ಬೆಂಗಳೂರು: ಬನ್ನೇರುಘಟ್ಟ ಬಳಿಯ ಸುವರ್ಣ ಮುಖಿ ಕಲ್ಯಾಣಿಗೆ ಈಜಲು ತೆರಳಿದ್ದ ಇಬ್ಬರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ದೀಪು (20) ಹಾಗೂ ಯೋಗೀಶ್ವರ್ (20) ಎಂದು ಗುರುತಿಸಲಾಗಿದೆ.
ಬೊಮ್ಮಸಂದ್ರದ ಎಸ್ ಎಫ್ ಎಸ್ ಕಾಲೇಜಿನ ಐವರು ವಿದ್ಯಾರ್ಥಿಗಳು ಈಜು ಗೊತ್ತಿಲ್ಲದಿದ್ದರೂ ಸುವರ್ಣಮುಖಿ ಕಲ್ಯಾಣಿಗೆ ಈಜಲು ತೆರಳಿದ್ದರು. ಈ ವೇಳೆ ಇಬ್ಬರು ಸ್ನೇಹಿತರೊಂದಿಗೆ ದೀಪು ಹಾಗೂ ಯೋಗೀಶ್ವರ್ ಕಲ್ಯಾಣಿಗೆ ಇಳಿದಿದ್ದಾರೆ. ಮತ್ತೋರ್ವ ದಡದಲ್ಲಿ ನಿಂತು ವಿಡಿಯೋ ಮಾಡುತ್ತಿದ್ದ ಎನ್ನಲಾಗಿದೆ.
ಇಬ್ಬರು ಸ್ನೇಹಿತರು ನೀರಿನಲ್ಲಿ ಈಜಲಾಗದೇ ಮುಳುಗುತ್ತಿರುವುದೂ ಉಳಿದವರಿಗೆ ಅರಿವಾಗಿಲ್ಲ. ಇದನ್ನು ಗಮನಿಸಿದ ದಡದಲ್ಲಿ ನಿಂತಿದ್ದ ವಿದ್ಯಾರ್ಥಿ ಅವರ ರಕ್ಷಣೆಗೆ ಕೂಗಿ ಹೇಳಿದ್ದಾನೆ. ಆದರೆ ಆದಾಗಲೇ ಸಾಕಷ್ಟು ನೀರು ಕುಡಿದಿದ್ದ ಇಬ್ಬರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಇಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ವಿದ್ಯಾರ್ಥಿಗಳ ಮೃತದೇಹವನ್ನು ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ನೀರಿನಿಂದ ಹೊರತೆಗೆದಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.