ಹಂಪಿ: ಇತ್ತೀಚೆಗೆ ಕೊಪ್ಪಳ ಜಿಲ್ಲೆಯಲ್ಲಿ ವಿದೇಶಿ ಪ್ರಜೆ ಸೇರಿದಂತೆ ಇಬ್ಬರು ಮಹಿಳೆಯರ ಮೇಲೆ ನಡೆದ ಅತ್ಯಾಚಾರ ಮತ್ತು ಒಡಿಶಾ ಪ್ರವಾಸಿಯ ಕೊಲೆಯಿಂದಾಗಿ ಈ ಬಾರಿ ಹಂಪಿ ಹೋಳಿ ಆಚರಣೆಯ ಮೇಲೆ ಕರಿನೆರಳು ಬೀರಿದೆ. ಮಾರ್ಚ್ 15 ರಂದು ಹೋಳಿ ಆಚರಿಸಲು ಹಂಪಿಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.
ಕೊಪ್ಪಳ ಘಟನೆಯ ನಂತರ, ಅನೇಕ ಪ್ರವಾಸಿಗರು, ವಿಶೇಷವಾಗಿ ವಿದೇಶಿಯರು, ಹಂಪಿಯಲ್ಲಿನ ಲಾಡ್ಜ್ಗಳು, ಹೋಂಸ್ಟೇಗಳು ಮತ್ತು ಇತರ ಪ್ರವಾಸೋದ್ಯಮ ಸಂಸ್ಥೆಗಳೊಂದಿಗೆ ತಮ್ಮ ಬುಕಿಂಗ್ಗಳನ್ನು ರದ್ದುಗೊಳಿಸಿದ್ದಾರೆ.
ಹಂಪಿಯಲ್ಲಿ ಹೋಳಿಯಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಹಲವು ಗುಂಪುಗಳಿವೆ. ಆದರೆ ಪ್ರವಾಸಿಗರ ಹರಿವು ಕಡಿಮೆಯಾಗಿರುವುದರಿಂದ ಅವರು ಈಗ ಅಷ್ಟೊಂದು ಉತ್ಸಾಹ ಹೊಂದಿಲ್ಲ. ವಿಜಯನಗರದ ಹಿಂದಿನ ಆಡಳಿತಗಾರರು ಜನಪ್ರಿಯಗೊಳಿಸಿದ ಹೋಳಿಯಲ್ಲಿ ಭಾಗವಹಿಸಲು 2,000 ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ಹಂಪಿಗೆ ಭೇಟಿ ನೀಡುತ್ತಿದ್ದರು ಎಂದು ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ವಿ ಹೇಳಿದರು.
ಹಂಪಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳನ್ನು ತಡೆಯಲು ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾರ್ಚ್ 15 ರಂದು ಹೋಳಿಗಾಗಿ ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಲ್ಲಾ ಪ್ರವಾಸಿ ಸ್ಥಳಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.