ವಿಪಕ್ಷ ನಾಯಕ ಆರ್.ಅಶೋಕ್ 
ರಾಜ್ಯ

ತೆಲಂಗಾಣಕ್ಕೆ 1.24 ಟಿಎಂಸಿ ನೀರು ಬಿಡುಗಡೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್ ಅಶೋಕ್ ವಾಗ್ದಾಳಿ

ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 'ದ್ರೋಹದಲ್ಲಿ ಮಲ್ಲಪ್ಪ ಶೆಟ್ಟಿ ಮತ್ತು ಮೀರ್ ಸಾದಿಕ್ ಅವರನ್ನು ಸಹ ಮೀರಿಸಿದೆ' ಎಂದು ಹೇಳಿದ್ದಾರೆ.

ಬೆಂಗಳೂರು: ರಾಜ್ಯದ ಹಿತಾಸಕ್ತಿಗೆ ವಿರುದ್ಧವಾಗಿ ಜಲಾಶಯಗಳಿಂದ ತೆಲಂಗಾಣಕ್ಕೆ 1.24 ಟಿಎಂಸಿ ನೀರು ಬಿಡುಗಡೆ ಮಾಡಿರುವ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವನ್ನು ಕರ್ನಾಟಕ ಬಿಜೆಪಿ ಟೀಕಿಸಿದೆ.

ವಿರೋಧ ಪಕ್ಷದ ನಾಯಕ ಆರ್ ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು 'ದ್ರೋಹದಲ್ಲಿ ಮಲ್ಲಪ್ಪ ಶೆಟ್ಟಿ ಮತ್ತು ಮೀರ್ ಸಾದಿಕ್ ಅವರನ್ನು ಸಹ ಮೀರಿಸಿದೆ' ಎಂದು ಹೇಳಿದ್ದಾರೆ. ಮಲ್ಲಪ್ಪ ಶೆಟ್ಟಿ ಮತ್ತು ಮೀರ್ ಸಾದಿಕ್ ಬ್ರಿಟಿಷರೊಂದಿಗೆ ಶಾಮೀಲಾಗಿ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಿಗೆ ದ್ರೋಹ ಬಗೆದಿದ್ದರು.

'ಕಳೆದ ವರ್ಷ, ತೀವ್ರ ಬರಗಾಲದ ನಡುವೆಯೂ ಕಾಂಗ್ರೆಸ್ ಸರ್ಕಾರವು ತಮಿಳುನಾಡಿಗೆ ರಹಸ್ಯವಾಗಿ ಕಾವೇರಿ ನೀರನ್ನು ಬಿಡುಗಡೆ ಮಾಡಿತ್ತು. ಈಗ, ಸುಡುವ ಬೇಸಿಗೆಯನ್ನು ಪರಿಗಣಿಸದೆ, ಆಲಮಟ್ಟಿ ಮತ್ತು ನಾರಾಯಣಪುರ ಜಲಾಶಯಗಳಿಂದ ತೆಲಂಗಾಣಕ್ಕೆ 1.24 ಟಿಎಂಸಿ ನೀರನ್ನು ಬಿಡುಗಡೆ ಮಾಡುತ್ತಿದೆ' ಎಂದು ಹೇಳಿದರು.

'ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ, ಈಗ ನೀರು ಬಿಡುಗಡೆ ಮಾಡುವುದರಿಂದ ರಾಜ್ಯಕ್ಕೆ ತೊಂದರೆ ಉಂಟಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದರೂ, ರೈತ ಸಂಘಟನೆಗಳ ವಿರೋಧದ ನಡುವೆಯೂ, ನೀವಿನ್ನು ನಿಮ್ಮ ರಾಜಕೀಯ ಲಾಭಕ್ಕಾಗಿ ತೆಲಂಗಾಣಕ್ಕೆ ನೀರು ಬಿಡುಗಡೆ ಮಾಡುತ್ತಿದ್ದೀರಿ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಅನ್ನು ಮೆಚ್ಚಿಸಲು ನೀವು ತೆಲಂಗಾಣ ಕಾಂಗ್ರೆಸ್ ನಾಯಕರೊಂದಿಗೆ ಯಾವುದೇ ರಹಸ್ಯ ಒಪ್ಪಂದಗಳನ್ನು ಮಾಡಿಕೊಂಡಿದ್ದೀರಾ?' ಎಂದು ಪ್ರಶ್ನಿಸಿದರು.

