ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ನಾಲ್ವರು ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಅಪರಾಧ ತನಿಖಾ ಇಲಾಖೆ (ಸಿಐಡಿ) ಮಂಗಳವಾರ ಮನವಿ ಮಾಡಿದೆ. ಆದರೆ ನಂತರ ಕರ್ನಾಟಕ ಹೈಕೋರ್ಟ್ನಲ್ಲಿ ಸಂಬಂಧಿತ ಪ್ರಕರಣವೊಂದರಲ್ಲಿ ತೀರ್ಪು ಬರುವವರೆಗೆ ತನ್ನ ಕಸ್ಟಡಿ ಅರ್ಜಿಯನ್ನು ತಡೆಹಿಡಿದಿದೆ.
ಬಂಧಿತ ಆರ್ಸಿಬಿಯ ಮಾರ್ಕೆಟಿಂಗ್ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಪ್ರೈವೇಟ್ ಲಿಮಿಟೆಡ್ನ ಸುನಿಲ್ ಮ್ಯಾಥ್ಯೂ(ನಿರ್ದೇಶಕ ಮತ್ತು ಉಪಾಧ್ಯಕ್ಷ), ಕಿರಣ್ ಕುಮಾರ್(ಮ್ಯಾನೇಜರ್) ಮತ್ತು ಶಮಂತ್ ಎಸ್ಪಿ(ಟಿಕೆಟಿಂಗ್ ಎಕ್ಸಿಕ್ಯೂಟಿವ್) ಅವರನ್ನು ಇಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರುಪಡಿಸಿತು.
ವಿವರವಾದ ವಿಚಾರಣೆ ಮತ್ತು ಹೆಚ್ಚಿನ ತನಿಖೆಗಾಗಿ ಆರೋಪಿಗಳನ್ನು ಒಂಬತ್ತು ದಿನಗಳ ಕಾಲ ತನ್ನ ಕಸ್ಟಡಿ ನೀಡುವಂತೆ ಸಿಐಡಿ ಕೋರಿದೆ. ಆದರೆ, ಕಸ್ಟಡಿ ಕೋರಿಕೆಗೆ ಪ್ರತಿವಾದಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.
ಸೋಸಲೆ ಪರವಾಗಿ ಹಾಜರಾದ ಹಿರಿಯ ವಕೀಲ ಸಂದೇಶ್ ಚೌಟ ಅವರು, ಬಂಧನ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಈಗಾಗಲೇ ವಿಚಾರಣೆ ನಡೆಸುತ್ತಿದೆ ಎಂದು ಗಮನಸೆಳೆದರು.
"ತಕ್ಷಣ ಕಸ್ಟಡಿಗೆ ಕೋರಲು ಇಷ್ಟೊಂದು ತುರ್ತು ಏಕೆ?" ಎಂದು ಪ್ರಶ್ನಿಸಿದ ಅವರು, ಹೈಕೋರ್ಟ್ ತೀರ್ಪು ನೀಡುವವರೆಗೆ ಆರೋಪಿಯನ್ನು ಸಿಐಡಿಗೆ ಹಸ್ತಾಂತರಿಸಬಾರದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಬಂಧನದ ಕಾನೂನುಬದ್ಧತೆಗೆ ಸಂಬಂಧಿಸಿದ ಅರ್ಜಿಯು ಇನ್ನೂ ಪರಿಗಣನೆಯಲ್ಲಿದೆ ಎಂದು ಗಮನಿಸಿದ ಮ್ಯಾಜಿಸ್ಟ್ರೇಟ್ ಕೂಡ ಕಳವಳ ವ್ಯಕ್ತಪಡಿಸಿದರು. ಏಕೆ ಈ ಆತುರ? ಎಂದು ನ್ಯಾಯಾಧೀಶರು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ(ಎಎಸ್ಪಿ) ಜಗದೀಶ್ ಅವರನ್ನು ಕೇಳಿದರು, ಆರೋಪಿಗಳ ಕಸ್ಟಡಿ ಪ್ರಸ್ತುತ ನಡೆಯುತ್ತಿರುವ ತನಿಖೆಗೆ ನಿರ್ಣಾಯಕವಾಗಿದೆ ಎಂದು ಉತ್ತರಿಸಿದರು.
ಅಡ್ವೊಕೇಟ್ ಜನರಲ್(ಎಜಿ) ಅವರೊಂದಿಗೆ ಸಂಕ್ಷಿಪ್ತ ವಿರಾಮ ಮತ್ತು ಸಮಾಲೋಚನೆಯ ನಂತರ, ಎಎಸ್ಪಿ ಜಗದೀಶ್ ಅವರು, ಸಿಐಡಿ ತನ್ನ ಕಸ್ಟಡಿ ಕೋರಿಕೆಯನ್ನು ಹೈಕೋರ್ಟ್ ವಿಚಾರಣೆ ಮುಗಿಯುವವರೆಗೆ ತಡೆಹಿಡಿಯುತ್ತದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ನಂತರ ಮ್ಯಾಜಿಸ್ಟ್ರೇಟ್ ಈ ವಿಷಯವನ್ನು ಮುಂದೂಡಿದರು ಮತ್ತು ಯಾವುದೇ ಕಸ್ಟಡಿಗೆ ಅವಕಾಶ ನೀಡದೆ, ನಾಲ್ವರು ಆರೋಪಿಗಳನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಯಿತು.