ನಟಿ ರನ್ಯಾ ರಾವ್ 
ರಾಜ್ಯ

Gold Smuggling: 'ನನ್ನ ವೃತ್ತಿಜೀವನದಲ್ಲಿ ಒಂದೇ ಒಂದು ಬ್ಲಾಕ್ ಮಾರ್ಕ್ ಇರಲಿಲ್ಲ'; ನಟಿ Ranya Rao ತಂದೆ ಕರ್ನಾಟಕ ಡಿಜಿಪಿ ಹೇಳಿಕೆ!

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ರನ್ಯಾ ಅವರ ಬಳಿ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಪತ್ತೆಹಚ್ಚಿದ್ದಾರೆ.

ಬೆಂಗಳೂರು: ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ತಮ್ಮ ಮಲಮಗಳು ನಟಿ ರನ್ಯಾ ರಾವ್ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಆಘಾತ ವ್ಯಕ್ತಪಡಿಸಿದ್ದಾರೆ.

ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ರನ್ಯಾ ಅವರ ಬಳಿ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಪತ್ತೆಹಚ್ಚಿದ್ದಾರೆ ಎಂಬ ಆರೋಪದ ನಂತರ ಮಂಗಳವಾರ ರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರನ್ನು ವಶಕ್ಕೆ ಪಡೆಯಲಾಯಿತು.

ಈ ವಿಚಾರ ಕರ್ನಾಟಕದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಇದೇ ವಿಚಾರವಾಗಿ ರನ್ಯಾ ರಾವ್ ಅವರ ತಂದೆ ಕರ್ನಾಟಕ ಹಿರಿಯ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ್ದಾರೆ.

'ತಮ್ಮ ಮಗಳು ಮಾಡಿದ್ದಾರೆ ಎನ್ನಲಾದ ಕೃತ್ಯದ ಬಗ್ಗೆ ತನಗೆ ಯಾವುದೇ ಪೂರ್ವ ಜ್ಞಾನವಿರಲಿಲ್ಲ ಮತ್ತು ಮಾಧ್ಯಮ ವರದಿಗಳ ಮೂಲಕ ಬಂಧನದ ಬಗ್ಗೆ ತಿಳಿದುಕೊಂಡೆ ಎಂದು ಹೇಳಿದ್ದಾರೆ. 'ಆರಂಭದಲ್ಲಿ ನಿಜಕ್ಕೂ ಈ ಸುದ್ದಿ ನನಗೆ ಆಘಾತ ಉಂಟು ಮಾಡಿತು. ವಿಷಯ ತಿಳಿಯುತ್ತಲೇ ದಿಗ್ಭ್ರಮೆಗೊಂಡೆ. ಈ ವಿಷಯಗಳ ಬಗ್ಗೆ ನನಗೆ ಯಾವುದೇ ಮಾಹಿತಿ ತಿಳಿದಿರಲಿಲ್ಲ. ನಾನು ಹೆಚ್ಚೇನೂ ಹೇಳಲು ಬಯಸುವುದಿಲ್ಲ" ಎಂದು ಅವರು ಹೇಳಿದರು.

ಇದೇ ವೇಳೆ ನಟಿ ರನ್ಯಾ ಅವರೊಂದಿಗಿನ ಸಂಬಂಧವನ್ನು ಸ್ಪಷ್ಟಪಡಿಸಿದ ರಾಮಚಂದ್ರ ರಾವ್, "ಪ್ರಸ್ತುತ ಆಕೆ ನಮ್ಮೊಂದಿಗೆ ವಾಸಿಸುತ್ತಿಲ್ಲ. ಆಕೆ ಪತಿಯೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಕೆಲವು ಕೌಟುಂಬಿಕ ಸಮಸ್ಯೆಗಳಿಂದಾಗಿ ಉಭಯ ಕುಟುಂಬಗಳ ನಡುವೆ ಸಂಪರ್ಕವಿಲ್ಲ ಎಂದು ಹೇಳಿದ್ದಾರೆ.

