ಕಲಬುರಗಿ: ನನ್ನ ಬಗ್ಗೆ ಅಪಪ್ರಚಾರ ಬೇಡ.. ಶೀಘ್ರದಲ್ಲೇ ವೃದ್ಧಾಶ್ರಮ ನಿರ್ಮಿಸುತ್ತೇನೆ ಎಂದು ಉತ್ತರ ಕರ್ನಾಟಕದ ಭಾಗದ ಸ್ವಯಂಘೋಷಿತ ದೇವಮಾನವ ರಷೀದ್ ಮುತ್ಯಾ ಗಳಗಳನೆ ಅತ್ತಿದ್ದಾರೆ.
ತಮ್ಮ ಮೇಲೆ ನಡೆದ ಹಲ್ಲೆ ಕುರಿತು ತಮ್ಮ ಭಕ್ತರ ಸಭೆಯಲ್ಲಿ ಮಾತನಾಡಿದ ರಷೀದ್ ಮುತ್ಯಾ, ತಮ್ಮ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಆರೋಪಗಳನ್ನು ನಂಬಬೇಡಿ.. ನಾನು ನನ್ನ ಹೆತ್ತ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ.. ನಾನು ವೃದ್ಧಾಶ್ರಮ ನಿರ್ಮಾಣ ಮಾಡುತ್ತೇನೆ.. ಎಂದು ಭಾವುಕರಾಗಿ ಹೇಳಿದ್ದಾರೆ.
ರಶೀದ್ ಮುತ್ಯಾ ಮೇಲೆ ಹಲ್ಲೆ
ಇನ್ನು ಕಲಬರುಗಿಯ ನಾರಾಯಣಪುರ ಗ್ರಾಮದಲ್ಲಿ ಸ್ವಯಂಘೋಷಿತ ದೇವಮಾನವ ರಷೀದ್ ಮುತ್ಯಾ ಮತ್ತು ಆತನ ಬೆಂಬಲಿಗರ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಈ ಹಲ್ಲೆಯನ್ನು ಮಣಿಕಂಠ ರಾಠೋಡ ಮತ್ತು ಅವರ ಬೆಂಬಲಿಗರು ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಇದೇ ನವೆಂಬರ್ 20ರಂದು ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ, ತಾಲೂಕು ಆಡಳಿತ ಮತ್ತು ಪೋಲಿಸ್ ಅಧಿಕಾರಿಗಳ ಸಮ್ಮುಖದಲ್ಲೇ ರಶೀದ್ ಮುತ್ಯಾ ಮತ್ತು ಅವರ ಕುಟುಂಬದ ಮೇಲೆ, ಮಣಿಕಂಠ ರಾಥೋಡ್ ನೇತೃತ್ವದಲ್ಲಿ ಕೆಲವು ಕಿಡಿಗೇಡಿಗಳು ಮರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಮೂಲಕ ಅವರು ಶಾಂತಿಯ ತೋಟವಾಗಿರುವ ಗ್ರಾಮದಲ್ಲಿ, ಗುಂಪು ಕೂಡಿಸಿಕೊಂಡು ಅಶಾಂತಿ ಉಂಟುಮಾಡಿ ಭಯದ ವಾತಾವರಣ ಸೃಷ್ಟಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಣಿಕಂಠ ರಾಥೋಡ್ ವಿರುದ್ಧ ಕ್ರಮಕ್ಕೆ ಆಗ್ರಹ
ಇದೇ ವೇಳೆ ಇದು ನಿಖರವಾಗಿ ದೌರ್ಜನ್ಯ ಮತ್ತು ಕ್ರಿಮಿನಲ್ ಅಪರಾಧ. ಹಲ್ಲೆ ಮಾಡಿದವರ ಮೇಲೆ ತಕ್ಷಣವೇ ಗಂಭೀರ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧನ ಮಾಡಬೇಕು. ಮೂಢನಂಬಿಕೆ ವಿಷಯದಲ್ಲಿ ಕಾನೂನು ತನ್ನ ಪ್ರಕಾರ ಕೆಲಸ ಮಾಡುತ್ತದೆ. ನಾವು ಕೂಡ ಮೂಢನಂಬಿಕೆ ವಿರುದ್ಧವೇ ಇದ್ದೇವೆ. ಆದರೆ 'ಮೂಢನಂಬಿಕೆ' ಎಂಬ ನೆಪದಲ್ಲಿ ಯಾರನ್ನಾದರೂ ಹಲ್ಲೆ ಮಾಡುವುದು ಸಂಪೂರ್ಣವಾಗಿ ಅಪರಾಧ ಯಾವುದೇ ಪರಿಸ್ಥಿತಿಯಲ್ಲೂ ಸಮರ್ಥನೀಯವಲ್ಲ ಎಂದು ತಾಲೂಕ ಟಿಪ್ಪು ಸುಲ್ತಾನ್ ಹೋರಾಟ ಸಮಿತಿ ಅಧ್ಯಕ್ಷ ಮೋದಿನ ಇನಾಮದಾರ ಕಿಡಿಕಾರಿದ್ದಾರೆ.
