ಬೆಂಗಳೂರು: ಸಿಡಿಆರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಂಚಕಿ ಐಶ್ವರ್ಯಾಗೌಡಗೆ ಅಕ್ರಮವಾಗಿ ಮೊಬೈಲ್ ಕರೆಗಳ ವಿವರ ನೀಡಿದ ಆರೋಪದ ಮೇರೆಗೆ ಹೆಡ್ ಕಾನ್ ಸ್ಟೇಬಲ್ ಸೇರಿ ಇಬ್ಬರು ಪೊಲೀಸರನ್ನು ಬಂಧಿಸಲಾಗಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಕ್ಕೂರು ಪೊಲೀಸ್ ಠಾಣೆ ಹೆಡ್ ಕಾನ್ಸ್ಟೇಬಲ್ ಸುನೀಲ್ ಹಾಗೂ ಮಂಗಳವಾರಪೇಟೆಯ ಪವನ್ ಬಂಧಿತರಾಗಿದ್ದು, ವಂಚಕಿ ಐಶ್ವರ್ಯಾ ಗೌಡಳ ಸಂಪರ್ಕ ಜಾಲವನ್ನು ಶೋಧಿಸಿದಾಗ ಸಿಡಿಆರ್ ಕೃತ್ಯದ ಹಿಂದೆ ಹೆಡ್ ಕಾನ್ಸ್ಟೇಬಲ್ ಮತ್ತು ಇತರೆ ಸಿಬ್ಬಂದಿಯ ಪಾತ್ರ ಬಯಲಾಗಿದೆ. ಬ್ಯಾಟರಾಯನಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಭರತ್ ಎಸ್ ರೆಡ್ಡಿ ಅವರು ಕಳೆದ ತಿಂಗಳು ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಕ್ರಮವಾಗಿ ಮೊಬೈಲ್ ಕರೆಗಳ ವಿವರ (ಸಿಡಿಆರ್) ವನ್ನು ವಂಚನೆ ಪ್ರಕರಣದ ಆರೋಪಿ ಐಶ್ವರ್ಯಾ ಗೌಡ ಪಡೆದ ಕೇಸ್ನ ಸಂಬಂಧ ರಾಮನಗರ ಜಿಲ್ಲೆಯ ಪೊಲೀಸ್ ಕಾನ್ಸ್ಟೇಬಲ್ ಸೇರಿದಂತೆ ಇಬ್ಬರನ್ನು ವಿಜಯನಗರ ಉಪ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಪ್ರಸ್ತುತ ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆ ಸಲುವಾಗಿ ಈ ಇಬ್ಬರು ಆರೋಪಿಗಳನ್ನು ಆರು ದಿನಗಳ ಕಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಐಶ್ವರ್ಯ ವಿರುದ್ಧ ಐಪಿಸಿಯ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿಗಾಗಿ ಶಿಕ್ಷೆ) ಮತ್ತು ಸೆಕ್ಷನ್ 409 (ಸಾರ್ವಜನಿಕ ಸೇವಕರಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಜೊತೆಗೆ ಐಟಿ ಕಾಯ್ದೆಯ ಸೆಕ್ಷನ್ 72 ಮತ್ತು ದೂರಸಂಪರ್ಕ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಏನಿದು ಪ್ರಕರಣ?
ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಚಿನ್ನಾಭರಣ ವ್ಯಾಪಾರಿಗಳಿಗೆ ಕೋಟ್ಯಾಂತರ ರು. ಮೌಲ್ಯದ ಆಭರಣ ವಂಚಿಸಿದ ಆರೋಪ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಐಶ್ಪರ್ಯಗೌಡಳ ವಿರುದ್ಧ ಕೇಳಿ ಬಂದಿತ್ತು. ಈ ಸಂಬಂಧ ಬೆಂಗಳೂರಿನ ಚಂದ್ರಾಲೇಔಟ್, ರಾಜರಾಜೇಶ್ವರಿ ನಗರ ಹಾಗೂ ಮಂಡ್ಯ ನಗರ ಠಾಣೆಗಳಲ್ಲಿ ಐಶ್ವರ್ಯ ಗೌಡ ವಿರುದ್ಧ ಪ್ರಕರಣಗಳು ದಾಖಲಾಗಿವೆ. ತನ್ನ ವಂಚನೆ ಕೃತ್ಯದ ಸಂತ್ರಸ್ತರ ಬಗ್ಗೆ ಚಲನವಲದ ಮಾಹಿತಿ ಸಂಗ್ರಹಕ್ಕೆ ಪೊಲೀಸರ ನೆರವು ಪಡೆದಿದ್ದ ವಂಚಕಿ ಐಶ್ವರ್ಯಾ ಗೌಡ ಸಿಡಿಆರ್ ಮಾಹಿತಿ ಪಡೆಯುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಎಸಿಪಿ ಚಂದನ್ ಕುಮಾರ್ ತಂಡ ನಿಯೋಜನೆ
ಸಿಡಿಆರ್ ಪ್ರಕರಣದ ತನಿಖೆ ಕೈಗೆತ್ತಿಕೊಂಡಿರುವ ವಿಜಯನಗರ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡವು, ಐಶ್ವರ್ಯಗೌಡಳಿಂದ ಜಪ್ತಿಯಾಗಿದ್ದ ಮೊಬೈಲ್ಗಳನ್ನು ಪರಿಶೀಲಿಸಿದಾಗ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದೆ. ಕೊನೆಗೆ ತಾಂತ್ರಿಕ ಮಾಹಿತಿ ಆಧರಿಸಿ ಸುನೀಲ್ ಹಾಗೂ ಮಧ್ಯವರ್ತಿ ಪವನ್ನನ್ನು ಎಸಿಪಿ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಈಗ್ಗೆ ಕೆಲ ವರ್ಷಗಳಿಂದ ಚನ್ನಪಟ್ಟಣ ನಗರದ ಮಂಗಳವಾರಪೇಟೆಯ ಪವನ್ ಮೂಲಕ ಐಶ್ವರ್ಯಗೌಡಳಿಗೆ ಹೆಡ್ ಕಾನ್ಸ್ಟೇಬಲ್ ಸುನೀಲ್ ಪರಿಚಯವಾಗಿದೆ. ಈ ಗೆಳೆತನದಲ್ಲಿ ಹಣದಾಸೆ ತೋರಿಸಿ ಸಿಡಿಆರ್ ಅನ್ನು ಐಶ್ವರ್ಯಗೌಡಳಿಗೆ ಸುನೀಲ್ ನೀಡುತ್ತಿದ್ದ. ಅಪರಾಧ ಪ್ರಕರಣಗಳ ತನಿಖೆ ವೇಳೆ ಐಶ್ವರ್ಯ ನೀಡುವ ಬೇರೆಯವರ ಮೊಬೈಲ್ ಸಂಖ್ಯೆಯನ್ನು ಸೇರಿಸಿ ಸಿಡಿಆರ್ ಅನ್ನು ಆತ ಪಡೆಯುತ್ತಿದ್ದ. ಬಳಿಕ ಪವನ್ ಮೂಲಕ ಆಕೆಗೆ ಸುನಿಲ್ ತಲುಪಿಸುತ್ತಿದ್ದ. ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಕೆಲಸ ಮಾಡಿದ್ದ ಸುನೀಲ್, ಪ್ರಸುತ್ತ ಅಕ್ಕೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.