ಬಸವರಾಜ ಬೊಮ್ಮಾಯಿ 
ರಾಜ್ಯ

ಸಿಎಂ ಸಿದ್ದರಾಮಯ್ಯ ಮಧ್ಯೆ ಪ್ರವೇಶಿಸಲಿ; ಪ್ರತಿ ಟನ್ ಕಬ್ಬಿಗೆ 3,500 ರೂ ದರ ನಿಗದಿ ಮಾಡಲಿ: ಬಸವರಾಜ ಬೊಮ್ಮಾಯಿ

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಗಾರರು ಸತತ ಏಳನೇ ದಿನವೂ ಖರೀದಿ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಮಧ್ಯಪ್ರವೇಶಿಸಿ ಕಬ್ಬು ಬೆಳೆಗಾರರು ಬೇಡಿಕೆ ಇಟ್ಟಿರುವಂತೆ ಪ್ರತಿ ಟನ್‌ ಕಬ್ಬಿಗೆ 3,500 ರೂ. ದರ ನಿಗದಿಯಾಗುವಂತೆ ನೋಡಿಕೊಳ್ಳಿ ಎಂದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಬುಧವಾರ ಒತ್ತಾಯಿಸಿದ್ದಾರೆ.

ರೈತರ ಬೇಡಿಕೆಯನ್ನು ಈಡೇರಿಸಲು ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ ಕಬ್ಬಿಗೆ 3,300 ರೂ.ಗಳನ್ನು ಪಾವತಿಸಿದರೆ, ರಾಜ್ಯ ಸರ್ಕಾರವು ಪ್ರತಿ ಟನ್‌ಗೆ 200 ರೂ.ಗಳನ್ನು ನೀಡಬೇಕು. ಹಲವಾರು ಸಚಿವರು ಸಕ್ಕರೆ ವ್ಯವಹಾರದಲ್ಲಿ 'ಸ್ವಂತ ಹಿತಾಸಕ್ತಿಗಳನ್ನು ಹೊಂದಿದ್ದಾರೆ'. ಹೀಗಾಗಿ, ಮುಖ್ಯಮಂತ್ರಿಗಳೇ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಅವರು ಸೂಚಿಸಿದರು.

ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಕಬ್ಬು ಬೆಳೆಗಾರರು ಸತತ ಏಳನೇ ದಿನವೂ ಖರೀದಿ ಬೆಲೆಯನ್ನು ಹೆಚ್ಚಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಹಾವೇರಿ ಮತ್ತು ಇತರ ಜಿಲ್ಲೆಗಳಲ್ಲಿ ಹರಡಿರುವ ರೈತರ ಪ್ರತಿಭಟನೆಗೆ ವಿವಿಧ ರೈತ ಸಂಘಗಳು, ಸಂಘಟನೆಗಳು, ವಿರೋಧ ಪಕ್ಷ ಬಿಜೆಪಿ, ವಿದ್ಯಾರ್ಥಿಗಳು ಸೇರಿದಂತೆ ಇತರರಿಂದ ಬೆಂಬಲ ವ್ಯಕ್ತವಾಗಿದೆ. ಮಂಗಳವಾರ ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನಾ ನಿರತ ರೈತರು ಕೆಲವು ಪ್ರಮುಖ ಮಾರ್ಗಗಳನ್ನು ತಡೆದಿದ್ದಾರೆ ಎಂದು ವರದಿಯಾಗಿದೆ.

'ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿ ಮಾಡುವಂತೆ ನಾನು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದೇನೆ. ಆದರೆ, ಸಿಎಂ ರೈತರ ಬಗ್ಗೆ ಅಸಡ್ಡೆ ತೋರುತ್ತಿದ್ದಾರೆ ಮತ್ತು ತಮ್ಮ ಹುದ್ದೆಯನ್ನು ಉಳಿಸಿಕೊಳ್ಳಲು ರಾಜಕೀಯ ಲೆಕ್ಕಾಚಾರಗಳಲ್ಲಿ ನಿರತರಾಗಿದ್ದಾರೆ. ಇದರಿಂದಾಗಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಅವರಿಗೆ ಸಮಯವಿಲ್ಲ' ಎಂದು ಬೊಮ್ಮಾಯಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರೈತರು ಎದುರಿಸುತ್ತಿರುವ ಸಮಸ್ಯೆಗಳು ಪ್ರತಿ ವರ್ಷವೂ ಮರುಕಳಿಸುತ್ತಿವೆ. ಕೇಂದ್ರ ಸರ್ಕಾರವು ಎಫ್ಆರ್‌ಪಿ (Fair and Remunerative Price) ನಿಗದಿಪಡಿಸಿದ ನಂತರ, ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮತ್ತು ವಿದ್ಯುತ್‌ನಂತಹ ಉಪ ಉತ್ಪನ್ನಗಳನ್ನು ಉತ್ಪಾದಿಸುತ್ತವೆ. ಇದರಿಂದ ಹೆಚ್ಚುವರಿ ಆದಾಯ ಗಳಿಸುತ್ತಿವೆ. ಆದ್ದರಿಂದ, ರೈತರು ಕೇಳುವ ಬೆಲೆಯನ್ನು ಪಾವತಿಸಲು ಅವುಗಳಿಗೆ ಸಾಧ್ಯವಿದೆ' ಎಂದು ಹೇಳಿದರು.

ಕಬ್ಬಿನ ಖರೀದಿ ಬೆಲೆ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ಕಾನೂನಿನಡಿಯಲ್ಲಿ ಅಧಿಕಾರವಿದೆ ಮತ್ತು ರೈತರ ಬೇಡಿಕೆಗೆ ಅನುಗುಣವಾಗಿ ದರವನ್ನು ನಿರ್ಧರಿಸುವ ಆದೇಶವನ್ನು ಹೊರಡಿಸಬೇಕು ಎಂದು ಅವರು ಹೇಳಿದರು.

ಸರ್ಕಾರ ಈ ಸಮಸ್ಯೆಯನ್ನು ಎರಡು ರೀತಿಯಲ್ಲಿ ಪರಿಹರಿಸಬಹುದು. ಸಕ್ಕರೆ ಮತ್ತು ಇತರ ಉಪ ಉತ್ಪನ್ನಗಳ ಮೂಲಕ ರಾಜ್ಯವು ಸುಮಾರು 27,000 ಕೋಟಿ ರೂ.ಗಳನ್ನು ಗಳಿಸುತ್ತದೆ. ಇದರಿಂದ ಸರ್ಕಾರ ಪ್ರತಿ ಟನ್‌ಗೆ 200 ರೂ.ಗಳನ್ನು ನೀಡಬೇಕು ಮತ್ತು ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ 3,300 ರೂ.ಗಳನ್ನು ಪಾವತಿಸಬೇಕು. ಈ ರೀತಿಯಾಗಿ, ರೈತರು ಪ್ರತಿ ಟನ್‌ಗೆ ಒಟ್ಟು 3,500 ರೂ.ಗಳನ್ನು ಪಡೆಯಬಹುದು ಎಂದು ಹೇಳಿದರು.

'ಸಕ್ಕರೆ ಕಾರ್ಖಾನೆಗಳು ಸಹ ವಿದ್ಯುತ್ ಉತ್ಪಾದಿಸುತ್ತವೆ. ಮಹಾರಾಷ್ಟ್ರದಲ್ಲಿ ಕಾರ್ಖಾನೆ ಮಾಲೀಕರು ಪಿಪಿಎ (ವಿದ್ಯುತ್ ಖರೀದಿ ಒಪ್ಪಂದಗಳು) ಮಾಡಿಕೊಂಡಿದ್ದಾರೆ. ಅದರಡಿಯಲ್ಲಿ ಅವರು ಪ್ರತಿ ಯೂನಿಟ್‌ಗೆ 5.5 ರೂ. ಪಡೆಯುತ್ತಾರೆ. ಕರ್ನಾಟಕದಲ್ಲಿಯೂ ಇದೇ ರೀತಿಯ ಒಪ್ಪಂದಗಳನ್ನು ಮಾಡಿಕೊಂಡರೆ, ಸದ್ಯ ಪಾವತಿಸುತ್ತಿರುವ ಪ್ರತಿ ಯೂನಿಟ್‌ಗೆ 3 ರೂ. ಬದಲಿಗೆ, ಕಾರ್ಖಾನೆಗಳು ಪ್ರತಿ ಯೂನಿಟ್‌ಗೆ 5.5 ರೂ. ಗಳಿಸುತ್ತವೆ. ಈ ಹೆಚ್ಚುವರಿ ಆದಾಯವು ರೈತರಿಗೆ ಉತ್ತಮ ದರವನ್ನು ಪಾವತಿಸಲು ಸಹಾಯ ಮಾಡುತ್ತದೆ' ಎಂದರು.

ರಾಜ್ಯ ಸರ್ಕಾರವು ತನ್ನ ಅಧಿಕಾರವನ್ನು ಚಲಾಯಿಸಬೇಕು, ಕಾರ್ಖಾನೆ ಮಾಲೀಕರೊಂದಿಗೆ ಚರ್ಚೆ ನಡೆಸಬೇಕು ಮತ್ತು ರೈತರ ನ್ಯಾಯಯುತ ಬೇಡಿಕೆ ಪ್ರಕಾರ ಟನ್‌ಗೆ 3,500 ರೂ. ದರ ನಿಗದಿಪಡಿಸಬೇಕು. ಇದು ವಿಳಂಬವಾದರೆ, ಅದು ರಾಜ್ಯದ ರೈತರ ಮೇಲೆ ತೀವ್ರ ಪರಿಣಾಮ ಬೀರುತ್ತದೆ, ಇದು ಅತ್ಯಂತ ದುರದೃಷ್ಟಕರ. ಸರ್ಕಾರ ತ್ವರಿತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.

'ಬಿಜೆಪಿ ಯಾವಾಗಲೂ ರೈತರ ಪರವಾಗಿ ನಿಂತು ಅವರ ಪರವಾಗಿ ಹೋರಾಡಿದೆ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಈಗಾಗಲೇ ಪ್ರತಿಭಟನೆಯಲ್ಲಿ ಭಾಗವಹಿಸಿರುವುದು ಈ ಬದ್ಧತೆಗೆ ಪುರಾವೆಯಾಗಿದೆ. ಇದರೊಂದಿಗೆ, ಇತರ ಸಂಬಂಧಿತ ವಿಷಯಗಳನ್ನು ಸಹ ಚರ್ಚಿಸಬೇಕು. ಕಬ್ಬು ಅರೆಯುವುದನ್ನು ತಕ್ಷಣವೇ ಪ್ರಾರಂಭಿಸಬೇಕು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

Cricket: ಪಂತ್‌ರಂತೆ ಆಡಲು ಪ್ರಯತ್ನಿಸಲ್ಲ, ಅವರ ಜೊತೆ ಆಡೋದು ದೊಡ್ಡ ಅನುಭವ: ಫಿಟ್ನೆಸ್ ಅಪ್ಡೇಟ್ ಕೊಟ್ಟ Dhruv Jurel

ಜೈ ಜವಾನ್, ಜೈ ಕಿಸಾನ್: ಐತಿಹಾಸಿಕ ಶತಕದ ಬಳಿಕ ಹೊಸ ಟ್ಯಾಟೂ ರಿವೀಲ್ ಮಾಡಿದ Dhruv Jurel

EVM ದೋಷ, ನನ್ನನ್ನೇ ವಿಜೇತನೆಂದು ಘೋಷಿಸಿ: ಕೊಲತ್ತೂರ್ ಸೋಲನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ MK Stalin!