಪರಿಗಣಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
"ಇನ್ನು ಆತುರದ ನಿರ್ಧಾರ ಏಕೆ?" ಎಂಬ ಗೆಹ್ಲೋಟ್ ಅವರ ಆಕ್ಷೇಪಕ್ಕೆ ಪ್ರತಿಕ್ರಿಯಿಸಿದ ಪಾಟೀಲ್, ಅಗತ್ಯ ಸಮಾಲೋಚನೆ ನಡೆಸಿದ ನಂತರ ಸರ್ಕಾರ ಈ ಸುಗ್ರೀವಾಜ್ಞೆಯ ಕರಡನ್ನು ಸಿದ್ಧಪಡಿಸಿದೆ ಎಂದು ಹೇಳಿದರು.
ಜನರು ತಮ್ಮ ಜೀವಗಳನ್ನು ಕಳೆದುಕೊಳ್ಳುತ್ತಿದ್ದರಿಂದ "ತುರ್ತು ಪರಿಸ್ಥಿತಿ"ಗೆ ಪ್ರತಿಕ್ರಿಯೆಯಾಗಿ ಸುಗ್ರೀವಾಜ್ಞೆಯನ್ನು ತುರ್ತಾಗಿ ಅಂತಿಮಗೊಳಿಸಲಾಗಿದೆ. ಈ ಸುಗ್ರೀವಾಜ್ಞೆಯನ್ನು ಸ್ವಾಭಾವಿಕವಾಗಿ ಚರ್ಚೆಗಾಗಿ ಸದನದಲ್ಲಿ ಮಂಡಿಸಲಾಗುತ್ತದೆ ಎಂದರು.