ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮುಸ್ಲಿಂರಿಗಾಗಿ ಸಾಲ ಹೆಚ್ಚಳ ಮಾಡಿದೆ. ಪ್ರಸ್ತುತ ಬಜೆಟ್ ಇದನ್ನು ನಿರೂಪಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ರಾಜ್ಯದ GDP ಶೇ.23 ಮೀರಿದೆ. ಇಂದು ರಾಜ್ಯದ ಪ್ರತಿ ವ್ಯಕ್ತಿ ಮೇಲೆ ₹ 1 ಲಕ್ಷ ಸಾಲ ಹೊರಿಸಿದೆ ಎಂದು ಟೀಕಿಸಿದರು.
ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕಕ್ಕೆ ಅನ್ಯಾಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿತ್ತೂರು ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಕ್ಕೆ ಅಂಥದ್ದೇನೂ ಕೊಡುಗೆ ಕೊಟ್ಟಿಲ್ಲ. ಇದು ಬಜೆಟ್ ಅಲ್ಲಿ ಮಾಡಿದ ಘನ ಘೋರ ಅನ್ಯಾಯ ಎಂದು ಖಂಡಿಸಿದರು.
ಮುಸ್ಲಿಂ ಓಲೈಕೆ ಬಜೆಟ್: ರಾಜ್ಯ ಸರ್ಕಾರದ್ದು ಕೇವಲ ವೋಟ್ ಬ್ಯಾಂಕ್ ಗಾಗಿ ಮುಸ್ಲಿಂ ಓಲೈಕೆಯ ಬಜೆಟ್ ಆಗಿದೆ. ಬಜೆಟ್ ಪೂರ್ತಿ ಮುಸ್ಲಿಂ ಮಯವಾಗಿದೆ. ದಲಿತರು ಸೇರಿದಂತೆ ಬೇರೆಲ್ಲಾ ವರ್ಗದವರನ್ನು ಕಡೆಗಣಿಸಲಾಗಿದೆ. ಕೇಂದ್ರ ಸರ್ಕಾರ "ಸಬ್ ಕಾ ಸಾಥ್ ಸಬ್ ಕಾ ವಿಕಾಸ್" ಎನ್ನುತ್ತಿದ್ದರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಕೇವಲ "ಮುಸ್ಲಿಂ ವಿಕಾಸ್" ಮಾಡುತ್ತಿದೆ ಎಂದು ಆರೋಪಿಸಿದರು.
ಬುದ್ಧ, ಬಸವಣ್ಣ, ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಅವರ ಆದರ್ಶವನ್ನು ಉಲ್ಲೇಖಿಸಿ ಸರ್ವ ಸಮಾನತೆ ಬಜೆಟ್ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತೀರಿ ಆದರೆ, ಕೃತಿಯಲ್ಲಿ ನೋಡಿದರೆ ಮುಸ್ಲಿಂ ಒಂದೇ ವರ್ಗವನ್ನು ಓಲೈಸಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದೀರಿ. ಒಡೆದಾಳೋ ನೀತಿ ಅನುಸರಿಸುತ್ತಿದ್ದೀರಿ ಎಂದು ಸಿಎಂ ವಿರುದ್ಧ ಹರಿಹಾಯ್ದರು.
ಬೇರೆ ಗುತ್ತಿಗೆದಾರರಿಗೆ ಏಕಿಲ್ಲ ಮೀಸಲಾತಿ? ಸರ್ಕಾರಿ ಯೋಜನೆಯ ₹ 2 ಕೋಟಿ ವರೆಗಿನ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದೀರಿ. ಅದೇ ಉಳಿದವರಿಗೆ ಏಕಿಲ್ಲ? ಬೇರೆ ಬೇರೆ ವರ್ಗದ ಸಣ್ಣ ಪುಟ್ಟ ಗುತ್ತಿಗೆದಾರರಿಂದ ಕಿತ್ತು ಮುಸ್ಲಿಮರಿಗೆ ಮೀಸಲಾತಿ ಕೊಡುವ ಈ ಕ್ರಮವನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು. KIDB, KIADBಯಲ್ಲಿ ಶೇ.20 ಮೀಸಲು: KIDB, KIADBಯಲ್ಲಿ ಮುಸ್ಲಿಮರಿಗೆ ಶೇ. 20ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. KIADB ಜಾಗವೇ ಸಿಗುತ್ತಿಲ್ಲ. ಅಂಥದ್ದರಲ್ಲಿ ಇವರಿಗೇ ಶೇ.20ರಷ್ಟು ಕೊಟ್ಟರೆ ಉಳಿದವರು ಎಲ್ಲಿ ಹೋಗಬೇಕು? ಎಂದು ಸಚಿವರು ಪ್ರಶ್ನಿಸಿದರು.
ಮುಸಲ್ಮಾನರ ಮದುವೆಗೆ ₹ 50000 ನೆರವು ಘೋಷಿಸಿದ್ದಾರೆ. ಉಳಿದ ಜಾತಿ, ಜನಾಂಗದವರಿಗೆ ಏಕಿಲ್ಲ? ಅವರಿಗಷ್ಟೇ ಕೊಡಲು ಕರ್ನಾಟಕವೇನು ಪಾಕಿಸ್ತಾನವೇ? ಎಂದು ಪ್ರಶ್ನಿಸಿದರು.
ಖಬರಸ್ಥಾನಗಳಿಗೆ ₹ 150 ಕೋಟಿ: ಅದೆಷ್ಟೋ ಕಡೆ ನಮಗೆ ಸ್ಮಶಾನಗಳೇ ಇಲ್ಲ. ಜಾಗವಿಲ್ಲದಂತಹ ಪರಿಸ್ಥಿತಿಯಿದೆ. ಅಂಥದ್ದರಲ್ಲಿ ಖಬರಸ್ಥಾನಗಳ ಅಭಿವೃದ್ಧಿಗೆ 150 ಕೋಟಿ ಕೊಟ್ಟಿದ್ದಾರೆ. ಅಲ್ಪಸಂಖ್ಯಾತರ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ₹ 50 ಲಕ್ಷ: ಇನ್ನು, ರಾಜ್ಯದಲ್ಲಿ ಅಲ್ಪಸಂಖ್ಯಾತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ₹ 50 ಲಕ್ಷವಂತೆ. ಯಾವ ಸಂಸ್ಕೃತಿ? ಕುಕ್ಕರ್ ಬಾಂಬ್ ಸಿಡಿಸುವ ಅಥವಾ ನಮ್ಮ ಬ್ರದರ್ಸ್ ಎಂಬ ಸಂಸ್ಕೃತಿಗಾ? ಎಂದು ಸರ್ಕಾರವನ್ನು ಜೋಶಿ ತೀವ್ರ ತರಾಟೆಗೆ ತೆಗೆದುಕೊಂಡರು.
ವಿದೇಶಕ್ಕೆ ಹೋಗುವವರಿಗೆ 30ರಿಂದ 50 ಲಕ್ಷ: ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ತೆರಳುವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ₹30 ರಿಂದ 50 ಲಕ್ಷ ಸಹಾಯ ಧನ ಘೋಷಿಸಿದೆ. ಆದರೆ, ಇನ್ನುಳಿದ ಸಮುದಾಯದವರು ಏನು ಮಾಡಿದ್ದಾರೆ? ಇದೇನಾ ಸರ್ವ ಸಮಾನತೆ? ಎಂದು ಜೋಶಿ ಕಿಡಿ ಕಾರಿದರು.
ಮದರಸಾಗಳ ಅಭಿವೃದ್ಧಿಗೂ ಅನುದಾನ: ಅಲ್ಪಸಂಖ್ಯಾತ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ₹ 150 ಕೋಟಿ ಹಾಗೂ ಮದರಸಾಗಳ ಅಭಿವೃದ್ಧಿಗೆ ಅನುದಾನ ಕೊಟ್ಟಿದ್ದಾರೆ. ಆದರೆ, ಮದರಸಾಗಳಲ್ಲಿ ಏನು ನಡೆಯುತ್ತಿದೆ? ಎಂದು ಯಾವತ್ತಾದರೂ ನೋಡಿದ್ದೀರಾ? ಎಂದು ಪ್ರಶ್ನಿಸಿದರು.
ಮುಖ್ಯವಾಹಿನಿಗೆ ತರದೆ ವಂಚನೆ: ಅಲ್ಪಸಂಖ್ಯಾತರ ಮಕ್ಕಳನ್ನು, ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಶಿಕ್ಷಣಕ್ಕೆ ಒತ್ತು ಕೊಡಬೇಕು ನಿಜ. ಇದಕ್ಕೆ ನಮ್ಮ ವಿರೋಧವಿಲ್ಲ. ಅವರಿಗೆ ಮೂಲ ಸೌಲಭ್ಯ ಕಲ್ಪಿಸಿ, ಮೌಲ್ಯಾಧಾರಿತ, ಉನ್ನತ ಶಿಕ್ಷಣ ಕೊಟ್ಟು ಒಳ್ಳೇ ಜೀವನ ರೂಪಿಸಬೇಕು. ಅದು ಬಿಟ್ಟು ಗುತ್ತಿಗೆ, ಮೀಸಲಾತಿ, ಮದುವೆಗೆ ಪ್ರೋತ್ಸಾಹ ಧನ ಎಂದೆಲ್ಲಾ ಅವರನ್ನು ಇನ್ನೂ ಹಿಂದುಳಿದ ಸ್ಥಿತಿಯಲ್ಲೇ ನೋಡುವುದನ್ನು ಖಂಡಿಸುತ್ತೇನೆ ಎಂದು ಹೇಳಿದರು.