ಎಲ್ಲ ಶೋಷಿತ ಸಮುದಾಯಗಳ ಧ್ವನಿಯಾಗಿ ಕಾಗಿನೆಲೆ ಪೀಠವನ್ನು ಸ್ಥಾಪಿಸಿದ್ದು ನಾನು. ನಾನು ಮೊದಲಿಂದಲೂ ಸನಾತನವಾದಿ ಮನುವಾದ RSSಗೆ ವಿರುದ್ಧ, ಜಾತಿ ವ್ಯವಸ್ಥೆ ಮತ್ತು ಮೌಡ್ಯಕ್ಕೆ ವಿರುದ್ಧ ಇದ್ದೇನೆ, ಅವರು ಸಮಾಜ ಮತ್ತು ಧರ್ಮವನ್ನು ಜಾತಿ ಹೆಸರಿನಲ್ಲಿ ವಿಭಜಿಸುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಬೆಂಗಳೂರಿನ ಗಾಂಧಿನಗರದಲ್ಲಿ ಪ್ರದೇಶ ಕುರುಬರ ಸಂಘ ಮತ್ತು ವಿದ್ಯಾರ್ಥಿನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಸಂಘದ ಕಟ್ಟಡದಲ್ಲಿ ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು. ಸಮಾಜವನ್ನು ಒಡೆದು ಜಾತಿ ವ್ಯವಸ್ಥೆ ರೂಪಿಸಿದ ಸಿದ್ಧಾಂತ RSS ನದ್ದು. ಈ ಸಿದ್ಧಾಂತ ಶ್ರಮಿಕ ಜಾತಿ, ವರ್ಗಗಳ ವಿರೋಧಿ. ಅದಕ್ಕೇ ನಾನು RSS ನ್ನು ಮೊದಲಿನಿಂದಲೂ ವಿರೋಧಿಸುತ್ತೇನೆ. ಇದೇ ಕಾರಣಕ್ಕೆ ಕಾಗಿನೆಲೆ ಪೀಠ ಎಲ್ಲ ಶೋಷಿತ ಸಮುದಾಯಗಳ ಪೀಠ ಆಗಬೇಕು ಎನ್ನುವುದನ್ನು ಪ್ರತಿಪಾದಿಸಿದ್ದೆ ಎಂದರು.
ನೂರು ವರ್ಷದ ಹಳೆಯ ಕಟ್ಟಡವನ್ನು ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರದೇಶ ಕುರುಬರ ಸಂಘದಿಂದ ಬೇಡಿಕೆ ಮತ್ತು ಒತ್ತಾಯ ಬಹಳ ವರ್ಷಗಳಿಂದ ಇತ್ತು. ಈಗ ಎಲ್ಲರನ್ನೂ ಒಪ್ಪಿಸಿ ಹಳೆ ಕಟ್ಟಡ ನೆಲಸಮ ಮಾಡಿ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕೂಡ ಆಗಿದೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ 18 ತಿಂಗಳಲ್ಲಿ ನೂತನ ಕಟ್ಟಡ ನಿರ್ಮಾಣ ಆಗಲಿದೆ ಎಂದು ಹೇಳಿದರು.
ಹಳೆ ಕಟ್ಟಡದಲ್ಲಿದ್ದ ಹಾಸ್ಟೆಲ್ ನಲ್ಲಿ ಓದಿದವರು ಒಳ್ಳೊಳ್ಳೆ ಅಧಿಕಾರಿಗಳಾಗಿದ್ದಾರೆ. ಜಡ್ಜ್ ಗಳೂ ಆಗಿದ್ದಾರೆ. ನಾನು 1983 ರಲ್ಲಿ ಶಾಸಕನಾಗಿ 1984 ರಲ್ಲಿ ಮಂತ್ರಿ ಆದೆ. ನಾನು ಸಾರಿಗೆ ಮಂತ್ರಿ ಆಗಿದ್ದಾಗ 1988 ರಲ್ಲೇ ಕನಕದಾಸರ 500ನೇ ಜಯಂತ್ಸೋವವನ್ನು ಆಚರಣೆ ಮಾಡಿಸಿದೆ.
ಇದೇ ಸಂದರ್ಭದಲ್ಲಿ ಸಮಾಜಕ್ಕೊಂದು ಗುರುಪೀಠ ಬೇಕು ಎಂದು ತೀರ್ಮಾನಿಸಿದೆ. ಆಗ ಸಂಘದ ಕಟ್ಟಡದ ಮೇಲೆ 3 ಕೋಟಿ ರೂಪಾಯಿ ಸಾಲ ಇತ್ತು. ಆ ಸಾಲದ ಸುಳಿಯಿಂದ ಸಂಘವನ್ನು ಬಿಡಿಸಿದ್ದು ನಾವು. ಇದು ಇತಿಹಾಸ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.
ನಾನು ರಾಜಕಾರಣಕ್ಕೆ ಬರದೇ ಹೋಗಿದ್ದರೆ ಕುರುಬ ಸಂಘದ ಕಟ್ಟಡವೂ ಉಳಿಯುತ್ತಿರಲಿಲ್ಲ, ಕಾಗಿನೆಲೆ ಪೀಠವೂ ಆಗುತ್ತಿರಲಿಲ್ಲ, ರಿಯಲ್ ಎಸ್ಟೇಟ್ ರೌಡಿಗಳಿಂದ ಬೈರಪ್ಪನ ಗುಡಿ ಮತ್ತು ಸಮಾಜದ ಭೂಮಿ, ಕಟ್ಟಡಗಳನ್ನು ಉಳಿಸಲು ಸಾಧ್ಯ ಆಗುತ್ತಿರಲಿಲ್ಲಎಂದರು.