ಸಚಿವ ಹೆಚ್.ಕೆ.ಪಾಟೀಲ್ 
ರಾಜ್ಯ

ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್​ ವರದಿಯೇ ಅಂತಿಮ; ಕನ್ನಡಿಗರು ಚಿಂತಿಸುವ ಅಗತ್ಯವಿಲ್ಲ: ಹೆಚ್.ಕೆ ಪಾಟೀಲ್

ಬೆಳಗಾವಿ ಮತ್ತು ಗಡಿ ಪ್ರದೇಶಗಳಲ್ಲಿ ಜನರು ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದಾಗ್ಯೂ, ಕೆಲವರು ನ್ಯಾಯಾಂಗ ಹೋರಾಟದ ನೆಪದಲ್ಲಿ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ.

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಮಹಾಜನ್​ ವರದಿಯೇ ಅಂತಿಮ, ಸುಪ್ರೀಂ ಕೋರ್ಟ್‌ನಲ್ಲಿ ಬಾಕಿ ಇರುವ ಪ್ರಕರಣದ ಬಗ್ಗೆ ಕನ್ನಡಿಗರು ಚಿಂತಿಸುವ ಅಗತ್ಯವಿಲ್ಲ ಎಂದು ಗಡಿ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಶನಿವಾರ ಹೇಳಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಗಡಿ ಭಾಗದ ಕನ್ನಡಪರ ಸಂಘಟನೆಗಳ ಮುಖಂಡರ ಜೊತೆಗೆ ಸಭೆ ನಡೆಸಿದ ಬಳಿಕ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಳಗಾವಿ ಮತ್ತು ಗಡಿ ಪ್ರದೇಶಗಳಲ್ಲಿ ಜನರು ಶಾಂತಿ ಮತ್ತು ಸಾಮರಸ್ಯದಿಂದ ಬದುಕುತ್ತಿದ್ದಾರೆ. ಆದಾಗ್ಯೂ, ಕೆಲವರು ನ್ಯಾಯಾಂಗ ಹೋರಾಟದ ನೆಪದಲ್ಲಿ ರಾಜಕೀಯ ಲಾಭಕ್ಕಾಗಿ ಈ ವಿಷಯವನ್ನು ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ. ವಾಸ್ತವದಲ್ಲಿ, ಕಳೆದ 14 ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿಲ್ಲ, ಏಕೆಂದರೆ ಇದು ಸಾಂವಿಧಾನಿಕ ಪ್ರಶ್ನೆಯನ್ನು ಒಳಗೊಂಡಿದೆ. ಕನ್ನಡಿಗರು ಇದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಮಹದಾಯಿ ಯೋಜನೆಗೆ ಗೋವಾದ ವಿರೋಧದ ಕುರಿತು ಮಾತನಾಡಿ, "ನ್ಯಾಯಮಂಡಳಿಯು ಈಗಾಗಲೇ ಕರ್ನಾಟಕಕ್ಕೆ 3.9 ಟಿಎಂಸಿ ನೀರನ್ನು ಹಂಚಿಕೆ ಮಾಡಿದೆ. ಅರಣ್ಯ ಮತ್ತು ಸಕ್ಷಮ ಅಧಿಕಾರಿಗಳಿಂದ ಅನುಮತಿಗಳನ್ನು ಪಡೆಯಲಾಗಿದೆ. ವನ್ಯಜೀವಿ ಮಂಡಳಿಯೂ ಸಹ ಅನುಮತಿ ನೀಡಿದೆ, ಆದರೆ, ಪ್ರಕ್ರಿಯೆಯು ಈಗ ಅನಗತ್ಯವಾಗಿ ವಿಳಂಬವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ಮತ್ತು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ಅವರಿಗೆ ಮನವಿ ಮಾಡಿದ ಪಾಟೀಲ್, ಇದು ಗೊಂದಲ ಸೃಷ್ಟಿಸುವ ಸಮಯವಲ್ಲ. ಮಹಾದಾಯಿ ಸಮಸ್ಯೆಯನ್ನು ಪರಿಹರಿಸಲು ಗೋವಾ ಮತ್ತು ಕರ್ನಾಟಕ ಸಿಎಂಗಳ ಸಭೆಯನ್ನು ಕರೆಯುವುದಾಗಿ ಚುನಾವಣಾ ಪ್ರಚಾರದ ಸಮಯದಲ್ಲಿ ಮೋದಿ ಸ್ವತಃ ಭರವಸೆ ನೀಡಿದ್ದರು. ಪ್ರಧಾನಿ ಮತ್ತು ಬಿಜೆಪಿ ಸಂಸದರು ಈಗೇಕೆ ಮೌನವಾಗಿದ್ದಾರೆ? ಗೋವಾ ಸಿಎಂ ಹೇಳಿಕೊಂಡಿರುವಂತೆ ಕೇಂದ್ರವು ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು. ಮೌನವು ಒಕ್ಕೂಟ ರಚನೆಗೆ ಹಾನಿ ಮಾಡುತ್ತದೆ ಎಂದು ತಿಳಿಸಿದರು.

ಇದಕ್ಕೂ ಮೊದಲು, ಪಾಟೀಲ್ ಅವರು ಗಡಿ ಪ್ರದೇಶಗಳ ಕನ್ನಡ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಿದರು,

ಕಾರ್ಯಕರ್ತರಾದ ಅಭಿಲಾಷ್, ಮಹಾದೇವ್ ತಲ್ವಾರ್, ಶ್ರೀನಿವಾಸ್ ತಾಲೂಕರ್, ಕಸ್ತೂರಿ ಭಾವಿ, ಬಸವರಾಜ್ ಖಾನಪ್ಪನವರ್, ಪ್ರೇಮ್ ಚೌಗುಲಾ, ದೀಪಕ್ ಗುಡೇಗನಟ್ಟಿ, ಮೆಹಬೂಬ್ ಮಕಾಂದರ್ ಮತ್ತು ಇತರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕೇಂದ್ರದೊಂದಿಗೆ ಮಾತುಕತೆ ಸೇರಿದಂತೆ ಗೋವಾದಲ್ಲಿ ಕನ್ನಡಿಗರನ್ನು ರಕ್ಷಿಸಲು ರಾಜ್ಯ ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಭರವಸೆ ನೀಡಿದರು.

ಕನ್ನಡ ಕಾರ್ಯಕರ್ತರ ವಿರುದ್ಧದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಕುರಿತು ಪರಿಶೀಲಿಸಲಾಗುವುದು ಎಂದರು.

ಬೆಳಗಾವಿ ಸೇರಿದಂತೆ ಗಡಿ ಪ್ರದೇಶಗಳಲ್ಲಿನ ಕನ್ನಡ ಮಾಧ್ಯಮ ಶಾಲೆಗಳ ಮೂಲಸೌಕರ್ಯ ಮತ್ತು ಗುಣಮಟ್ಟವನ್ನು ಸುಧಾರಿಸಲು, ಶಿಕ್ಷಣ ಸಚಿವರು ಮತ್ತು ಬೆಳಗಾವಿ ನಿಯೋಗದೊಂದಿಗೆ ವಿವರವಾದ ಚರ್ಚೆ ನಡೆಸುವುದಾಗಿ ಪಾಟೀಲ್ ಹೇಳಿದರು.

ಈ ಶಾಲೆಗಳ ಸ್ಥಿತಿಯನ್ನು ಅಧ್ಯಯನ ಮಾಡಲು ಮತ್ತು ಸರ್ಕಾರದ ಕ್ರಮಕ್ಕೆ ಅನುಕೂಲವಾಗುವಂತೆ ವರದಿಯನ್ನು ಸಲ್ಲಿಸಲು ಸ್ಥಳೀಯ ಸಮಿತಿಯನ್ನು ರಚಿಸುವಂತೆ ಕನ್ನಡ ಸಂಘಟನೆಗಳನ್ನು ಒತ್ತಾಯಿಸಿದರು.

ಪ್ರವಾಸೋದ್ಯಮವನ್ನು ಉತ್ತೇಜಿಸಲು ಬೆಂಗಳೂರಿನ ವಿಧಾನಸೌಧದಂತೆಯೇ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧವನ್ನು ಸಾರ್ವಜನಿಕ ವೀಕ್ಷಣೆಗೆ ತೆರೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ಸಚಿವರು ಘೋಷಿಸಿದರು.

ಮೈಸೂರು ದಸರಾ ರೀತಿಯಲ್ಲಿ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕೆಂಬ ಬೇಡಿಕೆಗೂ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದರು. ವಿಶೇಷ ಅನುದಾನದ ಮನವಿಯನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ಗಡಿ ಪ್ರದೇಶದ ಕಲಾವಿದರಿಗೆ ಹೆಚ್ಚಿನ ಬೆಂಬಲವನ್ನು ನೀಡುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನಿರ್ದೇಶನ ನೀಡಿದರು.

ಇದಲ್ಲದೆ, ಬೆಳಗಾವಿಯ ರಾಣಿ ಚೆನ್ನಮ್ಮ ವೃತ್ತದಲ್ಲಿ ಮೇಲ್ಸೇತುವೆ ನಿರ್ಮಾಣದ ವೇಳೆ ಕಿತ್ತೂರು ರಾಣಿ ಚೆನ್ನಮ್ಮ ಅವರ ದೊಡ್ಡ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಕೈಗೆತ್ತಿಕೊಂಡಿರುವುದಾಗಿ ಪಾಟೀಲ್ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸವದತ್ತಿ ಶಾಸಕ ವಿಶ್ವಾಸ್ ವೈದ್ಯ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ್ ಚಂದರಗಿ, ಉಪ ಆಯುಕ್ತ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಭೂಷಣ್ ಬೋರ್ಸೆ, ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಮತ್ತು ಎಸ್ಪಿ ಡಾ. ಭೀಮಾಶಂಕರ್ ಗುಳೇದ್ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರೋಚಕ ಘಟ್ಟ ತಲುಪಿದ 'ಸಿಎಂ ಬದಲಾವಣೆ' ಚರ್ಚೆ: ಡಿಕೆಶಿ ಪರ ಶಾಸಕರು ದಿಢೀರ್ ದೆಹಲಿ ಯಾತ್ರೆ; ಹೈಕಮಾಂಡ್ ಮುಂದೆ ಶಕ್ತಿ ಪ್ರದರ್ಶನಕ್ಕೆ ಸಜ್ಜು!

Delhi Blast: ಮತ್ತೆ 4 ಪ್ರಮುಖ ಆರೋಪಿಗಳ ಬಂಧನ, ಬಂಧಿತರ ಸಂಖ್ಯೆ 6 ಕ್ಕೇರಿಕೆ

Vaikunta Ekadasi: ತಿರುಮಲ ವೈಕುಂಠ ದ್ವಾರ ದರ್ಶನ ಕುರಿತು TTD ಮಹತ್ವದ ಮಾಹಿತಿ, ಆನ್​ಲೈನ್​ನಲ್ಲಿ ಮಾತ್ರ ಟಿಕೆಟ್ ಲಭ್ಯ!

News headlines 20-11-2025| ಕ್ರಾಂತಿಯೂ ಇಲ್ಲ, ಭ್ರಾಂತಿಯೂ ಇಲ್ಲ 5 ವರ್ಷ ನಾನೇ ಸಿಎಂ-ಸಿದ್ದರಾಮಯ್ಯ; ಡಿಕೆ ಶಿವಕುಮಾರ್ ಆಪ್ತರು ದಿಢೀರ್ ದೆಹಲಿಗೆ ಪ್ರಯಾಣ; ATM ವಾಹನ ದರೋಡೆ ಕೇಸ್: ತಿರುಪತಿಯಲ್ಲಿ ಇಬ್ಬರ ಬಂಧನ; ಧರ್ಮಸ್ಥಳ ಪ್ರಕರಣ: ಕೋರ್ಟ್ ಗೆ SIT ತನಿಖಾ ವರದಿ ಸಲ್ಲಿಕೆ

Jammu: ದೇಶ ವಿರೋಧಿ ಚಟುವಟಿಕೆ ಆರೋಪ, 'ಕಾಶ್ಮೀರ್ ಟೈಮ್ಸ್' ಕಚೇರಿ ಮೇಲೆ ದಾಳಿ; AK-47 ಕಾರ್ಟ್ರಿಡ್ಜ್‌ಗಳು ಪತ್ತೆ!

SCROLL FOR NEXT