ಕಲಬುರಗಿ: ರೈತರ ಜಮೀನಿಗೆ ವಿದ್ಯುತ್ ಕೊಟ್ಟ ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ರೈತರು ವಿನೂತನ ಮತ್ತು ಆಘಾತಕಾರಿ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹೌದು.. ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಗರೂರ್ ಬಿ ಗ್ರಾಮದ ರೈತರು ಗುಲ್ಬರ್ಗಾ ವಿದ್ಯುತ್ ಪ್ರಸರಣ ನಿಗಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಚೇರಿಗೆ ಜೀವಂತ ಮೊಸಳೆ ತಂದು ಪ್ರತಿಭಟನೆ ನಡೆಸಿದ್ದಾರೆ. ತಮ್ಮ ಎತ್ತಿನ ಗಾಡಿಗೆ ಬೃಹತ್ ಮೊಸಳೆಯನ್ನು ಕಟ್ಟಿಕೊಂಡು ಬಂದು ವಿದ್ಯುತ್ ಕಡಿತದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಜೆಸ್ಕಾಂ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ತಮ್ಮ ಜಮೀನಿಗೆ ಮೊಸಳೆಗಳು ಆಗಮಿಸುತ್ತಿದ್ದು, ಇದರಿಂದ ತಮಗೆ ತೀವ್ರ ಸಮಸ್ಯೆಯಾಗುತ್ತಿದೆ. ಮೊಸಳೆಗಳಿಂದ ಜೀವಭಯದಲ್ಲೇ ಜಮೀನು ಕೆಲಸ ಮಾಡಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಎಷ್ಟೇ ದೂರು ಕೊಟ್ಟರು ಅವರಿಂದ ಯಾವುದೇ ಸೂಕ್ತ ರೀತಿಯ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ರೈತರು ಮೊಸಳೆಯನ್ನು ಸೆರೆಹಿಡಿದು ಎತ್ತಿನಗಾಡಿಯಲ್ಲಿ ಹೇರಿಕೊಂಡು ಬಂದು ಜೆಸ್ಕಾಂ ಕಚೇರಿಗೆ ತಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ, ಮೊಸಳೆ ಕಾಟಕ್ಕೂ ಜೆಸ್ಕಾಂ ಕಚೇರಿಗೂ ಏನು ಸಂಬಂಧ ಅಂದುಕೊಂಡಿರಾ? ಈ ಗರೂರ್ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಭೀಮಾ ನದಿ ಪಾತ್ರದ ಜಮೀನುಗಳಿಗೆ ನಸುಕಿನ ಜಾವ 4 ಗಂಟೆ ಸುಮಾರಿಗೆ ಮಾತ್ರ ಜೆಸ್ಕಾಂ ತ್ರೀ ಫೇಸ್ ಕರೇಂಟ್ ಸಪ್ಲೈ ಮಾಡುತ್ತಿದೆ. ಇದರಿಂದ ರೈತರು ಅನಿವಾರ್ಯವಾಗಿ ಮಧ್ಯರಾತ್ರಿಯೇ ಎದ್ದು ಕೃಷಿ ಜಮೀನಿಗೆ ನೀರು ಹರಿಸಲು ಮೋಟಾರು ಆನ್ ಮಾಡಲು ಹೋಗುತ್ತಾರೆ. ಈ ವೇಳೆ ಅಲ್ಲಿ ಆಹಾರ ಅರಸುತ್ತ ಬರುವ ಮೊಸಳೆಗಳು ದಾಳಿ ಮಾಡುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.
ಇಂತಹ ಸಾಕಷ್ಟು ಪ್ರಕರಣಗಳು ಈ ಭಾಗದಲ್ಲಿ ವರದಿಯಾಗಿದ್ದು, ಇದೇ ಕಾರಣಕ್ಕೆ ರೈತರು ಜೀವಂತ ಮೊಸಳೆಯನ್ನೇ ಹಿಡಿದು ಜೆಸ್ಕಾಂ ಕಚೇರಿಗೇ ತಂದು ಪ್ರತಿಭಟನೆ ನಡೆಸಿದ್ದಾರೆ. ಕೃಷಿ ಉದ್ದೇಶಗಳಿಗಾಗಿ ಸ್ಥಿರವಾದ ವಿದ್ಯುತ್ ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.