ಅಂದಹಾಗೆ ನಟಿ ರನ್ಯಾ ರಾವ್ ಐಪಿಎಸ್ ಅಧಿಕಾರಿ ಡಾ. ಕೆ. ರಾಮಚಂದ್ರ ರಾವ್ ಅವರ 2ನೇ ಹೆಂಡತಿಯ ಮಗಳು. ಮೊದಲ ಪತ್ನಿ ನಿಧನರಾದ ನಂತರ ರಾವ್ ಅವರು ಮರುಮದುವೆಯಾಗಿದ್ದರು. ಎರಡನೇ ಹೆಂಡತಿಗೆ ಅವರ ಹಿಂದಿನ ಮದುವೆಯಿಂದ ಇಬ್ಬರು ಹೆಣ್ಣುಮಕ್ಕಳಿದ್ದರು, ಅವರಲ್ಲಿ ರನ್ಯಾ ಕೂಡ ಒಬ್ಬರು ಎನ್ನಲಾಗಿದೆ.

ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ರನ್ಯಾರಾವ್

ಇನ್ನು ದುಬೈನಿಂದ ಭಾರತಕ್ಕೆ 14.8 ಕಿಲೋಗ್ರಾಂಗಳಷ್ಟು ಚಿನ್ನವನ್ನು ಕಳ್ಳಸಾಗಣೆ ಪ್ರಕರಣದಲ್ಲಿ ರನ್ಯಾ ಅವರು ಭಾಗಿಯಾಗಿದ್ದಾರೆ ಎಂಬ ಆರೋಪದಲ್ಲಿ ಅವರ ಬಂಧನವಾಗಿದೆ.

ಈ ಬಗ್ಗೆ ಕಾಂಗ್ರೆಸ್ ಶಾಸಕ ಮತ್ತು ಕರ್ನಾಟಕ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಬಂಧನದ ಬಗ್ಗೆ ಹೇಳಿಕೆ ನೀಡಿದ್ದು, 'ರನ್ಯಾ ಅವರನ್ನು ಕೂಡ ಇತರ ಆರೋಪಿಗಳಂತೆ ಪರಿಗಣಿಸಲಾಗುತ್ತಿದೆ. ಅವರು ಕಳ್ಳಸಾಗಣೆಯಲ್ಲಿ ತೊಡಗಿದ್ದಕ್ಕಾಗಿ ಆರೋಪಿಯಾಗಿದ್ದಾರೆ. ಅವರು ಡಿಜಿಪಿಯವರ ಸಂಬಂಧಿಕರಾಗಿರಲಿ ಅಥವಾ ಮುಖ್ಯಮಂತ್ರಿಗಳ ಸಂಬಂಧಿಕರಾಗಿರಲಿ ಅಥವಾ ಪ್ರಧಾನಮಂತ್ರಿಗಳ ಸಂಬಂಧಿಕರೇ ಆಗಿದ್ದರೂ, ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ... ಇದರಲ್ಲಿ ಯಾವುದೇ ಅಧಿಕೃತ ಸಂಬಂಧವಿದ್ದರೆ, ಅದು ತನಿಖೆಯಲ್ಲಿ ಹೊರಬರುತ್ತದೆ ಎಂದು ಹೇಳಿದ್ದಾರೆ.

ರನ್ಯಾ ರಾವ್ ನಿವಾಸದ ಮೇಲೂ ದಾಳಿ

ಇನ್ನು ರನ್ಯಾ ರಾವ್ ಬಂಧನ ಬೆನ್ನಲ್ಲೇ ಬುಧವಾರ, ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ರನ್ಯಾ ರಾವ್ ಅವರ ಲ್ಯಾವೆಲ್ಲೆ ರಸ್ತೆಯ ನಿವಾಸದಿಂದ ರೂ 4.73 ಕೋಟಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಂಡಿದೆ. ರನ್ಯಾ ತಮ್ಮ ಪತಿಯೊಂದಿಗೆ ವಾಸಿಸುತ್ತಿರುವ ಮನೆಯಿಂದ 2.06 ಕೋಟಿ ರೂ. ಮೌಲ್ಯದ ಆಭರಣಗಳು ಮತ್ತು 2.67 ಕೋಟಿ ರೂ. ನಗದು ವಶಪಡಿಸಿಕೊಂಡಿರುವುದನ್ನು ಡಿಆರ್‌ಐ ದೃಢಪಡಿಸಿದೆ. ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಂಡ ಚಿನ್ನ ಸೇರಿದಂತೆ ಪ್ರಕರಣದಲ್ಲಿ ಒಟ್ಟು ವಶಪಡಿಸಿಕೊಳ್ಳಲಾದ ಮೊತ್ತ 17.29 ಕೋಟಿ ರೂ. ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT