ಬೆಂಗಳೂರು: ಸಬ್ಇನ್ಸ್ಪೆಕ್ಟರ್ ಪತ್ನಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಗೋವಿಂದಪುರ ಪೊಲೀಸ್ ಠಾಣೆ ವ್ಯಾಪ್ತಿಯ ಎಚ್ಬಿಆರ್ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಕೆ.ಜಿ.ಹಳ್ಳಿ ಠಾಣೆಯ ಪಿಎಸ್ಐ ನಾಗರಾಜ್ ಅವರ ಪತ್ನಿ ಶಾಲಿನಿ ಆತ್ಮಹತ್ಯೆಗೆ ಶರಣಾದ ಮಹಿಳೆಯಾಗಿದ್ದಾರೆ. ಸೋಮವಾರ ರಾತ್ರಿ ಎಚ್ಬಿಆರ್ ಬಡಾವಣೆಯಲ್ಲಿರುವ ತಮ್ಮ ಮನೆಯಲ್ಲೇ ಶಾಲಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಶಾಲಿನಿ ಮೊದಲ ಪತಿಗೆ ವಿಚ್ಛೇದನ ನೀಡಿ ಬಳಿಕ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿರುವ ನಾಗರಾಜ್ ಅವರನ್ನು ಎರಡನೇ ವಿವಾಹವಾಗಿದ್ದರು.
ಶಾಲಿನಿ ಹಾಗೂ ಪಿಎಸ್ಐ ನಾಗರಾಜ್ ಇಬ್ಬರೂ ಇಳಕಲ್ ಮೂಲದವರು. ಮೃತ ಶಾಲಿನಿಗೆ 7 ವರ್ಷದ ಮಗು ಇದೆ. ಇಬ್ಬರು ಹೈಸ್ಕೂಲ್ನಿಂದಲೇ ಸ್ನೇಹಿತರಾಗಿದ್ದರು. ನಂತರ ಶಾಲಿನಿ ಎಂಎಸ್ಸಿ ಹಾಗೂ ನಾಗರಾಜ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಆ ಬಳಿಕ ನಾಗರಾಜ್ ಬೆಂಗಳೂರಿನಲ್ಲಿ ಪಿಎಸ್ಐ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರು. ಅದೇ ವೇಳೆ ಶಾಲಿನಿ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ನಾಗರಾಜ್ಗೆ ಪಿಎಸ್ಐ ಪರೀಕ್ಷೆ ತಯಾರಿಗೆ ಆರ್ಥಿಕ ಸಹಾಯ ಕೂಡ ಮಾಡುತ್ತಿದ್ದರು ಎನ್ನಲಾಗಿದೆ.
ಹೀಗೆ ಮುಂದುವರಿಯುತ್ತಾ ಇಬ್ಬರ ಸ್ನೇಹ ಪ್ರೀತಿಗೆ ತಿರುಗಿತ್ತು. 2020ರಲ್ಲಿ ಪಿಎಸ್ಐ ಪರೀಕ್ಷೆ ಪಾಸ್ ಮಾಡಿದ್ದ ನಾಗರಾಜ್, ಶಾಲಿನಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದ. ಈ ಸಂಬಂಧ ಮದುವೆ ಆಗದೆ ಮೋಸ ಮಾಡುತ್ತಿದ್ದಾನೆಂದು ಕೋಣನಕುಂಟೆ ಠಾಣೆಯಲ್ಲಿ ನಾಗರಾಜ್ ವಿರುದ್ಧ ಶಾಲಿನಿ ದೂರು ನೀಡಿದ್ದರು. ಆಗ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸಿದ್ದರು. ನಂತರ ನಾಗರಾಜ್ ಶಾಲಿನಿಯನ್ನು ವಿವಾಹವಾಗಿ ಎಚ್ಬಿಆರ್ ಲೇಔಟ್ನಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಇಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಇತ್ತು. ಆದರೆ, ಕೆಲ ತಿಂಗಳಿಂದ ಕೌಟುಂಬಿಕ ವಿಚಾರವಾಗಿ ಇಬ್ಬರ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ.
ಶಾಲಿನಿ, ನಿನ್ನೆ ರಾತ್ರಿ ಕೂಡ ರೈಲಿಗೆ ಸಿಕ್ಕಿ ಸಾಯ್ತೇನೆಂದು ಹೇಳಿ ಮನೆಯಿಂದ ಹೊರಟಿದ್ದರು. ಈ ವೇಳೆ ಹೊಯ್ಸಳ ಸಿಬ್ಬಂದಿ ಶಾಲಿನಿ ಅವರನ್ನ ರಕ್ಷಿಸಿ ಮನೆಗೆ ಬಿಟ್ಟು ತೆರಳಿದ್ದರು. ಆ ಬಳಿಕ ಶಾಲಿನಿ ಮನೆಯಲ್ಲೇ ಆತ್ಮಹ ತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಸಂಬಂಧ ಗೋವಿಂದಪುರ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.