ಬೆಂಗಳೂರು: ಓಲಾದ ಕೃತಕ ಬುದ್ಧಿಮತ್ತೆ(AI) ವಿಭಾಗದ ಕ್ರುಟ್ರಿಮ್ನಲ್ಲಿ ಮೆಷಿನ್ ಲರ್ನಿಂಗ್ ಎಂಜಿನಿಯರ್ ಆಗಿದ್ದ 24 ವರ್ಷದ ನಿಖಿಲ್ ಸೋಮವಂಶಿ ಅವರು ಆತ್ಮಹತ್ಯೆಗೂ ಮುನ್ನ, ತಾನು ಅಪಘಾತದಲ್ಲಿ ಮೃತಪಟ್ಟಿರುವುದಾಗಿ ಇತರರಿಗೆ ತಿಳಿಸುವಂತೆ ತನ್ನ ರೂಮ್ಮೇಟ್ಗೆ ದುಃಖಕರ ಸಂದೇಶ ಕಳುಹಿಸಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಮಹಾರಾಷ್ಟ್ರದ ಜಲಗಾಂವ್ ಮೂಲದ ಸೋಮವಂಶಿ, ಮೇ 7 ರ ಸಂಜೆ ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನಲ್ಲಿರುವ ತಮ್ಮ ರೂಮ್ ತೊರೆದಿದ್ದು, ಅವರ ಮೃತದೇಹ ಮೇ 8ರಂದು ಅಗರ ಕೆರೆಯಲ್ಲಿ ಪತ್ತೆಯಾಗಿತ್ತು. ಆತ್ಮಹತ್ಯೆಗೆ ಕಂಪನಿಯ ಕಠಿಣ ಕೆಲಸದ ವಾತಾವರಣ ಮತ್ತು ಕಿರುಕುಳ ನೀಡುತ್ತಿದ್ದ ಮ್ಯಾನೇಜರ್ ಕಾರಣ ಎಂದು ಆರೋಪಿಸಲಾಗಿದೆ.
"ಈ ಪ್ರಕರಣ ಮೇ 7 ರಂದು ವರದಿಯಾಗಿದೆ. ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ನಾವು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದೇವೆ" ಎಂದು ಉಪ ಪೊಲೀಸ್ ಆಯುಕ್ತ(ಬೆಂಗಳೂರು ಆಗ್ನೇಯ) ಸಾರಾ ಫಾತಿಮಾ ಹೇಳಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.
ಈ ಘಟನೆ ಎರಡು ವಾರಗಳ ಹಿಂದೆ ನಡೆದಿದ್ದರೂ, ಸೋಮವಂಶಿಯವರ ಸಾವನ್ನು ಕ್ರುಟ್ರಿಮ್ನಲ್ಲಿನ ಕೆಲಸದ "ತೀವ್ರ ಕೆಲಸದ ಒತ್ತಡ," ಮೌಖಿಕ ನಿಂದನೆ ಮತ್ತು AI ಸಂಸ್ಥೆಯಲ್ಲಿನ ಅಧಿಕಾರ ದುರುಪಯೋಗವನ್ನು ವಿವರಿಸಿದೆ.
ಆಗಸ್ಟ್ 2024 ರಲ್ಲಿ ಕ್ರುಟ್ರಿಮ್ಗೆ ಫ್ರೆಶರ್ ಆಗಿ ಸೇರಿದ್ದ ಸೋಮವಂಶಿ ಅವರಿಗೆ ಇಬ್ಬರು ಸಹೋದ್ಯೋಗಿಗಳ ರಾಜೀನಾಮೆಯ ನಂತರ ಟೀಂ ಲೀಡ್ ಹುದ್ದೆ ವಹಿಸಲಾಗಿದೆ ಎಂದು ರೆಡ್ಡಿಟ್ ಬಳಕೆದಾರರು ಹೇಳಿಕೊಂಡಿದ್ದಾರೆ.
ರಾಜ್ಕಿರಣ್ ಪನುಗಂಟಿ ಎಂದು ಗುರುತಿಸಲಾದ ಅಮೆರಿಕ ಮೂಲದ ಮ್ಯಾನೇಜರ್ ಜೂನಿಯರ್ ಸಿಬ್ಬಂದಿಗೆ ನಿಯಮಿತವಾಗಿ ನಿಂದಿಸುತ್ತಿದ್ದರು ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್ ನಲ್ಲಿ ಆರೋಪಿಸಲಾಗಿದೆ.
ಎಂಜಿನಿಯರ್ ಸಾವಿನ ನಂತರವೂ ಕಂಪನಿಯಲ್ಲಿ ಯಾವುದೇ ಆತ್ಮಾವಲೋಕನ ಇರಲಿಲ್ಲ ಮತ್ತು ಘಟನೆಯ ಬಗ್ಗೆ ಚರ್ಚಿಸದಂತೆ ನೌಕರರಿಗೆ ಎಚ್ಚರಿಕೆ ನೀಡಲಾಯಿತು ಎಂದು ಆರೋಪಿಸಲಾಗಿದೆ. ಆಂತರಿಕ ಕೆಲಸದ ವಾತಾವರಣವನ್ನು ಬಳಕೆದಾರರು "ಕರುಣಾಜನಕ" ಎಂದು ಬಣ್ಣಿಸಿದ್ದಾರೆ.
ಮ್ಯಾನೇಜರ್ ರಾಜ್ಕಿರಣ ಪನುಗಂಟಿ ಹೊಸಬರನ್ನು ದಬ್ಬಾಳಿಕೆಯ ಧಾಟಿಯಲ್ಲಿ ಮಾತನಾಡಿಸುತ್ತಿದ್ದರು. ಇದರಿಂದ ಕಠಿಣ ವಾತಾವರಣ ಸೃಷ್ಟಿಯಾಗಿತ್ತು. ಮ್ಯಾನೇಜರ್ನ ವರ್ತನೆಯಿಂದ ಬೇಸತ್ತು ಹಲವರು ಕೆಲಸಕ್ಕೆ ರಾಜೀನಾಮೆ ನೀಡಿದರು ಎಂದು ರೆಡ್ಡಿಟ್ನಲ್ಲಿ ಕೆಲ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
‘ನಿಖಿಲ್ ಸಾವಿನ ನಂತರವೂ ಮ್ಯಾನೇಜರ್ ಉದ್ಯೋಗಿಗಳನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದಾರೆ. ಸಂಸ್ಥೆಯ ಉದ್ಯೋಗಿಗಳು ತಮ್ಮ ಹೆಸರನ್ನು ಹೇಳಲು ಇಷ್ಟಪಡುತ್ತಿಲ್ಲ. ಆದರೆ, ಮ್ಯಾನೇಜರ್ ಬಹಳ ದಿನಗಳಿಂದ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಕಿರಿಯ ಉದ್ಯೋಗಿಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಅವರಿಗೆ ಏನೂ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆʼ ಎಂದು ಆರೋಪಿಸಿದ್ದಾರೆ.