ಅಲ್ಲದೆ ಈ ಸಂಬಂಧ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹೇಳಿರುವ ಅವರು, 'ಈ ಪ್ರಕರಣದಲ್ಲಿ ಬಲಿಪಶುವಾಗಿ ಮುಸ್ಲಿಂ ಕುಟುಂಬವನ್ನು ಗುರಿ ಮಾಡಿರುವುದು ಸ್ಪಷ್ಟ ಸಾಮಾಜಿಕ ದೌರ್ಜನ್ಯ. ಇದನ್ನು ಯಾವ ರೀತಿಯಲ್ಲಿಯೂ ಸಹಿಸಲಾಗುವುದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಹಲ್ಲೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸ್ ಇಲಾಖೆ ಅದನ್ನು ತಕ್ಷಣ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ. ಯಾವುದೇ ಕಾರಣಕ್ಕೂ ಪ್ರಕರಣ ದಾಖಲಿಸಿ ಬಂಧನ ಜರುಗಿಸದಿದ್ದರೆ ನಾವು ಜೇವರ್ಗಿಯಲ್ಲಿ ತೀವ್ರ ಹೋರಾಟಕ್ಕೆ ಇಳಿಯುವುದಾಗಿ ಎಚ್ಚರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ
ಭೀಮ್ ಆರ್ಮಿ ಖಂಡನೆ
‘ಬಿಜೆಪಿ ಮತ್ತು ಹಿಂದೂ ಸಂಘಟನೆಯ ಮುಖಂಡರು ಜೇವರ್ಗಿ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ರಶೀದ್ ಮುತ್ಯಾ ಮೇಲೆ ಹಲ್ಲೆ ನಡೆಸಿ, ಕೊಲೆಗೆ ಯತ್ನ ಮಾಡಿದ್ದು ಖಂಡನೀಯ. ಹಲ್ಲೆ ಮಾಡಿದ ಇತರರನ್ನೂ ಪೊಲೀಸರು ಬಂಧಿಸಬೇಕು’ ಎಂದು ಭೀಮ್ ಆರ್ಮಿ ರಾಜ್ಯ ಘಟಕದ ಅಧ್ಯಕ್ಷ ಸಂತೋಷ ಬಿ.ಪಾಳಾ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾರಾಯಣಪುರ ಗ್ರಾಮದಲ್ಲಿ ಹಿಂದೂ– ಮುಸ್ಲಿಮರು ಸಹಬಾಳ್ವೆಯಿಂದ ಜೀವನ ನಡೆಸುತ್ತಿದ್ದಾರೆ. ಬಿಜೆಪಿ, ಹಿಂದೂ ಮುಖಂಡರು ಜಾತಿಜಾತಿ ನಡುವೆ ಬೆಂಕಿ ಹಚ್ಚುವ ಕೆಲಸ ಬಿಡಬೇಕು. ರಶೀದ್ ಮುತ್ಯಾ ಸುಳ್ಳು ಹೇಳಿ, ಜನರಿಗೆ ತೊಂದರೆ ಮಾಡಿದ್ದರೆ ಕೇಸ್ ದಾಖಲಿಸಲಿ. ಗುಂಪು ಕಟ್ಟಿಕೊಂಡು ಹೋಗಿ ಮುತ್ಯಾ ಮತ್ತು ಅವರ ಸಂಗಡಿಗರ ಮೇಲೆ ಹಲ್ಲೆ ಮಾಡಿ ಗ್ರಾಮದಿಂದ ಓಡಿಸಲು ಇವರಿಗೆ ಅಧಿಕಾರ ಕೊಟ್ಟಿದ್ದು ಯಾರು?’ ಎಂದರು.