'ರಾಜ್ಯದ ರೈತರು ಮತ್ತು ಸಾಮಾನ್ಯ ಜನರ ಹಿತಾಸಕ್ತಿಗಳನ್ನು ರಕ್ಷಿಸುವುದಕ್ಕಿಂತ ನಿಮ್ಮ ರಾಜಕೀಯ ಸ್ವಾರ್ಥ ಮುಖ್ಯವೇ? ಕರ್ನಾಟಕದ ನೀರನ್ನು ತೆಲಂಗಾಣಕ್ಕೆ ಬಿಡಲು ನೀವು ಯಾವ ಅಧಿಕಾರದ ಮೇಲೆ ಅನುಮತಿ ನೀಡಿದ್ದೀರಿ?. ಇತರ ರಾಜ್ಯಗಳಿಗೆ ನೀರು ಹರಿಸುವ ಮೂಲಕ ಕನ್ನಡಿಗರಿಗೆ ನೀರನ್ನು ನಿರಾಕರಿಸಿದ್ದಕ್ಕಾಗಿ ಈ ದೇಶದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಸ್ವಾಭಿಮಾನಿ ಕನ್ನಡಿಗರು ಪಾಠ ಕಲಿಸಬೇಕು' ಎಂದರು.

ಡಿಕೆ ಶಿವಕುಮಾರ್ ಪ್ರತಿಕ್ರಿಯೆ

ನಾರಾಯಣಪುರ ಅಣೆಕಟ್ಟೆಯಿಂದ ತೆಲಂಗಾಣಕ್ಕೆ ರಾತ್ರಿಯಿಡೀ ನೀರು ಬಿಡುಗಡೆ ಮಾಡಲಾಗಿದೆ ಎಂಬ ಆರೋಪದ ಬಗ್ಗೆ ಉತ್ತರಿಸಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಶಿವಕುಮಾರ್, 'ಇಲ್ಲಿ ಮರೆಮಾಡಲು ಏನೂ ಇಲ್ಲ. ನದಿ ತೀರದ ರಾಜ್ಯಗಳು ಸಂಕಷ್ಟದ ಸಮಯದಲ್ಲಿ ಪರಸ್ಪರ ಸಹಾಯ ಮಾಡಿಕೊಳ್ಳುತ್ತವೆ. ಅವರು ಅನೇಕ ಸಂದರ್ಭಗಳಲ್ಲಿ ನಮಗೆ ಸಹಾಯ ಮಾಡಿದ್ದಾರೆ ಮತ್ತು ನಾವು ಸಹ ಅವರಿಗೆ ಸಹಾಯ ಮಾಡುತ್ತೇವೆ. ನೀರಾವರಿ ಸಚಿವರು ವೈಯಕ್ತಿಕವಾಗಿ ಮನವಿ ಮಾಡಿದ್ದರಿಂದ ಒಂದು ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ' ಎಂದು ಹೇಳಿದರು.

'ತೆಲಂಗಾಣ ರಾಜ್ಯವು ರಾಜ್ಯದ ಅವಶ್ಯಕತೆಗಳಿಗೆ ಹಲವು ಬಾರಿ ಸ್ಪಂದಿಸಿದೆ. ಅವರು ನಮಗೆ ಕೃಷ್ಣಾ ನದಿಯಿಂದ ನೀರು ನೀಡಿದ್ದಾರೆ. ಇದರಲ್ಲಿ ಯಾವುದೇ ತಪ್ಪಿಲ್ಲ ಮತ್ತು ನೆರೆಯ ರಾಜ್ಯಗಳಾಗಿ ಪರಸ್ಪರ ಸಹಾಯಕ್ಕೆ ನಿಲ್ಲಬೇಕಾಗುತ್ತದೆ' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT