ಬೆಂಗಳೂರ: "ಮುಖ್ಯಮಂತ್ರಿಗಳು ಐದು ವರ್ಷ ಇರುವುದಿಲ್ಲ ಎಂದು ನಾವುಗಳು ಹೇಳಿಲ್ಲ. ಅವರೇ ತಾನು ಐದು ವರ್ಷ ಇರುವುದಾಗಿ ಹೇಳಿದ್ದಾರೆ. ದೊಡ್ಡವರು ಹೇಳಿದ ಮೇಲೆ, ನಾವು ಚಿಕ್ಕವರು ಗೌರವದಿಂದ ಕೇಳಿಕೊಂಡು ನಮ್ರತೆಯಿಂದ ಇರಬೇಕು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಮಾರ್ಮಿಕವಾಗಿ ನುಡಿದಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳು ಸಿಎಂ ನುಡಿದಂತೆ ನಡೆಯುತ್ತಿದ್ದಾರಾ ಎಂದು ಕೇಳಿದಾಗ, "ಅವರು ಎಲ್ಲವನ್ನು ಹೇಳಿದ್ದಾರಲ್ಲ. ಮುಖ್ಯಮಂತ್ರಿಯವರ ಅಧಿಕಾರವನ್ನು ನಾವುಗಳು ಯಾರೂ ಪ್ರಶ್ನೆ ಮಾಡಿಲ್ಲ. ಸಂಪುಟ ಪುನಾರಚನೆ ಬಗ್ಗೆ ಅವರೇ ಹೇಳಿದ್ದಾರೆ" ಎಂದಷ್ಟೇ ಹೇಳಿದರು.
ಅಧಿಕಾರ ಹಸ್ತಾಂತರದ ಬಗ್ಗೆ ಚರ್ಚೆಯಾಗುತ್ತಿದ್ದು, ಈ ಬಗ್ಗೆ ಚರ್ಚಿಸಲು ಖರ್ಗೆ ಅವರನ್ನು ಭೇಟಿ ಮಾಡುತ್ತೀರಾ ಎಂದು ಕೇಳಿದಾಗ, "ಅನಗತ್ಯವಾಗಿ ಊಹಾಪೋಹ ಸೃಷ್ಟಿಸಬೇಡಿ. ಕಾಂಗ್ರೆಸ್ ಪಕ್ಷಕ್ಕೆ ಹಿರಿಯರ ಸಲಹೆ, ಮಾರ್ಗದರ್ಶನ ಅವಶ್ಯಕತೆ ಇದೆಯೋ ಆಗ ನಾನು ಭೇಟಿ ಮಾಡುವೆ. ಅವರು ನಮ್ಮ ನಾಯಕರು, ನಮ್ಮ ಪಕ್ಷದ ಅಧ್ಯಕ್ಷರು. ಅವರು ಬಂದಾಗ ಅವರನ್ನು ಭೇಟಿ ಮಾಡುವುದು, ನಮ್ಮ ಕರ್ತವ್ಯ. ಶಿಷ್ಟಾಚಾರದ ಬಗ್ಗೆ ನನಗೆ ಬೇರೆಯವರಿಗಿಂತ ಹೆಚ್ಚಿನ ಅರಿವಿದೆ. ಅವರು ನಮ್ಮ ರಾಜ್ಯದವರೇ ಆದರೂ ಅವರ ಹಿರಿತನ ಹಾಗೂ ಹುದ್ದೆಗೆ ನಾವು ಗೌರವ ನೀಡಬೇಕು" ಎಂದು ತಿಳಿಸಿದರು.
"ವಿಧಾನ ಪರಿಷತ್ ಪದವೀಧರ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿ ಘೋಷಣೆಗೆ ಪ್ರಕ್ರಿಯೆ ಆರಂಭಿಸಿದ್ದು, ಈ ವಿಚಾರವಾಗಿ ಗುರುವಾರ ವಿಧಾನ ಪರಿಷತ್ ಸದಸ್ಯರೊಂದಿಗೆ ಚರ್ಚೆ ಮಾಡಿರುವೆ. ನೀವುಗಳು ಚುನಾವಣೆ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಹೇಳಿರುವೆ. ಅವರೆಲ್ಲರೂ ಜವಾಬ್ದಾರಿ ಪಡೆದು ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಮಂತ್ರಿಗಳಿಗೂ ಜವಾಬ್ದಾರಿ ನೀಡಬೇಕಿದೆ. ಇನ್ನು ಪರಿಷತ್ ಸಭಾಧ್ಯಕ್ಷರು ಹಾಗೂ ಉಪಸಭಾಧ್ಯಕ್ಷರ ಆಯ್ಕೆ ವಿಚಾರವಾಗಿ ಚರ್ಚೆ ಮಾಡಿರುವೆ" ಎಂದು ತಿಳಿಸಿದರು.
ಪರಪ್ಪನ ಅಗ್ರಹಾರಕ್ಕೆ ಹೋಗಿ ಶಾಸಕರನ್ನು ಭೇಟಿಯಾದೆ
"ನಾನು ಶುಕ್ರವಾರ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ ನಮ್ಮ ಶಾಸಕರನ್ನು ಭೇಟಿ ಮಾಡಿರುವೆ. ರಾಜಕೀಯ ಕಾರಣಗಳಿಗೆ ಅವರನ್ನು ಜೈಲಿಗೆ ಹಾಕಲಾಗಿದೆ" ಎಂದು ಹೇಳಿದರು.
ಸಿಎಂ ಅವರು ದೂರವಾಣಿ ಮೂಲಕ ಖರ್ಗೆ ಅವರ ಭೇಟಿಗೆ ಸಮಯ ಕೇಳಿದ್ದು, ನಾಳೆ ಸಮಯ ನೀಡಿದ್ದಾರಂತೆ ಎಂದು ಕೇಳಿದಾಗ, "ಅದರಲ್ಲಿ ತಪ್ಪೇನಿದೆ? ಅವರು ಮಾತನಾಡಬಾರದೇ? ಮುಖ್ಯಮಂತ್ರಿಗಳು ಎಐಸಿಸಿ ಅಧ್ಯಕ್ಷರ ಜೊತೆ ಮಾತನಾಡುವುದಿದ್ದರೆ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನಿದೆ" ಎಂದರು.
ಯಾವುದೇ ಗೊಂದಲ ಇಲ್ಲ:
ಸಾಕಷ್ಟು ಗೊಂದಲ ಸೃಷ್ಟಿಯಾಗಿದೆ ಎಂದು ಕೇಳಿದಾಗ, "ಯಾವ ಗೊಂದಲವೂ ಇಲ್ಲ. ಗೊಂದಲ ಆಗಿರುವುದು ಕೇವಲ ಮಾಧ್ಯಮಗಳಿಗೆ ಮಾತ್ರ. ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಯಾವುದೇ ಗೊಂದಲ ಇಲ್ಲ. ಎಐಸಿಸಿ ನಾಯಕರ ಮಾತಿಗೆ ಬದ್ಧವಿರುವುದಾಗಿ ಸಿಎಂ ಹೇಳಿದ್ದಾರೆ. ನಾವು ಕೂಡ ಅವರ ಮಾತಿಗೆ ಬದ್ಧ ಎಂದು ಈಗಾಗಲೇ ಹೇಳಿದ್ದೇವೆ. ಇದರಲ್ಲಿ ಗೊಂದಲ ಏನಿದೆ?" ಎಂದು ಕೇಳಿದರು.
ಆಪ್ತ ಶಾಸಕರೊಂದಿಗೆ ಸಮಾಲೊಚನೆ
ಅಧಿಕಾರ ಹಸ್ತಾಂತರದ ಬಗ್ಗೆ ಊಹಾಪೋಹಗಳ ನಡುವೆ ಡಿಸಿಎಂ ಡಿಕೆ ಶಿವಕುಮಾರ್, ಆಪ್ತರಾದ ಸಿ ಪಿ ಯೋಗೇಶ್ವರ್, ಪ್ರಕಾಶ್ ಕೋಳಿವಾಡ್, ಯಾಸೀರ್ ಪಠಾಣ್, ಶ್ರೀನಿವಾಸ್ ಮಾನೆ, ಎಂಎಲ್ಸಿ ದಿನೇಶ್ ಗೂಳಿಗೌಡ, ಮುಖಂಡ ಆನಂದಗಡ್ಡದೇವರ ಮಠ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಹಾಗೂ ಬಮೂಲ್ ಅಧ್ಯಕ್ಷ ಡಿ ಕೆ ಸುರೇಶ್ ಅವರನ್ನು ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ರಾತ್ರಿ ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.