ಶಿವಸೇನಾ ಕಿಡಿ
ಶಿವಸೇನಾ ಕರ್ನಾಟಕದ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಸುದ್ದಿಗೋಷ್ಟಿಯನ್ನ ನಡೆಸಿ, ಕಲ್ಯಾಣ ಕರ್ನಾಟಕ ಭಾಗದಲ್ಲಿ ರಶೀದ್ ನಾರಾಯಣ ಪುರ ಮುತ್ಯಾ ಕಳೆದ ಹಲವು ವರ್ಷಗಳಿಂದ ದರ್ಗಾ ನಿರ್ಮಾಣ ಮಾಡಿಕೊಂಡು, ಜನರನ್ನ ವಂಚಿಸುತ್ತಿರುವುದು ಬಯಲಾಗಿದೆ ಎಂದು ಹೇಳಿದರು. 'ಅಮವಾಸ್ಯೆ , ಹುಣ್ಣಿಮೆಯಂದು ಬರುವ ಜನರಿಗೆ ಮೌಢ್ಯವನ್ನ ಬಿತ್ತುವ ಕೆಲಸ ಮಾಡ್ತಿದ್ದಾರೆ. ಸಂತಾನ ಭಾಗ್ಯ ಕರುಣಿಸ್ತೆನೆ ಅಂತಾ ಔಷಧಿ ಕೊಟ್ಟು ಹಣ ವಸೂಲಿ ಮಾಡ್ತಿದ್ದಾರೆ.
ಅಲ್ಲಿಗೆ ಬಂದವರಿಂದಲೆ ಇವರೆ ಹೇಳಿ ಕೊಟ್ಟು ಮಾತನಾಡಿಸುತ್ತಿದ್ದಾರೆ. 20 ವರ್ಷದಿಂದ ಮಕ್ಕಳಾದವರಿಗೆ ಮಕ್ಕಳಾಗಿವೆಯಂತೆ. ಮಾತು ಬಾರದ ಬಾಲಕಿಗೆ ಮಾತು ಬಂದಿದೆಯಂತೆ ಈ ರೀತಿಯಾಗಿ ಹೇಳ್ತಿದ್ದಾರೆ. ಸ್ವಯಂ ಘೋಷಿತ ಸ್ವಾಮೀಜಿ ಅಂತಾ ಕರೆಯುವ ಸಚಿವ ಪ್ರಿಯಾಂಕ್ ಖರ್ಗೆ ಈ ನಕಲಿ ಮುತ್ಯಾ ಬಗ್ಗೆ ಗಮನಕ್ಕೆ ಬಂದಿಲ್ವಾ. ಅಥವಾ ರಶೀದ್ ಮುತ್ಯಾ ಮುಸ್ಲಿಂ ಎನ್ನುವ ಕಾರಣಕ್ಕೆ ಸುಮ್ಮನಿದ್ದಾರಾ ಸಚಿವರು ಎಂದು ಪ್ರಶ್ನಿಸಿದರು.